ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗೋಣ: ಓಮರ್ ಅಬ್ದುಲ್ಲಾ
ಕೋಲ್ಕತ್ತಾ, ಜುಲೈ 28: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ವಿರೋಧ ಪಕ್ಷಗಳೂ ಒಂದಾಗಬೇಕಿದೆ ಎಂದು ನ್ಯಾಶ್ನಲ್ ಕಾನ್ಫಿರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಕರೆ ನೀಡಿದ್ದಾರೆ.
ಎಲ್ಲಾ ವಿರೋಧ ಪಕ್ಷಗಳನ್ನೂ ಒಗ್ಗೂಡಿಸುವಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿದ ಪ್ರಯತ್ನ ಶ್ಲಾಘನೀಯ. ಎಲ್ಲಾ ಪ್ರಾದೇಶಿಕ ಪಕ್ಶಃಗಳೂ ಬಿಜೆಪಿ ವಿರುದ್ಧ ಒಂದಾಗಬೇಕಿದೆ ಎಂದು ಅಬ್ದುಲ್ಲಾ ಹೇಳಿದರು.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, 2019 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಷ್ಟರಲ್ಲಿ ಎಲ್ಲಾ ವಿರೋಧ ಪಕ್ಷಗಳೂ ಒಂದಾಗುತ್ತವೆ ಎಂಬ ನಂಬಿಕೆ ನಮಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ತಾನು ಎಷ್ಟು ಬಲಶಾಲಿಯಾಗಬೇಕಿತ್ತೋ ಅಷ್ಟು ಬಲಶಾಲಿಯಾಗಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಾವೋವಾದಿಗಳು, ಕಾಶ್ಮೀರ ವಿವಾದ, ಈಶಾನ್ಯ ರಾಜ್ಯಗಳ ಸಮಸ್ಯೆ ಹೀಗೇ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಲಾಡ್ಯ ನಾಯಕತ್ವವೇ ಈ ಎಲ್ಲಾ ಸಮಸ್ಯೆಯನ್ನು ಪರಿಹರಿಸಬಲ್ಲದು ಎಂದು ಅವರು ಹೇಳಿದರು.