ಅಧಿಕೃತವಾಗಿ ಜೂ.5ರಂದು ಕೇರಳಕ್ಕೆ ಆಗಮಿಸಿದ ಮುಂಗಾರು
ತಿರುವನಂತಪುರಂ, ಜೂ. 05 : ವಾಯವ್ಯ ಮುಂಗಾರು ಅಧಿಕೃತವಾಗಿ ಕೇರಳವನ್ನು ಶುಕ್ರವಾರ, ಜೂನ್ 5ರಂದು ಪ್ರವೇಶಿಸಿದೆ. ಜೂನ್ 1ರಂದು ಆರಂಭವಾಗವಾಗಬೇಕಿದ್ದ ಮುಂಗಾರು ಮಳೆ ಈ ಬಾರಿ ತಡವಾಗಿ ಆಗಮಿಸಿದೆ. ಇನ್ನೆರಡು ದಿನಗಳ ನಂತರ ಕರ್ನಾಟಕದಲ್ಲಿಯೂ ಅಧಿಕೃತವಾಗಿ ಮಳೆಗಾಲ ಶುರುವಾಗಲಿದೆ.
ತಿರುವನಂತಪುರಂ ಮತ್ತು ಕೊಲ್ಲಂ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಎಲ್ಲ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗಲಿದೆ. ಮೀನುಗಾರರು ಕಡಲಿಗೆ ಇಳಿಯುವುದು ತರವಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.
ದಕ್ಷಿಣ ಅರಬ್ಬೀ ಸಮುದ್ರ, ಲಕ್ಷದ್ವೀಪ ಮತ್ತು ಕೇರಳದ ಸಂಪೂರ್ಣ ಭಾಗವನ್ನು ಮುಂಗಾರು ಆವರಿಸಿಕೊಂಡಿದ್ದು, ಕರ್ನಾಟಕ, ತಮಿಳುನಾಡು, ಬಂಗಾಳ ಕೊಲ್ಲಿಯ ದಕ್ಷಿಣ ಭಾಗದಲ್ಲಿಯೂ ಮುಂಗಾರಿನ ಆರ್ಭಟ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. [ಮುಂಗಾರು ಮಳೆ ಆಗಮನ, ರಾಜ್ಯಕ್ಕಿಲ್ಲ ಆತಂಕ]
ಹವಾಮಾನ ಪರಿಸ್ಥಿತಿ ಅತ್ಯಂತ ಅನುಕೂಲಕರವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ, ತಮಿಳುನಾಡಿನ ದಕ್ಷಿಣ ಪ್ರದೇಶ, ರಾಯಲಸೀಮೆ ಮತ್ತು ಆಂಧ್ರಪ್ರದೇಶದ ಕರಾವಳಿಯ ಕೆಲ ಭಾಗಗಳಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 10 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 8 ಸೆಂ.ಮೀ., ಮಂಗಳೂರು ವಿಮಾನ ನಿಲ್ದಾಣದಲ್ಲಿ 7 ಸೆಂ.ಮೀ. ಮಳೆ ಸುರಿದಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ವರದಿ ಮಾಡಿದೆ.
ಪಣಂಬೂರು, ಮಾಣಿ (ದಕ್ಷಿಣ ಕನ್ನಡ), ಕಾರ್ಕಳ (ಉಡುಪಿ), ಮಡಿಕೇರಿ, ಅಜ್ಜಂಪುರ (ಚಿಕ್ಕಮಗಳೂರು), ನಂಜನಗೂಡು (ಮೈಸೂರು), ಬೆಳ್ತಂಗಡಿ, ಧರ್ಮಸ್ಥಳ (ದಕ್ಷಿಣ ಕನ್ನಡ), ಹಳ್ಯಾಳ (ಉತ್ತರ ಕನ್ನಡ), ತರೀಕೆರೆ (ಚಿಕ್ಕಮಗಳೂರು) ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.
ಈ ಬಾರಿ ಕರ್ನಾಟಕದಲ್ಲಿ ವಾಡಿಕೆಯ ಶೇ.92ರಷ್ಟು ಮಾತ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ತೀರ ಚಿಂತಾಕ್ರಾಂತರಾಗುವ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ, ಮಧ್ಯ ಮತ್ತು ಉತ್ತರ ಭಾರತದಲ್ಲಿ ಈ ಬಾರಿ ಮಳೆಯ ಭಾರೀ ಕೊರತೆಯಾಗಲಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದೆ. [ದೇವರೇ, ಹವಾಮಾನ ಮುನ್ಸೂಚನೆ ನಿಜವಾಗದಿರಲಿ!]