ಅಂದು ಇದು ಕುಡುಕರ ಹಳ್ಳಿ, ಇಂದು ರಾಷ್ಟ್ರೀಯ ಪ್ರಶಸ್ತಿ
ಭುವನೇಶ್ವರ, ಜೂನ್ 26: ಈ ಕಥೆ ಒಡಿಶಾದ ಸಣ್ಣ ಬುಡಕಟ್ಟು ಹಳ್ಳಿ ಲರಿಯಪಲ್ಲಿಯದು. ಒಂದು ಕಾಲದಲ್ಲಿ ಇಲ್ಲಿ ಶೇಕಡಾ 90 ಜನರು ಮದ್ಯ ಸೇವಿಸುತ್ತಿದ್ದರು. ಇದೀಗ ಇದೇ ಹಳ್ಳಿ ಮದ್ಯ ಮತ್ತು ಮಾದಕ ವಸ್ತು ಪ್ರತಿಬಂಧಕ 2018ರಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ್ದಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
ಒಂದು ಕಾಲದಲ್ಲಿ ಮೂರು ವರ್ಷಗಳ ಹಿಂದೆ ಈ ಗ್ರಾಮ ಪಂಚಾಯತ್ ನಲ್ಲಿ ದಿನ ನಿತ್ಯ 240 ಲೀಟರ್ ಮದ್ಯ ಖರ್ಚಾಗುತ್ತಿತ್ತು. ಅದೇ ಇಂದು ಇಲ್ಲಿ ಶೂನ್ಯ ಮದ್ಯ ಬಳಕೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಆರ್ಟ್ ಆಫ್ ಲಿವಿಂಗ್ ಮತ್ತು ಒಡಿಶಾ ಸರಕಾರದ ಜಂಟಿ ಸುಧಾರಣಾ ಕ್ರಮ.
ಮಂಗಳೂರಿನಲ್ಲಿ 6 ರಿಂದ 2 ಬಾಟಲ್ ಗಿಳಿದ ಮದ್ಯದ ಮಾರಾಟ!
ಆರ್ಟ್ ಆಫ್ ಲಿವಿಂಗ್ ನ ಸಾಮಾಜಿಕ ಸಮಸ್ಯೆಗಳ ವಿಭಾಗದ ನಿರ್ದೇಶಕರಾದ ಭೋಲಾ ನಾಥ್ ಅವರು ಇಲ್ಲಿ ಸಮುದಾಯಗಳನ್ನು ಒಂದುಗೂಡಿಸುವುದು, ಅವರಲ್ಲಿ ಜಾಗೃತಿ ಮೂಡಿಸುವುದು ಜೊತೆಗೆ ನಡವಳಿಕೆ ಬದಲಾವಣೆ ಮಾಡುವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರು.
ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಇಲ್ಲಿನ ಜನರಿಗೆ ಅವರು ಕಲಿಸಿಕೊಟ್ಟಿದ್ದರು. ಅದರ ಪರಿಣಾಮಗಳು ಇವತ್ತು ಕಾಣಿಸುತ್ತಿವೆ. ಇಲ್ಲಿನ ಜನರು ಇಂದು ಮದ್ಯ ವ್ಯಸನವನ್ನು ತೊರೆದು ಹೊರ ಬಂದಿದ್ದಾರೆ.
2016 - 17ರಲ್ಲಿ ಇಲ್ಲಿ ಕಳ್ಳಭಟ್ಟಿ ಮಾರಾಟದ 6 ಪ್ರಕರಣಗಳು ದಾಖಲಾಗಿದ್ದವು. 2017-18ರಲ್ಲಿ ಈ ಪ್ರಮಾಣ ಮೂರಕ್ಕೆ ಇಳಿಕೆಯಾಗಿತ್ತು. ಈ ವರ್ಷವಂತೂ ಇಲ್ಲಿಯವರೆಗೆ ಯಾವ ಪ್ರಕರಣಗಳೂ ದಾಖಲಾಗಿಲ್ಲ.
ಒಂದು ಕಾಲದಲ್ಲಿ ಇಲ್ಲಿ ಕಳ್ಳಭಟ್ಟಿ, ಮದ್ಯ ಮಾರುತ್ತಿದ್ದವರಿಗೆ ಪರ್ಯಾಯವಾಗಿ ನರೇಗಾ ಯೋಜನೆಯಡಿ ಉದ್ಯೋಗಗಳನ್ನು ನೀಡಿ ಮುಖ್ಯವಾಹಿನಿಗೆ ಅವರನ್ನು ಕರೆ ತರಲಾಗಿದೆ. ಹೀಗಿದ್ದು ಕೆಲವರು ಮದ್ಯ ಸೇವಿಸುತ್ತಿದ್ದುದು ಮನೆ ಮನೆಯ ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು. ಇವರನ್ನು ಸಾಮಾಜಿಕ ಕೆಲಸಗಳಲ್ಲಿ ಜೊತೆಗೆ ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಅವರನ್ನು ಮದ್ಯ ವ್ಯಸನದಿಂದ ಹೊರ ತರಲಾಗಿದೆ.