ಪುರಿಯಲ್ಲೀಗ ಜಗನ್ನಾಥನ ಜಾತ್ರೆ: ಅದ್ಧೂರಿಯಾಗಿ ಶುರುವಾಗಿದೆ ರಥಯಾತ್ರೆ
ಪುರಿ, ಜುಲೈ 14: ಒಡಿಶಾದ ಪುರಿಯಲ್ಲಿ ಪ್ರತಿವರ್ಷ ನಡೆಯುವ ಒಂಬತ್ತು ದಿನಗಳ ಜಗನ್ನಾಥ ಯಾತ್ರೆ ಇಂದಿನಿಂದ ಆರಂಭವಾಗಿದೆ.
ದೇಶ-ವಿದೇಶಗಳಿಂದ ಬಂದ ಭಕ್ತಾದಿಗಳು, ಪ್ರವಾಸಿಗರು ಜಗನ್ನಾಥನ ವೈಭವವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಛಾರ್ ಧಾಮ್ ಗಳಲ್ಲಿ ಒಂದಾದ ಪುರಿಯ ಜಗನ್ನಾಥ ಮಂದಿರದಲ್ಲಿ ಇದೀಗ ಜಾತ್ರೆ ಸಂಭ್ರಮ ಮೇಳೈಸಿದೆ.
ಪುರಿ ಜಗನ್ನಾಥ ವಾರ್ಷಿಕ ರಥ ಯಾತ್ರೆಗೆ ಸಕಲ ಸಿದ್ಧತೆ
ಪ್ರತಿ ವರ್ಷ ಆಷಾಡ ಮಾಸದ ಶುಕ್ಲಪಕ್ಷದ ಬಿದಿಗೆಯಂದು ಆರಂಭವಾಗುವ ಈ ಯಾತ್ರೆ, ಈ ವರ್ಷ ಜುಲೈ 14, ಶುಕ್ರವಾರದಿಂದ ಆರಂಭವಾಗಿದೆ. ಲಕ್ಷಾಂತರ ಜನ ಪಾಲ್ಗೊಳ್ಳುವ ಈ ಅದ್ಧೂರಿ ರಥಯಾತ್ರೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪುರಿ ಜಗನ್ನಾಥ ದೇವಾಲಯ
ವಿಷ್ಣುವಿನ ಮತ್ತೊಂದು ರೂಪವಾದ ಜಗನ್ನಾಥನ ದೇವಾಲಯ ಒಡಿಶಾದ ಪುರಿಯಲ್ಲಿದೆ. ಪ್ರತಿ ವರ್ಷ ಆಷಾಡ ಶುಕ್ಲ ಬಿದಿಗೆಯಂತು ಇಲ್ಲಿ ಒಂಬತ್ತು ದಿನಗಳ ರಥ ಯಾತ್ರೆ ಆರಂಭವಾಗುತ್ತದೆ. ವೈಷ್ಣವ ಸಮುದಾಯದವರು ಹೆಚ್ಚು ನಡೆದುಕೊಳ್ಳುವ ಈ ಜಗನ್ನಾಥ ಮಂದಿರಕ್ಕೆ ಜಾತಿ-ಮತದ ಭೇದವಿಲ್ಲದೆ ಸಕಲರೂ ಆಗಮಿಸುತ್ತಾರೆ. ಮಹಾನ್ ಸಂತರಾದ ರಮಾನಂದ, ರಾಮಾನುಜರು ಸಹ ಈ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂಬ ಪ್ರತೀತಿ ಇದೆ. ಈ ದೇವಾಲಯವನ್ನು 10 ನೇ ಶತಮಾನದಲ್ಲಿ ಪುನಃಸ್ಥಾಪನೆ ಮಾಡಲಾಯಿತು.
ರಥಯಾತ್ರೆ ನಿಮಿತ್ತ ಪುರಿ ಜಗನ್ನಾಥನ ಪುರಾಣ
ಏನಿದು ರಥಯಾತ್ರೆ?
ಒಂಬತ್ತು ದಿನಗಳ ಈ ರಥಯಾತ್ರೆಯಲ್ಲಿ ಭಗವಂತ ಜಗನ್ನಾಥ ಆತನ ಹಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯರ ಮೂರ್ತಿಯನ್ನು ಸಿಂಗರಿಸಿದ ಮೂರು ರಥದೊಳಗಿಟ್ಟು ಪೂಜಿಸುತ್ತಾ, ಭಜಿಸುತ್ತಾ ಪುರಿಯ ಜಗನ್ನಾಥ ಮಂದಿರದಿಂದ ಗುಂಡಿಚ ಮಂದಿರದವರೆಗೆ ತೆರಳಲಾಗುತ್ತದೆ. 141 ನೇ ವರ್ಷದ ಈ ರಥಯಾತ್ರೆಗೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಜುಲೈ 23 ರಂದು ರಥಯಾತ್ರೆ ಮುಕ್ತಾಯಗೊಳ್ಳಲಿದೆ.
ಜಗನ್ನಾಥ ದೇವಾಲಯದ ವೈಶಿಷ್ಟ್ಯ
ಈ ದೇವಾಲಯವನ್ನು ಇಂದ್ರದ್ಯುಮ್ನ ಎಂಬ ರಾಜ ಕಟ್ಟಿಸಿದ ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯದ ವಿಗ್ರಹಗಳ ವೈಶಿಷ್ಟ್ಯವೆಂದರೆ ಇವನ್ನು ಕಲ್ಲಿನ ಬದಲಾಗಿ ಮರದಲ್ಲಿ ಕೆತ್ತಲಾಗಿದೆ. ಪ್ರತಿ ಹನ್ನೆರಡು ಅಥವಾ ಹತ್ತೊಂಬತ್ತು ವರ್ಷಗಳಿಗೊಮ್ಮೆ ಈ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಬದಲಿಸಲಾಗುತ್ತದೆ.
ಈ ದೇವಾಲಯದ ಸಂಕೀರ್ಣ 400000 ಚದರ ಅಡಿ ಪ್ರದೇಶವನ್ನು ಒಳಗೊಂಡಿದೆ. ದೇವಾಲಯ ಎಲ್ಲಾ ದಿಕ್ಕುಗಳಲ್ಲಿ 4 ಪ್ರವೇಶ ದ್ವಾರಗಳಿವೆ. ದೇವಾಲಯವು ಬೆಳ್ಳಗೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ತೆರೆದಿರುತ್ತದೆ.
|
ಪ್ರಧಾನಿಗಳಿಂದ ಶುಭ ಹಾರೈಕೆ
ಪುರಿಯ ಇತಿಹಾಸ ಪ್ರಸಿದ್ಧ ರಥಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಭಗವಂತ ಜಗನ್ನಾಥನ ಆಶೀರ್ವಾದದಿಂದ ನಮ್ಮ ದೇಶದ ಅಭಿವೃದ್ಧಿ ಹೊಸ ಉತ್ತುಂಗಕ್ಕೇರಲಿ. ಪ್ರತಿ ಭಾರತೀಯನು ಸಮೃದ್ಧಿ ಮತ್ತು ಸಂತೋಷದಿಂದ ಬದುಕುವಂತಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.