ಅತೀ ಕಡಿಮೆ ಆದಾಯ ಹೊಂದಿರುವ ರೈತರು: ಒಡಿಶಾಗೆ ಎರಡನೇ ಸ್ಥಾನ!
ನವದೆಹಲಿ, ಡಿಸೆಂಬರ್ 02: ದೇಶದಲ್ಲಿ ಅತೀ ಕಡಿಮೆ ಆದಾಯ ಹೊಂದಿರುವ ರೈತರನ್ನು ಹೊಂದಿರುವ ರಾಜ್ಯವು ಜಾರ್ಖಂಡ್ ಆಗಿದ್ದು, ಅದರ ನಂತರದ ಅಂದರೆ ಎರಡನೇ ಸ್ಥಾನವನ್ನು ಒಡಿಶಾವು ಪಡೆದುಕೊಂಡಿದೆ. ಒಡಿಶಾದಲ್ಲಿ ರೈತರ ಸರಾಸರಿ ಮಾಸಿಕ ಆದಾಯವು ಅತೀ ಕಡಿಮೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಕೊರಾಪುಟ್ ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಕಾ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಒಡಿಶಾ ರಾಜ್ಯದ ರೈತರು ದೇಶದಲ್ಲಿ ಅತೀ ಕಡಿಮೆ ಆದಾಯವನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿ ಇದ್ದಾರೆ," ಎಂದು ಹೇಳಿದರು.
ಡಿ.1 ರಿಂದ ಉತ್ತರದಲ್ಲಿ ಹಿಮಪಾತದ ಸಾಧ್ಯತೆ: ತಮಿಳುನಾಡಿನಲ್ಲಿ ಆರೆಂಜ್ ಅಲರ್ಟ್
"ಜಾರ್ಖಂಡ್ನಲ್ಲಿ ಕೃಷಿ ವರ್ಷ ಜುಲೈ 2018-ಜೂನ್ 2019 ರ ಅವಧಿಯಲ್ಲಿ ಪ್ರತಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯವು 4,895 ರೂಪಾಯಿ ಆಗಿದೆ. ಒಡಿಶಾದಲ್ಲಿ ರೈತರ ಮಾಸಿಕ ಸರಾಸರಿ ಆದಾಯವು 5,112 ರೂಪಾಯಿ ಆಗಿದೆ," ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿವರಿಸಿದರು.
ಇನ್ನು ಕೇಂದ್ರ ಸರ್ಕಾರವು ದೇಶದಲ್ಲಿ ರೈತರ ಖರ್ಚು ಹಾಗೂ ಆದಾಯವನ್ನು ಅಳೆಯುವ ನಿಟ್ಟಿನಲ್ಲಿ ಯಾವುದಾದರೂ ವಾರ್ಷಿಕ ಸಮೀಕ್ಷೆಯನ್ನು ನಡೆಸಿದೆಯೇ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಕಾ ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೆ, ಆ ಬಗ್ಗೆ ವಿವರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಜನವರಿ 2019 ರಿಂದ ಡಿಸೆಂಬರ್ 2019 ರವರೆಗೆ ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ತನ್ನ 77 ನೇ ಸುತ್ತಿನಲ್ಲಿ ಸಮಗ್ರ ವಿಚಾರಣೆಯ ಸಮೀಕ್ಷೆಯನ್ನು ನಡೆಸಿದೆ. ಅದರಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಕುಟುಂಬಗಳು ಮತ್ತು ಮನೆಗಳ ಜಮೀನು ಮತ್ತು ಜಾನುವಾರು ಹಿಡುವಳಿಗಳ ಪರಿಸ್ಥಿತಿಯ ಮೌಲ್ಯಮಾಪನವನ್ನು ನಡೆಸಿತು. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸರಾಸರಿ ಮಾಸಿಕ ಆದಾಯ ಮತ್ತು ಪ್ರತಿ ಕೃಷಿ ಕುಟುಂಬಕ್ಕೆ ವಿವಿಧ ಮುಖ್ಯಸ್ಥರ ಸರಾಸರಿ ವೆಚ್ಚಗಳನ್ನು ನೀಡಲಾಗಿದೆ.
ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಹಾಗೂ ರೈತರ ಸಮಸ್ಯೆಯನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ, ಕಾರ್ಯತಂತ್ರಗಳನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಎಪ್ರಿಲ್ 2016 ರಲ್ಲಿ ಅಂತರ-ಸಚಿವಾಲಯ ಸಮಿತಿಯನ್ನು ರಚಿಸಿತು. ಸಮಿತಿಯು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯತಂತ್ರವನ್ನು ಒಳಗೊಂಡಿರುವ ತನ್ನ ವರದಿಯನ್ನು ಸೆಪ್ಟೆಂಬರ್ 2018 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಸಮಿತಿಯು ಶಿಫಾರಸುಗಳನ್ನು ಅಂಗೀಕರಿಸಿದ ನಂತರ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸರ್ಕಾರವು ಸಬಲೀಕರಣ ಸಂಸ್ಥೆಯನ್ನು ರಚಿಸಿದೆ ಎಂದು ಕೂಡಾ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ರಾಜ್ಯವಾರು ರೈತರ ಮಾಸಿಕ ಆದಾಯ
ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ರಾಜ್ಯ/ ಕೇಂದ್ರಾಡಳಿತ ಪ್ರದೇಶವಾರು ಸರಾಸರಿ ಮಾಸಿಕ ಆದಾಯ ಮತ್ತು ಪ್ರತಿ ಕೃಷಿ ಕುಟುಂಬದ ಸರಾಸರಿ ವೆಚ್ಚಗಳನ್ನು ವಿವರಿಸಲಾಗಿದೆ. ಆಂಧ್ರ ಪ್ರದೇಶ 10,480 ರೂಪಾಯಿ, ಅರುಣಾಚಲ ಪ್ರದೇಶ 19,225, ಅಸ್ಸಾಂ 10,675, ಬಿಹಾರದಲ್ಲಿ 7,542, ಗುಜರಾತ್ 12,631, ಮೇಘಾಲಯ 29,348, ಪಂಜಾಬ್ 26,701, ಕರ್ನಾಟಕ 13,441 ಆಗಿದೆ.