ಒಬಿಸಿ ಮೀಸಲಾತಿ; ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ
ನವದೆಹಲಿ, ಆಗಸ್ಟ್ 11: ಲೋಕಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಿದ್ದ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಗಿದೆ.
187 ಮತಗಳ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಬಹುಮತದೊಂದಿಗೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಎರಡೂ ಸದನಗಳಲ್ಲಿ ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ಈ ಮೂಲಕ ರಾಜ್ಯಗಳಿಗೆ ಸಂಪೂರ್ಣವಾಗಿ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ.27 ರಷ್ಟು ಮೀಸಲಾತಿ: ಕೇಂದ್ರ
ಭಾರತದಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ OBC Reservation Amendment Bill 2021 ಅನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮಸೂದೆಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವುದಾಗಿ ಹದಿನೈದು ವಿರೋಧ ಪಕ್ಷಗಳು ಘೋಷಿಸಿದ್ದವು.
ಈ 127ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಲೋಕಸಭಾ ಕಲಾಪದಲ್ಲಿ ಚರ್ಚೆಗಳು ನಡೆದಿದ್ದವು. ನಂತರ ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಬುಧವಾರ ಇದೇ ಮಸೂದೆ ರಾಜ್ಯಸಭೆಯಲ್ಲಿಯೂ ಮಂಡನೆಯಾಗಿದ್ದು, ಇಲ್ಲಿ ಕೂಡ ವಿರೋಧ ಪಕ್ಷಗಳ ಬೆಂಬಲ ವ್ಯಕ್ತಪಡಿಸಿ, ಮಸೂದೆ ಮಂಡನೆ ಸಾಧ್ಯವಾಗಿದೆ.
ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ, "ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ಕುರಿತು ಸಂವಿಧಾನದ 342ಎ ಹಾಗೂ ಅದರೊಂದಿಗೆ 338ಬಿ, 366ನೇ ವಿಧಿಗೆ ತಿದ್ದುಪಡಿ ತರುವ ಅಗತ್ಯವಿದೆ" ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವ ವೀರೇಂದ್ರ ಕುಮಾರ್ ಟ್ವೀಟ್ ಮಾಡಿದ್ದರು.
ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ಮರಳಿಸಿದಂತಾಗುತ್ತದೆ.
ಈ ಮಸೂದೆಗೆ ತಿದ್ದುಪಡಿ ತರುವ ಆಲೋಚನೆ ಮಹಾರಾಷ್ಟ್ರದ ಪ್ರಕರಣದಲ್ಲಿ ವ್ಯಕ್ತವಾಗಿತ್ತು. ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿ ನೀಡುವ ಪ್ರಕರಣದಲ್ಲಿ ತೀರ್ಪು ನೀಡುವ ಸಂವಿಧಾನದ 342ಎ ವಿಧಿಯನ್ನು ವ್ಯಾಖ್ಯಾನಿಸಿದ್ದ ಸುಪ್ರೀಂ ಕೋರ್ಟ್, ಒಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇದೆ. ರಾಜ್ಯಗಳಿಗೆ ಈ ಅಧಿಕಾರ ಇಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ್ದ ಮೀಸಲು ರದ್ದುಪಡಿಸಬೇಕು ಎಂದು ಆದೇಶ ಹೊರಡಿಸಿತ್ತು.
ಆದರೆ ಒಬಿಸಿ ಪಟ್ಟಿ ರಚಿಸುವ ಅಧಿಕಾರ ರಾಜ್ಯಗಳಿಗೂ ಇದೆ ಎಂದು ಕೇಂದ್ರ ವಾದಿಸಿತ್ತು. ಎರಡೂ ಕಡೆ ವಾದ-ವಿವಾದಗಳು ನಡೆದಿದ್ದವು.
ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಮರಳಿ ರಾಜ್ಯಗಳಿಗೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಇದೀಗ ಈ ಅಧಿಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ದೊರೆತಂತಾಗಿದೆ.
ಇದೀಗ ಮೂರನೇ ಎರಡರಷ್ಟು ಬಹುಮತದೊಂದಿಗೆ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಎರಡೂ ಸದನಗಳಲ್ಲಿ ಒಬಿಸಿ ಸೇರ್ಪಡೆಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಮಸೂದೆ ಅಂಗೀಕಾರವಾದಂತಾಗಿದೆ.
ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದಲ್ಲಿಯೂ ಕೆಲವು ಸಮುದಾಯಗಳು ತಮ್ಮ ಜಾತಿಯನ್ನು ಒಬಿಸಿಗೆ ಸೇರಿಸಬೇಕೆಂದು ಹಿಂದಿನಿಂದಲೂ ಹೋರಾಟ ಮಾಡುತ್ತಿದ್ದು, ಈ ತಿದ್ದುಪಡಿ ಮಸೂದೆಯಿಂದ ಇನ್ನಷ್ಟು ಸಮುದಾಯಗಳು ಒಬಿಸಿ ಸೇರ್ಪಡೆಗೆ ಬೇಡಿಕೆ ಇಡುವ ನಿರೀಕ್ಷೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿಯೂ ಕೆಲ ಸಮುದಾಯಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯವನ್ನು ಮಾಡಿವೆ.