ನಿರ್ಭಯಾ ನರ್ಸ್ ಮೇಲೆಯೂ ಗ್ಯಾಂಗ್ರೇಪ್
ನವದೆಹಲಿ, ಸೆ. 10 : ಅತ್ಯಾಚಾರಕ್ಕೊಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಬಾರದ ಲೋಕಕ್ಕೆ ತೆರಳಿದ್ದ ನಿರ್ಭಯಾಳನ್ನು ಆರೈಕೆ ಮಾಡಿದ್ದ ನರ್ಸ್ ಮೇಲೆಯೂ ಗ್ಯಾಂಗ್ ರೇಪ್ ಆಗಿದೆ.
ಏಳು ಜನ ಕಾಮುಕರು ಪಂಜಾಬಿನ ಮಾನ್ಸಾ ಜಿಲ್ಲೆಯ ಬುದ್ಧಾಲಾ ಪಟ್ಟಣದಲ್ಲಿ ಹೀನ ಕೃತ್ಯ ಎಸಗಿದ್ದಾರೆ. ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಭರಣ ಮತ್ತಿತರ ವಸ್ತುಗಳನ್ನು ದೋಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಲ್ವಿಂದರ್ ಸಿಂಗ್ ಕಾಲಾ ಮತ್ತು ಮನಗವಿಂದರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ನಿರ್ಭಯಾ ಅತ್ಯಾಚಾರ ಸಣ್ಣ ಘಟನೆ: ಜೇಟ್ಲಿ ವಿಷಾದ)
ಅತ್ಯಾಚಾರಕ್ಕೊಳಗಾದವಳು ನಿರ್ಭಯಾ ನರ್ಸ್ ಎಂಬ ಕಾರಣಕ್ಕೆ ಮರುಕ ಪಡಬೇಕಾಗಿಲ್ಲ. ಅವಳು ಒಬ್ಬ ಮಹಿಳೆ ಎಂಬುದನ್ನು ಮನಗಾಣಬೇಕು. ಯಾರೇ ಅಪರಾಧ ಮಾಡಿದ್ದರೂ ಬಂಧಿಸಬೇಕು. ನಾವು ಮಾನವೀಯ ನೆಲೆಯಲ್ಲಿ ಯೋಚಿಸುವುದನ್ನು ಮೊದಲು ಕಲಿಯಬೇಕಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಹೇಳಿದ್ದಾರೆ.
ಸಮಾಜ ಕೇವಲ ಸ್ವಾರ್ಥಪರವಾಗಿದೆ. ಇದು ಕಾನೂನು ತೊಡಕಿಂದ ಘಟಿಸುತ್ತಿದೆ ಎಂದು ಹೇಳಲಾಗದು. ಇಡೀ ಸಮಾಜ ಇಂಥ ನೀಚ ಪ್ರಕರಣಗಳಿಗೆ ಹೊಣೆಯಾಗಿರುತ್ತದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಬರ್ಖಾ ಶುಕ್ಲಾ ಸಿಂಗ್ ಖೇದ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ. ದೌರ್ಜನ್ಯಕ್ಕೆ ಒಳಗಾದವಳ ಹೇಳಿಕೆ ಪಡೆದು ಅಪರಾಧಿಗಳ ಪತ್ತೆ ಮಾಡಬೇಕಾಗಿದೆ. ಸತ್ಯವನ್ನು ಹೊರಹಾಕಿ ಸಮಾಜಕ್ಕೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ ಎಂದು ಸಿಂಗ್ ಒತ್ತಾಯಿಸಿದ್ದಾರೆ.