ಭದ್ರತಾ ಸಲಹೆಗಾರ ದೋವಲ್ ಅಮೆರಿಕ ಭೇಟಿಯ ಹಿಂದಿನ ರಹಸ್ಯವೇನು?
ಪಾಕಿಸ್ತಾನದ ಕುತಂತ್ರದಿಂದಾಗಿ ತಾನು ಅನುಭವಿಸಿರುತ್ತಿರುವ ಭಯೋತ್ಪಾದನೆ ಸಮಸ್ಯೆಯನ್ನು ಅಮೆರಿಕ ಅಧಿಕಾರಿಗಳ ಗಮನಕ್ಕೆ ತಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್.
ವಾಷಿಂಗ್ಟನ್, ಮಾರ್ಚ್ 25: ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು ಅಮೆರಿಕದ ನೆರವು ಕೋರಿದೆ. ಸದ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ.
ತಮ್ಮ ಈ ಪ್ರವಾಸದಲ್ಲಿ ಅಮೆರಿಕದ ಅನೇಕ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿರುವ ದೋವಲ್, ರಕ್ಷಣಾ ವಲಯದಲ್ಲಿ ಉಭಯ ದೇಶಗಳ ನಡುವಿನ ಸಹಭಾಗಿತ್ವ ಹಾಗೂ ಸಹಕಾರಗಳಿಂದಾಗುವ ಅನೇಕ ಲಾಭಗಳನ್ನು ಮನವರಿಕೆ ಮಾಡಿಕೊಟ್ಟರು.[ತೇಜ್ ಬಹದ್ದೂರ್ ಸಾವಿನ ವದಂತಿ, ಸತ್ಯ ಏನು ಎಂದು ಇಲ್ಲಿದೆ ಮಾಹಿತಿ]
ಇದಲ್ಲದೆ ಭಯೋತ್ಪಾದನಾ ದಾಳಿಗಳ ಹಲವು ಬಗೆಗಳನ್ನು ಅಮೆರಿಕ ಅಧಿಕಾರಿಗಳಿಗೆ ವಿವರಿಸಿದರು. ಭಯೋತ್ಪಾದಕರು ನಾನಾ ರೀತಿಯಲ್ಲಿ ದಾಳಿ ಮಾಡುವ ಯೋಜನೆಗಳನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಕಡಲ ಗಡಿಗಳ ಮೇಲೆ ಹದ್ದಿನ ಕಣ್ಗಾವಲು, ಭಯೋತ್ಪಾದಕರ ಭೀತಿ ಎದುರಿಸುತ್ತಿರುವ ಪ್ರದೇಶಗಳಿಗೆ ಹೆಚ್ಚಿನ ಭದ್ರತೆ, ಇವುಗಳ ಜತೆಗೆ ಭಯೋತ್ಪಾದಕರ ವಿರುದ್ಧ ಹೋರಾಡುವ ವಿಶೇಷ ರಣತಂತ್ರಗಳನ್ನು ರೂಪಿಸುವ ಅಗತ್ಯವಿದೆಯೆಂದು ಅವರು ಒತ್ತಿ ಹೇಳಿದರು. ಈ ವಿಚಾರಗಳಲ್ಲಿ ಭಾರತ ಹಾಗೂ ಅಮೆರಿಕ ಜಂಟಿಯಾಗಿ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದೂ ಅವರು ತಿಳಿಸಿದರು.
ಇದೇ ವೇಳೆ, ಪಾಕಿಸ್ತಾನ ದೇಶದ ಕುತಂತ್ರ ನೀತಿಯಿಂದ ಭಾರತವು ಹೇಗೆ ನರಳುತ್ತಿದೆ ಎಂಬುದನ್ನೂ ಅವರು ಅಮೆರಿಕ ಸರ್ಕಾರದ ಗಮನಕ್ಕೆ ತರಲೆತ್ನಿಸಿದರು. ಅಲ್ಲದೆ, ಎರಡೂ ದೇಶಗಳಲ್ಲಿ ಸೈಬರ್ ಭದ್ರತೆಯನ್ನು ಈ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಹೆಚ್ಚಿಸುವ ಅನಿವಾರ್ಯತೆಯಿದೆ ಎಂದು ದೋವಲ್ ಇದೇ ವೇಳೆ ತಿಳಿಸಿದರು.
ದೋವಲ್ ಅವರ ಈ ಪ್ರಯತ್ನ ಶೀಘ್ರವೇ ಫಲಕಾರಿಯಾಗಲಿದ್ದು, ಅಮೆರಿಕ ಸರ್ಕಾರವು ಮೋದಿ ಸರ್ಕಾರದ ಮೇಲೆ ಹೊಂದಿರುವ ವಿಶ್ವಾಸ ಹಾಗೂ ಹಿಂದಿನಿಂದಲೂ ಭಾರತದ ಬಗ್ಗೆ ಇರುವ ಉತ್ತಮ ಸ್ನೇಹಗಳ ಪರಿಣಾಮವಾಗಿ ಭಯೋತ್ಪಾದನೆ ಎದುರಿಸುವ ನಿಟ್ಟಿನಲ್ಲಿ ಭಾರತದ ಜತೆಗೆ ಕೈ ಜೋಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.