NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ
ನವದೆಹಲಿ, ಡಿಸೆಂಬರ್ 21: ಪೌರತ್ವ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಬಗ್ಗೆ ದೇಶದಾದ್ಯಂತ ಚರ್ಚೆಗಳು ಎದ್ದಿವೆ. ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿವೆ.
ಸಿಎಎ ಯು ಕಾಯ್ದೆಯಾಗಿದ್ದರೆ, ಎನ್ಆರ್ಸಿ ಯು 1955 ರ ನಾಗರೀಕ ಕಾಯ್ದೆ ಅಡಿ ಬರುವ ನೊಂದಣಿ ಪ್ರಕ್ರಿಯೆ. ಇದು ಅಸ್ಸಾಂ ಹೊರತಾಗಿ ದೇಶದ ಇನ್ನೆಲ್ಲೂ ಆಗಿಲ್ಲ. ಆದರೆ ಬಿಜೆಪಿಯು ಇದನ್ನು ದೇಶದೆಲ್ಲೆಡೆ ಚಾಲನೆಗೆ ತಂದು ಅಕ್ರಮ ವಲಸಿಗರನ್ನು ಹೊರಗಟ್ಟುವುದಾಗಿ ಹೇಳುತ್ತಿದೆ.
ಸಹಜವಾಗಿಯೇ ಈ ಸಿಎಎ ಮತ್ತು ಎನ್ಆರ್ಸಿ ಇಂದ ಹಲವರು ಆತಂಕಗೊಂಡಿದ್ದು, ಭಾರತದಲ್ಲಿರುವ ಎಲ್ಲರೂ 'ನಾವು ಭಾರತೀಯರೇ' ಎಂಬುದಕ್ಕೆ ಸರ್ಕಾರಕ್ಕೆ ಸಾಕ್ಷಿ ಸಲ್ಲಿಕೆ ಮಾಡಬೇಕಾಗಿ ಬಂದಿದೆ.
ಪೌರತ್ವ ಪ್ರತಿಭಟನೆ ವ್ಯಾಪಕ; ಉತ್ತರಪ್ರದೇಶದಲ್ಲಿ 11 ಜನ ಸಾವು, ಬಿಹಾರ ಬಂದ್
ಎನ್ಆರ್ಸಿ ಜಾರಿಯಾದಾಗ ಬಹುತೇಕ ಎಲ್ಲರೂ ತಾವು ಭಾರತೀಯರೇ ಎಂದು ಪ್ರಮಾಣೀಕರಿಸಲು ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಗ ಯಾವ ದಾಖಲೆಗಳನ್ನೆಲ್ಲಾ ಸಲ್ಲಿಸಬೇಕು ಎಂಬ ಅನುಮಾನ ಎಲ್ಲರಲ್ಲಿದೆ.
ಉನ್ನತ ಅಧಿಕಾರಿ ಹೇಳಿದ್ದಾರೆ ಹೀಗೆ
'ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ಗಳು ಎನ್ಆರ್ಸಿ ಗೆ ನಡೆಯುವುದಿಲ್ಲ, ಇವು ಕೇವಲ ಭಾರತದಲ್ಲಿ ಈಗ ವಾಸವಿರುವುದಕ್ಕೆ ನೀಡುವ ದಾಖಲೆಗಳಾಗಿವೆ' ಎಂದು ಕೇಂದ್ರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂದಷ್ಟೆ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆತಂಕ ಮೂಡಿಸಿರುವ ಹಿರಿಯ ಅಧಿಕಾರಿ ಹೇಳಿಕೆ
ಸಾಮಾನ್ಯವಾಗಿ ಯಾವುದೇ ವಿಳಾಸ ದಾಖಲೆಗಳನ್ನು ನೀಡುವಾಗ ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಅನ್ನು ನೀಡುವುದು ಸಾಮಾನ್ಯ. ಈ ಮೂರೂ ದಾಖಲೆಗಳನ್ನು ಕೇಂದ್ರದ ಅಧೀನದ ಸಂಸ್ಥೆಗಳೇ ನೀಡಿವೆ. ಆದರೆ ಭಾರತೀಯ ಪೌರತ್ವ ಸಾಬೀತು ಪಡಿಸಲು ಇವು ನಡೆಯುವುದಿಲ್ಲ ಎಂದು ಕೇಂದ್ರದ ಉನ್ನತ ಅಧಿಕಾರಿಯೇ ಹೇಳಿರುವುದು ಸಹಜವಾಗಿಯೇ ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ.
ಕಾಯ್ದೆಯೊಂದಕ್ಕೆ ಈ ಮಟ್ಟಿನ ವಿರೋಧ ಹಿಂದೆ ನೋಡಿಲ್ಲ: ಮಾಧುಸ್ವಾಮಿ
ಅಸ್ಸಾಂನಲ್ಲಿ ಪೂರ್ವಿಕರ ದಾಖಲೆ ಮೇಲೆ ಎನ್ಆರ್ಸಿ
ಆದರೆ ಇದು ಪೂರ್ಣ ಸತ್ಯವಲ್ಲ, ಅಸ್ಸಾಂ ನಲ್ಲಿ ಪೂರ್ವಿಕರ ಮಾಹಿತಿ ಮೇರೆಗೆ ಎನ್ಆರ್ಸಿ ಜಾರಿ ಮಾಡಲಾಗಿತ್ತು. ಪೂರ್ವಿಕರ ದಾಖಲೆ ನೀಡಲಾಗದ ಲಕ್ಷಾಂತರ ಜನರನ್ನು ಅಕ್ರಮ ವಲಸಿಗರೆಂದು ತೀರ್ಮಾನ ಮಾಡಲಾಯಿತು. ಆದರೆ ಕೇಂದ್ರ ಈಗ ಮಾಡ ಹೊರಟಿರುವ ನಾಗರೀಕ ನೊಂದಣಿ ಬೇರೆಯದೇ ರೀತಿ ಇರಲಿದೆ ಎನ್ನಲಾಗುತ್ತಿದೆ.
2024 ರ ಚುನಾವಣೆಗೆ ಮುನ್ನಾ ಎನ್ಆರ್ಸಿ ಜಾರಿ: ಶಾ
ಅಮಿತ್ ಶಾ ಹೇಳಿರುವ ಪ್ರಕಾರ 2024 ರ ಚುನಾವಣೆಗೆ ಮುನ್ನಾ ದೇಶದಾದ್ಯಂತ ಎನ್ಆರ್ಸಿ ಜಾರಿಗೊಳಿಸಲಾಗುತ್ತದೆ. ಎನ್ಆರ್ಸಿ ಜಾರಿಗೆ ಇನ್ನೂ ಸಾಕಷ್ಟು ಸಮಯಾವಾಕಾಶ ಇರುವ ಕಾರಣ, ಸರ್ಕಾರ ನಿಖರ ಮಾರ್ಗಸೂಚಿಗಳನ್ನು ಅಥವಾ ಮಾರ್ಗಸೂಚಿ ತಿದ್ದುಪಡಿಯನ್ನು ಮಾಡಿಲ್ಲ.
ಬಿಹಾರದಲ್ಲಿ ನಡೆಯೋದಿಲ್ಲ ಸಿಎಎ ಮತ್ತು ಎನ್ಆರ್ ಸಿ ಆಟ -ನಿತೀಶ್ ಕುಮಾರ್
ಎನ್ಆರ್ಸಿ ಗೆ ಸಾಮಾನ್ಯ ದಾಖಲೆಗಳು ಸಾಕು: ಕೇಂದ್ರ ಗೃಹ ಇಲಾಖೆ
ಆದರೆ ಗೃಹ ಇಲಾಖೆ ಎನ್ಆರ್ಸಿ ಬಗ್ಗೆ ಮಾಡಿರುವ ಪ್ರಶ್ನೋತ್ತರದಲ್ಲಿ ಎನ್ಆರ್ಸಿ ಗೆ ಮತದಾರರ ಗುರುತಿನ ಚೀಟಿ, ಆಧಾರ್, ವಾಹನ ಚಲಾವಣಾ ಪರವಾನಿಗೆ ಪತ್ರ, ಪಾಸ್ಪೋರ್ಟ್ ನಂತಹಾ ಸಾಮಾನ್ಯ ದಾಖಲೆಗಳು ಸಾಕು ಎಂದು ಹೇಳಿದೆ. ಪೋಷಕರ, ಪೂರ್ವಿಕರ ದಾಖಲೆಗಳು ಅಗತ್ಯವಿಲ್ಲವೆಂದು. ಒಂದು ವೇಳೆ ಪೂರ್ವಿಕರ ದಾಖಲೆಗಳು ಇದ್ದರೆ ಅದನ್ನು ನೀಡಬಹುದು ಎಂದಷ್ಟೆ ಹೇಳಿದೆ.
"ಪೌರತ್ವ ಕಾಯ್ದೆಯೂ ಇಲ್ಲ, ರಾಷ್ಟ್ರೀಯ ನಾಗರಿಕ ನೊಂದಣಿಯೂ ಇಲ್ಲ"
ಅಸ್ಸಾಂ ಅಕಾರ್ಡ್ ನಿಯಮಗಳಿಗನ್ವಯ ಎನ್ಆರ್ಸಿ ಜಾರಿ ಆಗಿತ್ತು
ಅಸ್ಸಾಂ ನಲ್ಲಿ ಪೂರ್ವಿಕರ ದಾಖಲೆಗಳನ್ನು ಕೇಳಲಾಗಿದೆ, ಇಲ್ಲಿಯೂ ಹಾಗೆಯೇ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಗೃಹ ಇಲಾಖೆಯು ಸ್ಪಷ್ಟವಾಗಿ ಇಲ್ಲವೆಂದು ಹೇಳಿದೆ. ಅಸ್ಸಾಂ ನಲ್ಲಿ ಅಸ್ಸಾಂ ಅಕಾರ್ಡ್ ನಿಯಮಗಳಿಗೆ ಬದ್ಧವಾಗಿ ಆ ರಾಜ್ಯದಲ್ಲಿ ಮಾತ್ರವೇ ಪೂರ್ವಿಕರ ದಾಖಲೆಗಳಿದ್ದವರನ್ನು ಮಾತ್ರವೇ ದೇಶದ ನಾಗರೀಕರೆಂದು ಪರಿಗಣಿಸಲಾಯಿತು. ಆದರೆ ದೇಶದ ಇತರ ರಾಜ್ಯಗಳಲ್ಲಿ ಬೇರೆ ರೀತಿಯ ನೊಂದಣಿ ಆಗಲಿದೆ ಎಂದು ಹೇಳಿದೆ.
ಅನಕ್ಷರಸ್ಥರಿಗೆ ಸ್ವಲ್ಪ ಸಮಸ್ಯೆ ಆಗಬಹುದು ಅಷ್ಟೆ
ಒಂದು ವೇಳೆ ಯಾವುದಾದರೂ ವ್ಯಕ್ತಿಯು ಅನಕ್ಷರಸ್ಥನಾಗಿದ್ದು ಆತನ ಬಳಿ ಸೂಕ್ತ ದಾಖಲೆಗಳು ಇಲ್ಲವೆಂದರೂ ಚಿಂತೆಯಿಲ್ಲ. ಆತ ಯಾವುದಾದರೂ ಪ್ರಮುಖ ಮತ್ತು ಪರಿಣಾಮಾತ್ಮಕ ಸಾಕ್ಷಿಯನ್ನು ನೀಡಿದರೂ ಸಾಕು. ದಾಖಲೆ ಇಲ್ಲದ ವ್ಯಕ್ತಿಯನ್ನು ಕೆಲವು ಪ್ರಶ್ನೆಗಳ ಮೂಲಕ ಸಂದರ್ಶಿಸಿ ಆತ ಭಾರತೀಯ ಪೌರ ಹೌದೋ-ಅಲ್ಲವೋ ನಿರ್ಧರಿಸಲಾಗುತ್ತದೆ.
ನಿರ್ಗತಿಕರ ಕತೆ ಏನು? ಇಲಾಖೆ ಹೇಳಿದ್ದೇನು?
ಭಾರತದ ಹಲವು ನಗರಗಳಲ್ಲಿ ನಿರ್ಗತಿಕರಿದ್ದಾರೆ, ಅವರಿಗೆ ಮನೆ ಇಲ್ಲ, ಸೂಕ್ತ ವಿಳಾಸಗಳೇ ಇಲ್ಲ ಅವರನ್ನು ಭಾರತೀಯ ಪೌರರೆಂದು ಪರಿಗಣಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಗೃಹ ಇಲಾಖೆ, 'ಇದು ಪೂರ್ಣವಾಗಿ ಸರಿಯಲ್ಲ, ಈ ರೀತಿಯ ಜನ ಹೆಚ್ಚು ಸಂಖ್ಯೆಯಲಿಲ್ಲ, ಹಾಗೊಂದು ವೇಳೆ ಇದ್ದರೂ ಸರ್ಕಾರದ ಒಂದಲ್ಲಾ-ಒಂದು ಯೋಜನೆಗಳ ಫಲಾನುಭವಿಗಳೇ ಆಗಿರುತ್ತಾರೆ. ಆಗ ಅವರು ತಾವು ಭಾರತೀಯ ಪೌರರೆಂದು ಸಾಬೀತು ಮಾಡಲು ಸುಲಭವಾಗುತ್ತದೆ' ಎಂದಿದೆ.