13ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅದೆಷ್ಟು ಬದಲಾಗಿ ಹೋದರು!
ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಹೀಗೆ.. ನಿನ್ನೆಮೊನ್ನೆ ಶತ್ರುವಾಗಿದ್ದವನು ಮಿತ್ರನಾಗುತ್ತಾನೆ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವೇ ಆಗಲಿ.. ತೆಗೆದುಕೊಳ್ಳುವ ನಿರ್ಧಾರದ ಹಿಂದೆ, ರಾಜಕೀಯ ಲಾಭನಷ್ಟದ ಲೆಕ್ಕಾಚಾರವೇ ಮೊದಲು, ಜನಸಾಮಾನ್ಯರ ಬದುಕು ಹಸನಾಗಲಿ ಎನ್ನುವ ಚಿಂತನೆ ಆನಂತರ..
ಈಗ ದೇಶದೆಲ್ಲಡೆ ಬಹುಚರ್ಚಿತ ವಿಷಯ ಅಸ್ಸಾಂನ ಎನ್ಆರ್ಸಿ (ರಾಷ್ಟ್ರೀಯ ಪೌರತ್ವ ನೋಂದಣಿ). ಕೇಂದ್ರ ಸರಕಾರ ಇದರ ಅಂತಿಮ ಕರಡು ಪ್ರತಿ ಪ್ರಕಟ ಮಾಡುತ್ತಿದ್ದಂತೇ, ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗಿಬಿದ್ದಿದ್ದಾರೆ. ಉದ್ದೇಶಪೂರ್ವಕವಾಗಿಯೇ 40 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ, ರಕ್ತಪಾತವಾಗುತ್ತದೆ ಎಂದು ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು
ಇದರಲ್ಲಿ ನಮ್ಮದೇನೂ ಹಸ್ತಕ್ಷೇಪವಿಲ್ಲ, ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತಿರುವ ಪ್ರಕ್ರಿಯೆ ಇದಾಗಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರೂ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರಕಾರ ನಡೆಸುತ್ತಿರುವ ಷಡ್ಯಂತ್ರ ಎನ್ನುವುದು ಮಮತಾ ಬ್ಯಾನರ್ಜಿ ಆರೋಪ.
ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಲಲು ನಾವು ತಯಾರಿಲ್ಲ, ಎನ್ಆರ್ಸಿ ವಿಚಾರವನ್ನು ವೋಟ್ ಬ್ಯಾಂಕಿಗಾಗಿ ಮಮತಾ ಬ್ಯಾನರ್ಜಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಬಿಜೆಪಿಯ ತಿರುಗೇಟು. ಕಾನೂನಿನ ಪ್ರಕಾರ, 1971ರ ಮಾರ್ಚ್ 24ಕ್ಕಿಂತ ಹಿಂದಿನಿಂದಲೂ ಅಸ್ಸಾಂನಲ್ಲಿ ನೆಲೆಸಿರುವವರು ಮತ್ತು ಅವರ ಮಕ್ಕಳನ್ನು ಮಾತ್ರ ಭಾರತದ ಪೌರರು ಎಂದು ಪರಿಗಣಿಸಲಾಗುತ್ತದೆ.
ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕ
ಅಸಲಿಗೆ ಈ ಪ್ರಕ್ರಿಯೆಗೆ 2005ರಲ್ಲಿ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ನುಸುಳುಕೋರರನ್ನು ತಡೆಗಟ್ಟುವ ಧೈರ್ಯ ಕಾಂಗ್ರೆಸ್ ಸರಕಾರಕ್ಕೆ ಇರಲಿಲ್ಲ ಎನ್ನುವುದು ಬಿಜೆಪಿಯ ಆರೋಪ. 2005ರಲ್ಲಿ, ಇದೇ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ವಿರುದ್ದ ರೌದ್ರಾವತಾರ ತಾಳಿದ್ದರು. ಆದರೆ, ಈಗ ? ಅಂದಿನ ಘಟನೆಯ ಕೆಲವೊಂದು ಪ್ರಮುಖಾಂಶ ಇಂತಿದೆ..
ಅಕ್ಷರಸಃ ಪಾರ್ಲಿಮೆಂಟಿನಲ್ಲಿ ಹರಿಹಾಯ್ದಿದಿದ್ದ ಮಮತಾ ಬ್ಯಾನರ್ಜಿ
2005ರಲ್ಲಿ ಅಸ್ಸಾಂನಲ್ಲಿ ನುಸುಳುಕೋರರ ವಿರುದ್ದ ಅಕ್ಷರಸಃ ಪಾರ್ಲಿಮೆಂಟಿನಲ್ಲಿ ಹರಿಹಾಯ್ದಿದಿದ್ದ ಮಮತಾ ಬ್ಯಾನರ್ಜಿ, ಸ್ಪೀಕರ್ ಮುಂದೆ ಬೆಂಕಿಯುಂಡೆ ಉಗುಳಿದ್ದರು. ಆ ವೇಳೆ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಸರಕಾರ ಅಧಿಕಾರದಲ್ಲಿತ್ತು. ಕೊಲ್ಕತ್ತಾ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದ ಮಮತಾ, ಎನ್ಡಿಎ ಜೊತೆ ಗುರುತಿಸಿಕೊಂಡಿದ್ದರು.
ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ
ಬಾಂಗ್ಲಾ ದೇಶದಿಂದ ಬರುವ ನುಸುಳುಕೋರರು
ಈಶಾನ್ಯ ರಾಜ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾಗಿ ಬಾಂಗ್ಲಾ ದೇಶದಿಂದ ಬರುವ ನುಸುಳುಕೋರರಿಂದ ದೇಶದ ಭದ್ರತೆಗೆ ಆಪತ್ತಿದೆ ಎಂದು ಭಾಷಣ ಮಾಡಿದ್ದ ಮಮತಾ, ಈ ರೀತಿ ಅಕ್ರಮವಾಗಿ ನಮ್ಮ ದೇಶದಲ್ಲಿ ನೆಲೆಸಿರುವ ಬಾಂಗ್ಲಾ ದೇಶಿಗಳ ಹೆಸರು ವೋಟರ್ ಲಿಸ್ಟ್ ನಲ್ಲಿದೆ, ಅಂತವರ ಹೆಸರನ್ನು ತೆಗೆದುಹಾಕಲು ಕೂಡಲೇ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ರಾಜ್ಯದ ಸಿಪಿಐ(ಎಂ) ಸರಕಾರ, ಈ ವಿಚಾರದಲ್ಲಿ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಅಂಕಿಅಂಶದ ಸಮೇತ ಮಮತಾ ವಾಗ್ದಾಳಿ ನಡೆಸಿದ್ದರು.
ಮನವಿ ಪತ್ರವನ್ನು ಹರಿದು ಸ್ಪೀಕರ್ ಕುರ್ಚಿಯ ಮೇಲೆ ಎಸೆದಿದ್ದ ಮಮತಾ
ಇದೊಂದು ಗಂಭೀರ ವಿಚಾರ, ಸದನದಲ್ಲಿ ವಿಸ್ಕೃತ ಚರ್ಚೆಗೆ ಅವಕಾಶ ನೀಡಬೇಕೆಂದು ಮಮತಾ ಆಗ್ರಹಿಸಿದ್ದರು, ಆದರೆ ಅಂದು ಲೋಕಸಭೆಯ ಉಪಸಭಾಪತಿಯಾಗಿದ್ದ ಚರಣಜಿತ್ ಸಿಂಗ್ ಅತ್ವಾಲ್ ಇದಕ್ಕೆ ಅವಕಾಶ ನೀಡದೇ ಇದ್ದಾಗ, ಸ್ಪೀಕರ್ ಆಸನದ ಮುಂದೆ ಬಂದು ಚರ್ಚೆಗೆ ಅವಕಾಶ ನೀಡಬೇಕು ಎನ್ನುವ ಮನವಿ ಪತ್ರವನ್ನು ಹರಿದು ಸ್ಪೀಕರ್ ಕುರ್ಚಿಯ ಮೇಲೆ ಎಸೆದಿದ್ದರು. ಅದು ಅಂದಿನ ಮಮತಾ...
13ವರ್ಷದ ನಂತರ ಇದೇ ಅಕ್ರಮ ನುಸುಳುಕೋರರ ಪರವಾಗಿ ನಿಂತಿದ್ದಾರೆ
ಆಗಸ್ಟ್ 4, 2005ರಲ್ಲಿ ಲೋಕಸಭೆಯಲ್ಲಿ ವೀರಾವೇಶದ ಭಾಷಣ ಮಾಡಿದ್ದ ಮಮತಾ ಬ್ಯಾನರ್ಜಿ, ಹದಿಮೂರು ವರ್ಷದ ನಂತರ ಇದೇ ಅಕ್ರಮ ನುಸುಳುಕೋರರ ಪರವಾಗಿ ನಿಂತಿದ್ದಾರೆ. ಅಂದು ಎನ್ಆರ್ಸಿ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಈಗ ಮಮತಾ ಪರವಾಗಿ ನಿಂತಿದೆ.. ಇದು ಇಂದಿನ ರಾಜಕೀಯ.. ಮಮತಾ ಬ್ಯಾನರ್ಜಿ..
ಬಾಂಗ್ಲಾ ಅಕ್ರಮ ನುಸುಳುಕೋರರು
ಪಶ್ಚಿಮ ಬಂಗಾಳದಲ್ಲೂ ಬಾಂಗ್ಲಾ ಅಕ್ರಮ ನುಸುಳುಕೋರರು ಧಾರಾಳವಾಗಿ ಸುಳಿದಿದ್ದಾರೆ, ಇದು ಮಮತಾ ಸರಕಾರಕ್ಕೆ ಗೊತ್ತಿರುವ ವಿಚಾರ ಕೂಡಾ.. ಜೊತೆಗೆ ಬಂದವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನೂ ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಸಿದೆ. ಆದರೆ, ಈಗ ಮಮತಾ ಅವರ ಪರವಾಗಿ ನಿಂತಿರುವುದು ವೋಟ್ ಬ್ಯಾಂಕ್ ಪಾಲಿಟಿಕ್ಸಿಗಾಗಿಯಾ? ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜನಪ್ರಿಯತೆಯನ್ನು ತಡೆಗಟ್ಟಲಾ?