ಗಂಡನ ಹುಡುಕಿಕೊಡಿ ಅಂದ ಬಿಎಸ್ಎಫ್ ಯೋಧನ ಪತ್ನಿ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಈ ಫೇಸ್ ಬುಕ್ ಪೋಸ್ಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಇದನ್ನು ಮಾಡಿದ್ದು ತೇಜ್ ಬಹಾದೂರ್ ಯಾದವ್ ನ ಪತ್ನಿಯಾ ಅಥವಾ ಅವರ ಹೆಸರಲ್ಲಿ ಬೇರಯವರು ಮಾಡಿದ್ದಾ ಎಂಬುದು ತಿಳಿದುಬರಬೇಕಿದೆ.
ನವದೆಹಲಿ, ಜನವರಿ 11 : ಗಡಿ ಭದ್ರತಾ ಪಡೆಯ ಜವಾನರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸೈನಿಕ ತೇಜ್ ಬಹಾದೂರ್ ಮಾಡಿದ್ದ ವಿಡಿಯೋಗೆ ಪ್ರತಿಯಾಗಿ, ಗಡಿ ಭದ್ರತಾ ಪಡೆ ತನ್ನ ವರದಿಯನ್ನು ಸಿದ್ಧಪಡಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ.
"ಭಾರತದ ಎಲ್ಲ ಜನರಿಗೆ ನನ್ನ ನಮಸ್ಕಾರ. ನಿಮ್ಮೆಲ್ಲರಿಗೆ ಸೋಷಿಯಲ್ ಮೀಡಿಯಾ ಮೂಲಕ ಏನು ಹೇಳಬಯಸುತ್ತಿದ್ದೇನೆಂದರೆ, ಕಳೆದ ರಾತ್ರಿಯಿಂದ ನನ್ನ ಗಂಡನೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಯಾವ ಸ್ಥಿತಿಯಲ್ಲಿ ಎಲ್ಲಿ ಹೇಗೆ ಇಡಲಾಗಿದೆ ತಿಳಿಯುತ್ತಿಲ್ಲ" ಎಂದು ತೇಜ್ ಬಹಾದೂರ್ ಪತ್ನಿ ಎಂದು ಹೇಳಿಕೊಂಡಿರುವ ಆಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.[ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್]
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಈ ಫೇಸ್ ಬುಕ್ ಪೋಸ್ಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಇದನ್ನು ಮಾಡಿದ್ದು ತೇಜ್ ಬಹಾದೂರ್ ಯಾದವ್ ನ ಪತ್ನಿಯಾ ಅಥವಾ ಅವರ ಹೆಸರಲ್ಲಿ ಬೇರಯವರು ಮಾಡಿದ್ದಾ ಎಂಬುದು ತಿಳಿದುಬರಬೇಕಿದೆ.
ಆದರೆ, ತೇಜ್ ಬಹಾದೂರ್ ಯಾದವ್ ಮಾಡಿದ್ದ ಆ ವಿಡಿಯೋ ಕುರಿತಂತೆ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರಕಾರ ಮತ್ತು ಗಡಿ ಭದ್ರತಾ ಪಡೆ, ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬುದನ್ನು ಸಾರಾಸಗಟಾಗಿ ನಿರಾಕರಿಸಿದೆ. ಆದರೆ, ಲಕ್ಷಾಂತರ ಜನರು ಯಾದವ್ ಅವರನ್ನು ಬೆಂಬಲಿಸಿದ್ದಾರೆ. [ಬಿಎಸ್ಎಫ್ ಯೋಧನ ಬೆನ್ನಿಗೆ ನಿಂತ ಕ್ರೀಡಾ ತಾರೆಗಳು]
ಗಡಿ ಭದ್ರತಾ ಪಡೆಯ ಯೋಧರಿಗೆ ಬೆಳಿಗ್ಗೆ ಸುಟ್ಟುಹೋದ ಚಪಾತಿಯ ಜೊತೆ ಕೇವಲ ಚಹಾ ನೀಡಲಾಗುತ್ತಿದೆ, ನಂತರ ನೀಡಲಾಗುವ ದಾಲ್ ಗುಣಮಟ್ಟವೂ ಕಳಪೆಯದಾಗಿದೆ. ಹೀಗಿದ್ದಾಗ ಇಡೀ ದಿನ ನಿಂತು ಭಾರತದ ಗಡಿಯನ್ನು ರಕ್ಷಿಸಬೇಕೆಂದು ಹೇಗೆ ನಿರೀಕ್ಷಿಸುತ್ತೀರಿ ಎಂದು ವಿಡಿಯೋದಲ್ಲಿ ತೇಜ್ ಬಹಾದೂರ್ ಆರೋಪಿಸಿದ್ದರು.
ಜವಾನರಿಗೆ ಮೀಸಲಾಗಿರುವ ಆಹಾರವನ್ನು ಕೆಲ ಅಧಿಕಾರಿಗಳು ಮಾರಾಟ ಮಾಡುತ್ತಾರೆ ಎಂದು ಕೂಡ ತೇಜ್ ಬಹಾದೂರ್ ಯಾದವ್ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ, ಬೇರೆ ಯಾವ ಜವಾನನಿಗೂ ಇಂಥ ತೊಂದರೆ ಬಂದಿಲ್ಲ ಎಂದು ಬಿಎಸ್ಎಫ್ ಹೇಳಿದೆ. ತೇಜ್ ಬಹಾದೂರ್ ಕುಡುಕ ಮತ್ತು ಇಂಥ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ ಎಂದೂ ದೂರಿದೆ. [ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ]