ಅಂತ್ಯ ಸಂಸ್ಕಾರದ ವೇಳೆಯೂ ಸದ್ದು ಮಾಡಿದ ನೋಟು ರದ್ದು
ಮಧ್ಯಪ್ರದೇಶ, ನವೆಂಬರ್ 10: ಶವಾಗಾರ ಹಾಗೂ ಸ್ಮಶಾನಗಳಲ್ಲಿ ಕೂಡ 500, 1000 ರುಪಾಯಿಯ ನೋಟುಗಳನ್ನು ಸ್ವೀಕರಿಸದೆ ಸಮಸ್ಯೆ ಎದುರಿಸುವಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 500, 1000 ರುಪಾಯಿ ನೋಟು ರದ್ದು ಘೋಷಣೆ ಮಾಡಿದ ನಂತರ ಬುಧವಾರ ಮಧ್ಯಪ್ರದೇಶದ ಛತ್ತರ್ ಪುರ್ ವಯಸ್ಸಾದ ಮಹಿಳೆಯೊಬ್ಬರ ಶವ ಸಂಸ್ಕಾರಕ್ಖಾಗಿ ಕುಟುಂಬವೊಂದು ಸಂಜೆ ತನಕ ಕಾಯುವಂಥ ಪರಿಸ್ಥಿತಿ ಎದುರಾಗಿದೆ.
ಆ ಕುಟುಂಬದ ಬಳಿ ಸಣ್ಣ ಮೊತ್ತದ ನೋಟುಗಳಿರಲಿಲ್ಲ. ಅಂತ್ಯ ಸಂಸ್ಕಾರದ ವಿಧಿವಿಧಾನಕ್ಕಾಗಿ ಬೇಕಾದ ವಸ್ತುಗಳನ್ನು ನೀಡುವುದಕ್ಕೆ ಅಂಗಡಿ ಮಾಲೀಕರು ನಿರಾಕರಿಸಿದ್ದಾರೆ. ಕೊನೆಗೆ ಸ್ಥಳೀಯರ ಬಳಿ ಹಣ ಸಂಗ್ರಹಿಸಿ, ಶವ ಸಂಸ್ಕಾರ ಮಾಡಲಾಗಿದೆ.
ಛತ್ತರ್ ಪುರ್ ನ ಕೋಟ್ ವಾಲಿ ಪ್ರದೇಶದ ಎಪ್ಪತ್ತು ವರ್ಷ ವಯಸ್ಸಿನ ಮಹಿಳೆ ರಾಜ್ ಬಾಯಿ ಅಹಿರ್ವಾರ್ ಮಂಗಳವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆಯ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸುವುದಕ್ಕೆ ಬೇಕಾದ ವಸ್ತುಗಳನ್ನು ತರುವುದಕ್ಕೆ ಅಂಗಡಿಗೆ ತೆರಳಿದ್ದಾರೆ.
ಆ ವೇಳೆ ಅಂಗಡಿ ಮಾಲೀಕರು 500, 1000 ರುಪಾಯಿಯ ನೋಟುಗಳನ್ನು ಸ್ವೀಕರಿಸುವುದಕ್ಕೆ ನಿರಾಕರಿಸಿದ್ದಾರೆ. ಆ ದುಃಖದಲ್ಲೂ ತಮ್ಮ ಬಳಿಯಿರುವ ನೋಟಿಗೆ ಸಣ್ಣ ಮೊತ್ತದ ನೋಟನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಆ ಕುಟುಂಬದವರು ಅಲೆದಾಡಿದ್ದಾರೆ. ಕಡೆಗೆ ನೆರೆಮನೆಯವರು ಮುಂದೆ ಬಂದು ಹಣ ಸಂಗ್ರಹಿಸಿ ಕೊಟ್ಟ ನಂತರ, ಸಂಜೆ ಹೊತ್ತಿಗೆ ಅಂತ್ಯ ಸಂಸ್ಕಾರ ನಡೆದಿದೆ.