ಲಸಿಕೆ ಅಭಿಯಾನ ಕುರಿತ ವಿವಾದಾತ್ಮಕ ಹೇಳಿಕೆ; ದೂರವುಳಿದ ಸೆರಂ ಸಂಸ್ಥೆ
ನವದೆಹಲಿ, ಮೇ 24: ದೇಶದಲ್ಲಿ ಕೊರೊನಾ ಲಸಿಕೆಗಳ ಲಭ್ಯತೆ ಬಗ್ಗೆ ತಿಳಿದುಕೊಳ್ಳದೇ ಎಲ್ಲಾ ವಯೋಮಾನದವರಿಗೆ ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಘೋಷಿಸಿದೆ ಎಂದು ಈಚೆಗೆ ಸೆರಂ ಇನ್ಸ್ಟಿಟ್ಯೂಟ್ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿಕೆ ನೀಡಿದ್ದು, ಈ ಹೇಳಿಕೆಯಿಂದ ಸಂಸ್ಥೆ ಅಂತರ ಕಾಯ್ದುಕೊಂಡಿದೆ.
ಕಾರ್ಯನಿರ್ವಾಹಕ ನಿರ್ದೇಶಕರ ಈ ಹೇಳಿಕೆಯು ಕಂಪನಿಯ ನಿಲುವಲ್ಲ ಎಂದು ಮೇ 22ರಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಭಾರತದ ಜನರನ್ನು ನಿರ್ಲಕ್ಷಿಸಿ ಲಸಿಕೆ ರಫ್ತು ಮಾಡಿಲ್ಲ; ಅದಾರ್ ಪೂನಾವಾಲಾ
ಸೆರಂ ಇನ್ಸ್ಟಿಟ್ಯೂಟ್ನ ಸಿಇಒ ಅದಾರ್ ಪೂನಾವಾಲಾ ಪರವಾಗಿ ಈ ಸ್ಪಷ್ಟನೆ ನೀಡಲಾಗಿದೆ. ಈ ಹೇಳಿಕೆ ಕಂಪನಿಯ ನಿಲುವಲ್ಲ. ಕೊರೊನಾ ಲಸಿಕೆ ಅಭಿಯಾನದ ಕುರಿತ ಕಾರ್ಯನಿರ್ವಾಹಕ ನಿರ್ದೇಶಕರ ಹೇಳಿಕೆಯಿಂದ ಕಂಪನಿಯು ಅಂತರ ಕಾಯ್ದುಕೊಂಡಿದೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.
ಸೆರಂ ಇನ್ಸ್ಟಿಟ್ಯೂಟ್ ಸದ್ಯ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲು ಬದ್ಧವಾಗಿದೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಹೆಗಲು ಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.
ದೇಶದಲ್ಲಿ ಕೊರೊನಾ ಲಸಿಕೆ ಸಂಗ್ರಹದ ಬಗ್ಗೆ ಅರಿವಿಲ್ಲದೇ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಪರಿಗಣಿಸದೇ ಕೇಂದ್ರ ಸರ್ಕಾರ 18 ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅನುಮತಿ ನೀಡಿದೆ ಎಂದು ಎಸ್ಐಐ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಶುಕ್ರವಾರ ಹೇಳಿಕೆ ನೀಡಿದ್ದರು.
ಆರೋಗ್ಯಕ್ಕೆ ಸಂಬಂಧಿಸಿದ ಇ-ಶೃಂಗ ಸಭೆಯಲ್ಲಿ ಮಾತನಾಡಿದ್ದ ಅವರು, "ದೇಶ ವಿಶ್ವ ಸಂಸ್ಥೆ ಮಾರ್ಗಸೂಚಿಗಳನ್ನು ಪಾಲಿಸಬೇಕು, ಅದಕ್ಕೆ ಪೂರಕವಾಗಿ ಲಸಿಕೆ ನಿಡಬೇಕು" ಎಂದಿದ್ದರು. ಆರಂಭದಲ್ಲಿ 300 ಮಿಲಿಯನ್ ಜನರಿಗೆ ಲಸಿಕೆ ನೀಡಬೇಕಿತ್ತು. ಇದಕ್ಕೆ 60 ಕೋಟಿ ಡೋಸ್ ಅಗತ್ಯವಿತ್ತು. ಆದರೆ ಆ ಗುರಿ ತಲುಪುವ ಮುನ್ನವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ನೀಡಿದೆ. ಉತ್ಪನ್ನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಬೇಕಿತ್ತು ಎಂದು ಹೇಳಿದ್ದರು.