ಆರ್ ಬಿಐನಿಂದ 3.6 ಲಕ್ಷ ಕೋಟಿ ಕೇಳುತ್ತಿಲ್ಲ, ಕೇಂದ್ರದಿಂದ ಸ್ಪಷ್ಟನೆ
ನವದೆಹಲಿ, ನವೆಂಬರ್ 9: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 3.6 ಲಕ್ಷ ಕೋಟಿ ರುಪಾಯಿ ಕೇಳುತ್ತಿಲ್ಲ. ಆರ್ಥಿಕ ಬಂಡವಾಳದ ವಿಚಾರವಾಗಿ ಕೇಂದ್ರ ಬ್ಯಾಂಕ್ ಗೆ ಒಂದು ಚೌಕಟ್ಟು ರೂಪಿಸುವ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ ಎಂದು ಶುಕ್ರವಾರ ಕೇಂದ್ರ ಸರಕಾರ ಹೇಳಿದೆ.
ಮಾಧ್ಯಮಗಳಲ್ಲಿ ಬಹಳ ತಪ್ಪಾದ ಊಹೆಗಳನ್ನು ಮಾಡಲಾಗುತ್ತಿದೆ. ಸರಕಾರದ ಆರ್ಥಿಕ ಲೆಕ್ಕಾಚಾರಗಳು ಸಂಪೂರ್ಣವಾಗಿ ಸರಿಯಾದ ಹಾದಿಯಲ್ಲೇ ಇದೆ. ಈಗ ಊಹಿಸುತ್ತಿರುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸರಕಾರಕ್ಕೆ 3.6 ಅಥವಾ 1 ಲಕ್ಷ ಕೋಟಿಯನ್ನು ವರ್ಗಾವಣೆ ಮಾಡುವಂತೆ ಕೇಳುವ ಯಾವ ಪ್ರಸ್ತಾವವೂ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ- ಆರ್ ಬಿಐ ಮಧ್ಯೆ ತಿಕ್ಕಾಟಕ್ಕೆ 3.6 ಲಕ್ಷ ಕೋಟಿಯೇ ಕಾರಣ!
ಬಂಡವಾಳದ ವಿಚಾರದಲ್ಲಿ ಕೇಂದ್ರ ಬ್ಯಾಂಕ್ ಗೆ ಸೂಕ್ತವಾದ ಆರ್ಥಿಕ ಚೌಕಟ್ಟನ್ನು ರೂಪಿಸುವ ಪ್ರಸ್ತಾವ ಮಾತ್ರ ನಮ್ಮ ಮುಂದೆ ಇದೆ. 2013-14ರಲ್ಲಿ ವಿತ್ತೀಯ ಕೊರತೆ ಪ್ರಮಾಣ 5.1% ಇತ್ತು. 2014-15ರ ನಂತರ ಆ ಪ್ರಮಾಣ ಕಡಿಮೆ ಮಾಡುತ್ತಾ ಬರುವಲ್ಲಿ ಸರಕಾರವು ಯಶಸ್ವಿಯಾಗಿದೆ. ನಾವು ಆರ್ಥಿಕ ವರ್ಷ 2018-19ರ ಕೊನೆಗೆ ವಿತ್ತೀಯ ಕೊರತೆ 3.3%ಗೆ ತರುವಲ್ಲಿ ಯಶ ಕಾಣುತ್ತೇವೆ. ಅದುಕೊಂಡಿದ್ದಕ್ಕಿಂತ ಈ ವರ್ಷ ಮಾರುಕಟ್ಟೆಯಿಂದ ಎಪ್ಪತ್ತು ಸಾವಿರ ಕೋಟಿ ಕಡಿಮೆ ಹಣ ಪಡೆಯಲಿದ್ದೇವೆ ಎಂದಿದ್ದಾರೆ.
ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?
ನರೇಂದ್ರ ಮೋದಿ ಸರಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬಳಿ ಇರುವ ತುರ್ತು ನಿಧಿಯನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇನ್ನು ಇದೇ ವೇಳೆ ಆರ್ ಬಿಐ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಡ್ಡಿ ಮಾಡಬಾರದು ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.