ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ "ಇದೊಂದೇ" ಕಾರಣವಾಯಿತೇ?
ನವದೆಹಲಿ, ಮಾರ್ಚ್ 17: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಗಾಂಧಿ ಕುಟುಂಬವೊಂದೇ ಹೊಣೆಯಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ.
ಗುರುವಾರ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು, ಕಾಂಗ್ರೆಸ್ ಜಿ-23 ಸದಸ್ಯರ ಸಾಲು ಸಾಲು ಸಭೆಗಳ ಬಗ್ಗೆ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆ ಸೋಲನ್ನು ಇಟ್ಟುಕೊಂಡು ಪಕ್ಷವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಪಂಚರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಜಿ-23 ತಂಡದಲ್ಲಿ ಕಾಣಿಸಿಕೊಂಡ ಶಶಿ ತರೂರ್
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಈ ವೇಳೆ ಸ್ವತಃ ಸೋನಿಯಾ ಗಾಂಧಿಯವರು ತಮ್ಮ ಪುತ್ರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆಗೆ ಸ್ಥಾನ ತ್ಯಾಗಕ್ಕೆ ಸಿದ್ಧರಾಗಿದ್ದರು ಎಂದು ಪಿ ಚಿದಂಬರಂ ಉಲ್ಲೇಖಿಸಿದರು.
ಗಾಂಧಿಗಳ ಪದತ್ಯಾಗಕ್ಕೆ ಸಿಡಬ್ಲ್ಯೂಸಿ ಒಪ್ಪಲಿಲ್ಲ:
"ಗಾಂಧಿಗಳು ಪಕ್ಷಕ್ಕಾಗಿ ತಮ್ಮ ಸ್ಥಾನವನ್ನು ಬಿಟ್ಟು ಕೆಳಗಿಳಿಯುವುದಕ್ಕೆ ಮುಂದಾಗಿದ್ದರು, ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಯಕರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಹಾಗಾದರೆ, ಈಗ ನಮ್ಮ ಮುಂದಿನ ಆಯ್ಕೆ ಏನು?, ನಾವು ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿದೆ. ಆದರೆ ಆಗಸ್ಟ್ ತಿಂಗಳಿಗೂ ಮೊದಲು ಈ ಪ್ರಕ್ರಿಯೆ ನಡೆಸುವುದಕ್ಕೆ ಸಾಧ್ಯವಿಲ್ಲ. ಹಾಗಿದ್ದರೆ ಇಂದು ಮತ್ತು ಆಗಸ್ಟ್ ನಡುವಿನ ಈ ಅವಧಿಯಲ್ಲಿ ನಾವು ಏನು ಮಾಡಬೇಕು. ಅಲ್ಲಿಯವರೆಗೆ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಗಾಂಧಿಯವರ ಮೇಲೆ ವಿಶ್ವಾಸವಿಡಬೇಕಿದೆ," ಎಂದು ಪಿ ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ದೇಶ ಮುನ್ನಡೆಸುವ ಪ್ರಬಲ ಶಕ್ತಿಯಾಗಲಿದೆ; ಸಿದ್ದರಾಮಯ್ಯ
ಶೀಘ್ರ ಚುನಾವಣೆಗೆ ಹಲವು ನಾಯಕರು ಒಪ್ಪಿಲ್ಲ:
ಎಐಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಚುನಾವಣೆಗೆ ಹೋಗುವಂತೆ ಸೋನಿಯಾ ಗಾಂಧಿಯವರು ಒತ್ತಾಯಿಸಿದ್ದರು, ಆದರೆ ಹಲವು ನಾಯಕರು ಇದಕ್ಕೆ ಒಪ್ಪಿಕೊಂಡಿಲ್ಲ ಎಂದರು. ಜಿ-23 ತಂಡದಲ್ಲಿ ಗುರುತಿಸಿಕೊಂಡಿರುವ ಕಪಿಲ್ ಸಿಬಲ್, ಹೊಸ ನಾಯಕತ್ವಕ್ಕೆ ಗಾಂಧಿ ಕುಟುಂಬದವರು ದಾರಿ ಮಾಡಿ ಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಿದಂಬರಂ, "ಇಂಥ ಹೇಳಿಕೆಗಳು ಸೂಕ್ತವಲ್ಲ. ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ಸೋಲುಗಳಿಗೆ ಕೇವಲ ಗಾಂಧಿ ಕುಟುಂಬದವರನ್ನಷ್ಟೇ ಹೊಣೆಯಾಗಿ ಮಾಡುವುದು ಸರಿಯಲ್ಲ," ಎಂದರು.
ನಾಯಕತ್ವ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲೂ ಜವಾಬ್ದಾರಿ:
ಜವಾಬ್ದಾರಿಯಿಂದ ಯಾರೂ ಓಡಿ ಹೋಗುವುವಂತಿಲ್ಲ,. ಆದರೆ, ನಾಯಕತ್ವದ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲೂ ಜವಾಬ್ದಾರಿ ಎನ್ನುವುದು ಇರುತ್ತದೆ. ಅದು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಮಟ್ಟದಲ್ಲೇ ಇರಬಹುದು. ಸೋಲಿಗೆ ಕೇವಲ ಎಐಸಿಸಿ ನಾಯಕತ್ವದ ಜವಾಬ್ದಾರಿ ಹೊಣೆ ಎಂದು ಹೇಳುವುದು ಸರಿಯಲ್ಲ," ಎಂದು ಚಿದಂಬರಂ ತಿಳಿಸಿದರು.
ಕಾಂಗ್ರೆಸ್ ಪಕ್ಷವನ್ನು ಒಡೆಯಬೇಡಿ ಎಂದ ಚಿದಂಬರಂ:
ಎಐಸಿಸಿ ಅಧ್ಯಕ್ಷರ ಸ್ಥಾನಕ್ಕೆ ತುರ್ತು ಚುನಾವಣೆ ನಡೆಸಬೇಕು ಎನ್ನುವ ಜಿ-23 ಸದಸ್ಯರ ನಿಲುವಿಗೆ ಪಿ.ಚಿದಂಬರಂ ತಿರುಗೇಟು ನೀಡಿದರು. "ಆಗಸ್ಟ್ ವೇಳೆಗೆ ಪಕ್ಷಕ್ಕೆ ಪೂರ್ಣ ಪ್ರಮಾಣದ ನಾಯಕತ್ವ ಸಿಗಲಿದೆ. ಆದರೆ ಅಲ್ಲಿಯವರೆಗೆ ಯಾರೊಬ್ಬರೂ ಪಕ್ಷವನ್ನು ಒಡೆಯುವ ಕೆಲಸವನ್ನು ಮಾಡಬಾರದು. ಅದರ ಬದಲಿಗೆ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡಿರಿ. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಪಕ್ಷದ ಸಂಘಟನೆಯು ಬಹುಮುಖ್ಯ ಪಾತ್ರ ವಹಿಸಲಿದೆ," ಎಂದು ಪಿ ಚಿದಂಬರಂ ಸಲಹೆ ನೀಡಿದ್ದಾರೆ.
ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದ ಸೋನಿಯಾ ಗಾಂಧಿ:
ಪಂಚ ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ನಂತರ ಮಾರ್ಚ್ 13ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದು, ಅಲ್ಲಿ ನಡೆದ ಚರ್ಚೆ ಕುರಿತು ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಅಸಮಾಧಾನ ಹೊರ ಹಾಕಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿಯವರನ್ನೇ ಮುಂದುವರಿಸುವುದಕ್ಕೆ ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಮೂಲಗಳ ಪ್ರಕಾರ, ಗಾಂಧಿ ಕುಟುಂಬದಿಂದಾಗಿ ಕಾಂಗ್ರೆಸ್ ಪಕ್ಷವು ದುರ್ಬಲಗೊಳ್ಳುತ್ತಿದೆ ಎಂದು ಕೆಲವರು ಭಾವಿಸುತ್ತಿರುವ ಬಗ್ಗೆ ಸೋನಿಯಾ ಗಾಂಧಿ ಸಭೆಯಲ್ಲಿ ಪ್ರಸ್ತಾಪಿಸಿದರು. ನಿಮ್ಮೆಲ್ಲರಲ್ಲೂ ಅದೇ ರೀತಿಯ ಅಭಿಪ್ರಾಯವಿದ್ದರೆ, ನಾನು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ," ಎಂದು ಅವರು ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದರು.
ಮಾರ್ಚ್ 13ರಂದು ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಅಂಥ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಅದರ ಬದಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರುವುದಕ್ಕೆ ಸೋನಿಯಾ ಗಾಂಧಿ ಸೂಚಿಸಿದ್ದರು.