"ಕಾಂಗ್ರೆಸ್ ಮಾತ್ರವಲ್ಲ, ಬಿಎಸ್ಪಿ, ಎಸ್ಪಿ ಎನ್ಸಿಪಿ ಕೂಡ ಗೆಲ್ಲಲು ಆಗುತ್ತಿಲ್ಲ"
ನವದೆಹಲಿ, ಏಪ್ರಿಲ್ 3: ಚುನಾವಣೆಗಳಲ್ಲಿ ಕಾಂಗ್ರೆಸ್ ಮಾತ್ರವಲ್ಲ, ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಕೂಡ ಜಯ ಸಾಧಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ದೇಶದ ಸಾಂಸ್ಥಿಕ ಚೌಕಟ್ಟನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದೆ ಹಾಗೂ ಅದರ ಹಣಕಾಸು, ಮಾಧ್ಯಮ ಪ್ರಾಬಲ್ಯ ಇದಕ್ಕೆ ಕಾರಣವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ನನ್ನ ಹೆಸರು ಮೋದಿ ಅಲ್ಲ, ನಾನಂತೂ ಮೋದಿ ಅಲ್ಲವೇ ಅಲ್ಲ; ರಾಹುಲ್
ಯುಎಸ್ನ ರಾಜಕೀಯ ವ್ಯವಹಾರಗಳ ಮಾಜಿ ಉಪಕಾರ್ಯದರ್ಶಿ ಹಾಗೂ ಹಾರ್ವರ್ಡ್ ಕೆನಡಿ ಶಾಲೆಯ ಪ್ರಾಧ್ಯಾಪಕರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ರಾಹುಲ್, "ಅಸ್ಸಾಂನಲ್ಲಿ ನಮ್ಮ ಪಕ್ಷದ ಪ್ರಚಾರ ನಡೆಸುತ್ತಿರುವವರೊಬ್ಬರು ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲಿ ಮತಯಂತ್ರಗಳನ್ನು ಸಾಗಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ" ಎಂದು ದೂರಿದರು.
ಚುನಾವಣೆಗಳಲ್ಲಿ ಹೋರಾಟ ಮಾಡಲು ಸಾಂಸ್ಥಿಕ ಚೌಕಟ್ಟು ಬೇಕು. ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ಬೇಕು. ಮುಕ್ತ ಮಾಧ್ಯಮ ಬೇಕು. ಆರ್ಥಿಕ ಸಮಾನತೆ ಬೇಕು. ರಾಜಕೀಯ ಪಕ್ಷವನ್ನು ನಿರ್ವಹಿಸಲು ಸಂಪೂರ್ಣ ರಚನಾತ್ಮಕ ವ್ಯವಸ್ಥೆಗಳು ಬೇಕು. ಆದರೆ ಅವ್ಯಾವೂ ನಮ್ಮ ಬಳಿ ಇಲ್ಲ" ಎಂದು ಹೇಳಿದರು.
ಶುಕ್ರವಾರ, ಅಸ್ಸಾಂನ ರತಬಾಡಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಚುನಾವಣಾಧಿಕಾರಿ ಮತದಾನದ ಬಳಿಕ ಮತಯಂತ್ರವನ್ನು ಬಿಜೆಪಿ ಅಭ್ಯರ್ಥಿಯ ಪತ್ನಿಯ ಕಾರಿನಲ್ಲಿ ಸಾಗಿಸುತ್ತಿದ್ದುದು. ಈ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.