ನನ್ನ ಸೋಲಿಗೆ ಕಾರಣ EVM ಅಲ್ಲ, ನಂಬಿಕೆ ದ್ರೋಹ: ಅಪರ್ಣಾ ಯಾದವ್
ನನ್ನ ಸೋಲಿಗೆ ಕಾರಣ EVM ಅಲ್ಲ, ಎಸ್ಪಿ ನಾಯಕರ ನಂಬಿಕೆ ದ್ರೋಹ ಎಂದು ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಹೇಳಿದ್ದಾರೆ.
ಲಕ್ನೊ, ಏಪ್ರಿಲ್ 4: ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವಾಗಿದ್ದು, ಮತಯಂತ್ರದಲ್ಲಿನ ದೋಷವಲ್ಲ, ಬದಲಾಗಿ ನಮ್ಮದೇ ಪಕ್ಷದ ಕೆಲ ನಾಯಕರ ನಂಬಿಕೆ ದ್ರೋಹ ಎಂದು ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಹೇಳಿದ್ದಾರೆ.
ಇದುವರೆಗೂ ಉತ್ತರ ಪ್ರದೇಶದ ಸೋಲಿಗೆ ಬೇರೆ ಬೇರೆ ಪಕ್ಷದ ನಾಯಕರು ಮತಯಂತ್ರದಲ್ಲಿನ ದೋಷವೇ ಕಾರಣ ಎಂದಿದ್ದನ್ನು ಉಲ್ಲೇಖಿಸದಿದ್ದರೂ, ಅಂಥ ಆರೋಪಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ ಅಪರ್ಣಾ ಯಾದವ್, ತನ್ನ ಸೋಲಿಗೆ ಮತಯಂತ್ರ ಕಾರಣವಲ್ಲ ಎಂದು ನೇರವಾಗಿ ಹೇಳಿದ್ದಾರೆ.[ಅಪ್ಪನನ್ನೇ ಗೌರವಿಸದವನು ಇನ್ಯಾರನ್ನು ಗೌರವಿಸೋಕೆ ಸಾಧ್ಯ?: ಮುಲಾಯಂ]
ಏಪ್ರಿಲ್ 1 ರಂದು ಲಕ್ನೋದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಮುಲಾಯಂ ಸಿಂಗ್ ಯಾದವ್, ತಮ್ಮ ಮಗ ಅಖಿಲೇಶ್ ಮೇಲೆ ಹರಿಹಾಯ್ದಿದ್ದರು. ಅಪ್ಪನನ್ನೇ ಗೌರವಿಸದ ಮಗ ಇನ್ಯಾರನ್ನು ಗೌರವಿಸೋಕೆ ಸಾಧ್ಯ ಎಂದು ಪ್ರಶ್ನಿಸಿ, ಮಗನ ಮೇಲಿನ ತಮ್ಮ ಅಸಮಾಧಾನವನ್ನು ಕಾರ್ಯಕರ್ತರೆದುರು ಹೊರಹಾಕಿದ್ದರು.[ಉತ್ತರಪ್ರದೇಶ ಸಿಎಂ ಟ್ವಿಟ್ಟರ್ ತೊಳೆದ ಸಮಾಜವಾದಿಗಳು]
ಇದೀಗ ಅವರ ಇನ್ನೊಬ್ಬ ಮಗ ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಸಹ ಅಖಿಲೇಶ್ ಅವರ ಹೆಸರು ಸೂಚಿಸದಿದ್ದರೂ, ಎಸ್ಪಿಯ ಸೋಲಿಗೆ ಮತ್ತು ತನ್ನ ಸೋಲಿಗೆ ತಮಗೆ ತೀರಾ ಹತ್ತಿರದ ವ್ಯಕ್ತಿಯೇ ಕಾರಣ ಎಂದಿದ್ದಾರೆ.[ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕೆ ಅಖಿಲೇಶ್ ರಾಜಿನಾಮೆ]
ಲಕ್ನೋ ಕಂಟೋನ್ಮೆಂಟ್ ನಿಂದ ಸ್ಪರ್ಧಿಸಿದ್ದ ಮುಲಾಯಂ ಸಿಂಗ್ ರ ಚೋಟಿ ಬಹು ಅಪರ್ಣಾ ಯಾದವ್, 'ಗೆಲ್ಲುವ ವಿಶ್ವಾಸ ಹೊಂದಿದ್ದರೂ, ಸಮಾಜ ವಾದಿ ಪಕ್ಷದಲ್ಲಿ ಚುನಾವಣೆಯ ಸಂದರ್ಭದಲ್ಲಾದ ಕೆಲ ಬೆಳವಣಿಗೆಯಿಂದಾಗಿ ಸೋಲಬೇಕಾಯಿತು. ಅಲ್ಲದೆ ಚುನಾವಣೆ ತೀರಾ ಹತ್ತಿರದಲ್ಲಿದ್ದಾಗಲೂ ಪಕ್ಷದ ನಾಯಕರು ವೈಯಕ್ತಿಕ ಮನಸ್ತಾಪಗಳಿಂದಾಗಿ ಪ್ರಚಾರಕ್ಕೂ ಸರಿಯಾಗಿ ಹಾಜರಾಗದೆ ಪಕ್ಷದ ಸೋಲಿಗೆ ಕಾರಣರಾದರು' ಎಂದು ವಿಷಾದ ವ್ಯಕ್ತಪಡಿಸಿದರು.