ಜಾಕಿರ್ ನಾಯಕ್ ವಿರುದ್ಧ ಜಾಮೀನು ರಹಿತ ವಾರೆಂಟ್
ಜಾರಿ ನಿರ್ದೇಶನಾಲಯವು ಜಾಕಿರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸುವಂತೆ ಮುಂಬೈನ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಹಾಗಾಗಿ, ಆತನ ವಿರುದ್ಧ ವಾರೆಂಟ್ ಜಾರಿಯಾಗಿದೆ.
ಮುಂಬೈ, ಏಪ್ರಿಲ್ 13: ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಅವರ ವಿರುದ್ಧ ಮುಂಬೈನ ನ್ಯಾಯಾಲಯವು ಗುರುವಾರ, ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಜಾಕಿರ್ ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಆದಾಯ ತೆರಿಗೆ ಇಲಾಖೆಯು ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ನೋಟಿಸ್ ಜಾರಿಗೊಳಿಸಿದ್ದರೂ, ಇದಕ್ಕೆ ಜಾಕಿರ್ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.
ಈ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯವು ಜಾಕಿರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸುವಂತೆ ಮುಂಬೈನ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ನ್ಯಾಯಾಲಯ, ಗುರುವಾರ ಆತನ ವಿರುದ್ಧ ವಾರೆಂಟ್ ಜಾರಿಗೊಳಿಸಿದೆ.
ತಮ್ಮ ಮೇಲೆ ಆರ್ಥಿಕ ಅಕ್ರಮಗಳ ಆರೋಪ ಕೇಳಿಬರುತ್ತಲೇ ಸೌದಿ ಅರೇಬಿಯಾದಲ್ಲೇ ಅಡಗಿ ಕುಳಿತಿರುವ ಜಾಕಿರ್, ಭಾರತದಲ್ಲಿ ತಮ್ಮ ಪರವಾರಿ ವಾದ ಮಾಡಲು ವಕೀಲರನ್ನೊಬ್ಬರನ್ನು ನೇಮಿಸಿಕೊಂಡು ಈ ಪ್ರಕರಣದಲ್ಲಿ ಅನೇರವಾಗಿ ವಾದ ಮಂಡಿಸುತ್ತಿದ್ದಾರೆ.
ಮೊದಲು ಆದಾಯ ತೆರಿಗೆ ಇಲಾಖೆಯು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದಾಗ ಉತ್ತರಿಸಿದ್ದ ಜಾಕಿರ್, ತಾವು ವೀಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಆದರೆ, ಇಲಾಖೆಯು ಅದಕ್ಕೆ ಒಪ್ಪದೇ, ಖುದ್ದಾಗಿ ಮುಂಬೈನಲ್ಲಿನ ಆದಾಯ ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಉತ್ತರ ನೀಡಿತ್ತು.
ಆ ಉತ್ತರ ಬಂದ ನಂತರ ಜಾಕಿರ್ ನಿರುತ್ತರರಾಗಿದ್ದಾರೆ. ಆನಂತರ, ಜಾಕಿರ್ ಅವರಿಗೆ ಕಳುಹಿಸಲಾದ ಯಾವುದೇ ಸಮನ್ಸ್ ಗೆ ಅವರು ಉತ್ತರ ನೀಡಿರಲಿಲ್ಲ. ಹಾಗಾಗಿಯೇ, ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೊರೆ ಹೋಗಿತ್ತು.