ಪತ್ರಕರ್ತ ರಾಜದೀಪ್ ಸರ್ದೇಸಾಯಿ ವಿರುದ್ಧ ಸುಮೋಟೋ ದಾಖಲಾಗಿಲ್ಲ: ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ.16: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ರಾಜದೀಪ್ ಸರ್ದೆಸಾಯಿ ವಿರುದ್ಧ ಯಾವುದೇ ರೀತಿ ಸ್ವಯಂಪ್ರೇರಿತ ದೂರು (ಸುಮೋಟೋ) ದಾಖಲಿಸಿಕೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಮಂಗಳವಾರ ಸುಪ್ರೀಂಕೋರ್ಟ್ ಅಧಿಕೃತ ವೆಬ್ ಸೈಟ್ ನಲ್ಲಿ ಅಜಾಗರೂಕತೆಯಿಂದಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಬಗ್ಗೆ ತೋರಿಸಲಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟನೆ ನೀಡಿದೆ.
ಇಂಡಿಯಾ ಟುಡೇಯಲ್ಲಿ ಸದ್ಯಕ್ಕೆ ರಾಜ್ ದೀಪ್ ಸರ್ದೇಸಾಯಿ ಕಾಣಿಸಲ್ಲವೇಕೆ?
ಸುಪ್ರೀಂಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಬಗ್ಗೆ ಅವಹೇಳನ ಮಾಡಿರುವ ಆರೋಪ ಸಂಬಂಧ ವಕೀಲ ಓಂಪ್ರಕಾಶ್ ಪರಿಹಾರ ಮೂಲಕ 129ನೇ ವಿಧಿ ಅಡಿಯಲ್ಲಿ ಆಸ್ತಾ ಖುರಾನ್ ಎಂಬುವವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಧಾರವಾಗಿಟ್ಟುಕೊಂಡ ಸರ್ವೋಚ್ಛ ನ್ಯಾಯಾಲಯವು ಸುಮೋಟೋ ಕೇಸ್ ದಾಖಲಿಸಿದೆ.
ಕೋರ್ಟ್ ಮೊರೆಗೆ ಆಸ್ತಾ ಖುರಾನ್:
ಕಳೆದ ಸಪ್ಟೆಂಬರ್.17, 2020ರಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ತೆಗದುಕೊಳ್ಳುವುದಕ್ಕೆ ಆಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನಿರಾಕರಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಆಸ್ತಾ ಖುರಾನ್ ಅವರು ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆ:
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಕೋರ್ಟ್ 1 ರೂಪಾಯಿ ದಂಡ ವಿಧಿಸಿತ್ತು. ಕೋರ್ಟ್ ನೀಡಿದ ಈ ತೀರ್ಪಿನ ಬಗ್ಗೆ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅಣಕಿಸಿದ್ದರು. ಕೋರ್ಟ್ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ರೀತಿ ತೀರ್ಪು ನೀಡಿದೆ ಎಂದು ನಿಂದಿಸಿದ್ದರು. ಕಳೆದ 2020ರ ಆಗಸ್ಟ್.30ರಂದು ಈ ಸಂಬಂಧ ಟ್ವೀಟ್ ಮಾಡಿದ್ದರು.