ಪಾರ್ಲಿಮೆಂಟ್ನಲ್ಲಿ ಕಡಿಮೆ ಬೆಲೆಯ ಊಟಕ್ಕೆ ಬ್ರೇಕ್: 17 ಕೋಟಿ ಉಳಿತಾಯ
ನವದೆಹಲಿ, ಡಿಸೆಂಬರ್ 05: ಭಾರತದಲ್ಲಿ ಅತಿ ಕಡಿಮೆ ಹಣಕ್ಕೆ ಊಟ ದೊರೆಯುತ್ತಿದ್ದ ಸ್ಥಳ ಭಾರತ ಲೋಕಸಭೆ. ಆದರೆ ಇನ್ನು ಮುಂದೆ ಇಲ್ಲಿನ ಕ್ಯಾಂಟೀನ್ನಲ್ಲಿ ಕಡಿಮೆ ದರಕ್ಕೆ ಊಟ ದೊರಕುವುದಿಲ್ಲ.
ಹೌದು, ಲೋಕಸಭೆ ಕ್ಯಾಂಟೀನ್ ನಲ್ಲಿ ಸಬ್ಸಿಡಿ ದರದಲ್ಲಿ ಊಟ ಸಿಗುತ್ತಿದ್ದ ಕಾರಣ, ಅತ್ಯಂತ ಕಡಿಮೆ ದರಕ್ಕೆ ಇಲ್ಲಿ ಊಟ ದೊರಕುತ್ತಿತ್ತು. ಆದರೆ ಸಂಸದರೆಲ್ಲರೂ ಸೇರಿ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ.
ಕ್ಯಾಂಟೀನ್ ಊಟದ ದರದ ಮೇಲೆ ಶೇ 80% ಸಬ್ಸಿಡಿ ದೊರಕುತ್ತಿತ್ತು. ಹಾಗಾಗಿ ಅತ್ಯಂತ ಕಡಿಮೆ ದರಕ್ಕೆ ಪಾರ್ಲಿಮೆಂಟ್ನಲ್ಲಿ ಊಟ ದೊರಕುತ್ತಿತ್ತು. ಎರಡು ರೂಪಾಯಿಗೆ ಚಪಾತಿ. ಏಳು ರೂಪಾಯಿಗೆ ಅನ್ನ-ಸಾರು. ಮೂವತ್ತು ರೂಪಾಯಿಗೆ ಹೈದರಾಬಾದ್ ಚಿಕನ್ ಹೀಗೆ ಹಲವು ರೀತಿಯ ಸಸ್ಯಹಾರ, ಮಾಂಸಾಹಾರ ಖಾದ್ಯಗಳು ಅತ್ಯಂತ ಕಡಿಮೆ ಬೆಲೆಗೆ ಸಂಸದರಿಗೆ ದೊರಕುತ್ತಿದ್ದವು.
ಆದರೆ ಇದಕ್ಕೆ ಬ್ರೇಕ್ ಬಿದ್ದಿದ್ದು, ಸಂಸದರೆಲ್ಲೂ ಪಕ್ಷಭೇದವಿಲ್ಲದೆ, ಸ್ವಯಂಪ್ರೇರಿತರಾಗಿ ಸಬ್ಸಿಡಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ನ್ಯಾಯೋಚಿತ ದರಕ್ಕೆ ಖಾದ್ಯಗಳು ಪಾರ್ಲಿಮೆಂಟ್ನಲ್ಲಿ ದೊರಕಲಿವೆ.
ಸರ್ವ ಪಕ್ಷದ ಸದಸ್ಯರೂ ಇರುವ ಲೋಕಸಭೆ ವ್ಯವಹಾರ ಸಲಹಾ ಸಮಿತಿಯು ಸಭೆ ನಡೆಸಿ ಆಹಾರದ ಮೇಲೆ ಸಂಸದರಿಗೆ ಸಿಗುತ್ತಿರುವ ಸಬ್ಸಿಡಿ ಹಣವನ್ನು ತೆಗೆದುಹಾಕುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಸಬ್ಸಿಡಿಯನ್ನು ತೆಗೆದು ಹಾಕಲಾಗಿದೆ. ಇದರಿಂದ 17 ಕೋಟಿ ರೂಪಾಯಿಗಳು ಪ್ರತಿವರ್ಷ ಸರ್ಕಾರಕ್ಕೆ ಉಳಿತಾಯವಾಗಲಿದೆ.
ಇನ್ನು ಮುಂದೆ ಸಂಸದರ ಕ್ಯಾಂಟೀನ್, ಲಾಭ-ನಷ್ಟವಿಲ್ಲದ ವ್ಯವಹಾರ ಮಾದರಿಯಲ್ಲಿ ಆಹಾರವನ್ನು ನೀಡಲಿದೆ. ವಸ್ತುಗಳ ಬೆಲೆ ಹೆಚ್ಚಿದಾಗ ಹೆಚ್ಚಿನ ಬೆಲೆಗೆ, ವಸ್ತುಗಳ ಬೆಲೆ ಇಳಿದಾಗ ಕಡಿಮೆ ಬೆಲೆಗೆ ಆಹಾರ ಒದಗಿಸಲಿದೆ.