"ಗೋಲ್ದ್ ಅಮ್ನೆಸ್ಟಿ ಪರಿಚಯಿಸುವ ಯಾವ ಇರಾದೆಯೂ ಸರ್ಕಾರಕ್ಕಿಲ್ಲ"
ನವದೆಹಲಿ, ಅಕ್ಟೋಬರ್ 31: ಚಿನ್ನದ ರೂಪದಲ್ಲಿ ಇರಿಸಿರುವ ಅಘೋಷಿತ ಸಂಪತ್ತನ್ನು ಬಯಲು ಮಾಡಲು ಗೋಲ್ಡ್ ಅಮ್ನೆಸ್ಟಿ ಯೋಜನೆ ಪರಿಚಯಿಸುವ ಇರಾದೆ ಕೇಂದ್ರ ಸರ್ಕಾರಕ್ಕೇನೂ ಇಲ್ಲ ಎಂದು ಗುರುವಾರ ಅಧಿಕೃತ ಮೂಲಗಳು ತಿಳಿಸಿವೆ. ಅಘೋಷಿತ ಚಿನ್ನವನ್ನು ಇರಿಸಿಕೊಂಡಿದ್ದರೆ ಅದನ್ನು ಘೋಷಿಸಬೇಕು. ಇಲ್ಲದಿದ್ದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಅಮ್ನೆಸ್ಟಿ ಯೋಜನೆಯನ್ನು ಸರ್ಕಾರ ಪರಿಚಯಿಸುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು.
ಮಾಧ್ಯಮಗಳಲ್ಲಿ ವರದಿ ಆದಂತೆ ಆದಾಯ ತೆರಿಗೆ ಇಲಾಖೆ ಅಡಿಯಲ್ಲಿ ಯಾವುದೇ ಅಮ್ನೆಸ್ಟಿ ಯೋಜನೆ ಜಾರಿಗೆ ತರುವ ಚಿಂತನೆ ಸರ್ಕಾರಕ್ಕೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಬಜೆಟ್ ನ ಪ್ರಕ್ರಿಯೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಹೀಗೆ ಊಹಾತ್ಮಕ ಸಂಗತಿಗಳು ಸಹಜ ಎಂದು ಹೇಳಲಾಗಿದೆ.
ರಸೀತಿ ಇರದ ಚಿನ್ನ ಹೊಂದಿದ್ದರೆ ಭಾರಿ ತೆರಿಗೆ ಕಟ್ಟಬೇಕಾದೀತು ಎಚ್ಚರ!
ಕಪ್ಪು ಹಣದ ಮೂಲಕ ಚಿನ್ನ ಖರೀದಿ ಮಾಡಿದವರು ಅದನ್ನು ಘೋಷಿಸಿ, ಅಗತ್ಯ ಪ್ರಮಾಣದ ತೆರಿಗೆ ಪಾವತಿಸುವುದಕ್ಕೆ ಅಮ್ನೆಸ್ಟಿ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವರದಿ ಆಗಿತ್ತು. ಇನ್ನು ಮಾಧ್ಯಮಗಳಲ್ಲಿ ವರದಿ ಅದಂತೆ, ರಸೀದಿ ಇಲ್ಲದೆ ಚಿನ್ನ ಖರೀದಿ ಮಾಡಿದ್ದರೆ ಘೋಷಿಸಿಕೊಂಡ ಚಿನ್ನದ ಮೌಲ್ಯಕ್ಕೆ ಪೂರ್ತಿಯಾಗಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಒಂದು ಅಂದಾಜಿನಂತೆ, ಭಾರತೀಯರ ಬಳಿ ಇಪ್ಪತ್ತು ಸಾವಿರ ಟನ್ ಗೂ ಹೆಚ್ಚು ಚಿನ್ನ ಇರಬೇಕು. ಆದರೆ ಲೆಕ್ಕಕ್ಕೆ ನೀಡದ ಆಮದು, ಪಿತ್ರಾರ್ಜಿತವಾದ ಚಿನ್ನ ಇತರ ಲೆಕ್ಕಾಚಾರ ಎಲ್ಲ ಸೇರಿ ಇಪ್ಪತ್ತೈದರಿಂದ ಮೂವತ್ತು ಸಾವಿರ ಟನ್ ಇರಬಹುದು.
ಮೂರು ವರ್ಷಗಳ ಹಿಂದೆ ಕಪ್ಪು ಹಣವನ್ನು ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಆಗ ಚಲಾವಣೆಯಲ್ಲಿ ಇದ್ದ ಐನೂರು, ಸಾವಿರ ರುಪಾಯಿ ನೋಟುಗಳನ್ನು ನಿಷೇಧಿಸಲಾಗಿತ್ತು. ಆದರೆ ಶೇಕಡಾ 99ಕ್ಕೂ ಹೆಚ್ಚು ಪ್ರಮಾಣದಲ್ಲಿ ನಿಷೇಧಿತ ನೋಟುಗಳು ಬ್ಯಾಂಕ್ ಗಳಿಗೆ ವಾಪಸಾಗಿತ್ತು.