Surgical Strikes: ಪಾಕಿಸ್ತಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ಗೆ ಯಾವುದೇ ಸಾಕ್ಷಿಯಿಲ್ಲ ಎಂದ ದಿಗ್ವಿಜಯ ಸಿಂಗ್
ನವದೆಹಲಿ, ಜನವರಿ, 23: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರ ಸಾವನ್ನಪ್ಪಿದ ಬಗ್ಗೆ ಮತ್ತು ಸರ್ಜಿಕಲ್ ಸ್ಟ್ರೈಕ್ಗಳ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸೋಮವಾರ ಪ್ರಶ್ನೆಗಳನ್ನು ಎತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರ ಸುಳ್ಳು ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಪುರಾವೆ ನೀಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇನೆಯನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ತೀವ್ರವಾಗಿ ಪ್ರತಿಕ್ರಿಯೆ ನೀಡಿದೆ.
Republic Day 2023 : ಈ ಬಾರಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ನಾರಿಶಕ್ತಿ ಪ್ರದರ್ಶನ
"ಪುಲ್ವಾಮಾ ಭಯೋತ್ಪಾದನೆ ನಡೆಯುವ ಕೇಂದ್ರವಾಗಿದ್ದು, ಪ್ರತಿ ಕಾರನ್ನು ತಪಾಸಣೆ ಮಾಡಲಾಗುತ್ತದೆ. ಆದರೆ, ವಿರುದ್ಧ ದಿಕ್ಕಿನಿಂದ ಬಂದ ಸ್ಕಾರ್ಪಿಯೋ ಕಾರನ್ನು ಏಕೆ ತಪಾಸಣೆ ಮಾಡಲಿಲ್ಲ..? ಅದು ಡಿಕ್ಕಿ ಹೊಡೆದು ನಮ್ಮ 40 ಯೋಧರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಸರ್ಕಾರ ಸಂಸತ್ತಿನಲ್ಲಿ ಅಥವಾ ಸಾರ್ವಜನಿಕವಾಗಿ ಘಟನೆಯ ಬಗ್ಗೆ ಮಾಹಿತಿ ನೀಡಿಲ್ಲ" ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
|
ಸರ್ಜಿಕಲ್ ಸ್ಟ್ರೈಕ್ಗಳ ಬಗ್ಗೆ ಯಾವುದೇ ಪುರಾವೆಯಿಲ್ಲ
"ಅವರು ಸರ್ಜಿಕಲ್ ಸ್ಟ್ರೈಕ್ಗಳ ಬಗ್ಗೆ ಮಾತನಾಡುತ್ತಾರೆ. ನಾವು ಇಷ್ಟು ಜನರನ್ನು ಕೊಂದಿದ್ದೇವೆ, ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಇವುಗಳಿಗೆ ಯಾವುದೇ ಪುರಾವೆ ಇಲ್ಲ. ಅವರು ಸುಳ್ಳಿನ ಕಂತೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದಾರೆ" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವ ದಿಗ್ವಿಜಯ ಸಿಂಗ್ ಜಮ್ಮುವಿನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಮೋದಿ, ಶೆಹಬಾಜ್ ಷರೀಫ್ ನಡುವಿನ ಸಂಬಂಧವೇನು?
ನಂತರ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಅವರು, ಭಯೋತ್ಪಾದಕರ ಕೈಗೆ 300 ಕೆಜಿ ಆರ್ಡಿಎಕ್ಸ್ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸ್ನೇಹ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
'ಪುಲ್ವಾಮಾ ಘಟನೆಯಲ್ಲಿ ಭಯೋತ್ಪಾದಕರಿಗೆ 300 ಕೆಜಿ ಆರ್ಡಿಎಕ್ಸ್ ಎಲ್ಲಿಂದ ಸಿಕ್ಕಿತು..? ಡಿಎಸ್ಪಿ ದೇವೇಂದ್ರ ಸಿಂಗ್ ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಅವರನ್ನು ಏಕೆ ಬಿಡುಗಡೆ ಮಾಡಲಾಗಿದೆ..? ಪಾಕಿಸ್ತಾನ ಮತ್ತು ಭಾರತದ ಪ್ರಧಾನಿ ನಡುವಿನ ಸ್ನೇಹದ ಬಗ್ಗೆಯೂ ನಾವು ತಿಳಿದುಕೊಳ್ಳಬೇಕು' ಎಂದು ಹೇಳಿದ್ದಾರೆ.
ಸೇನೆಗೆ ಕಾಂಗ್ರೆಸ್ ಮಾಡುವ ಅವಮಾನವನ್ನು ಭಾರತ ಸಹಿಸುವುದಿಲ್ಲ: ಬಿಜೆಪಿ
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ಟೀಕಿಸಿದೆ. ಸೇನೆಗೆ ಕಾಂಗ್ರೆಸ್ ಅವಮಾನ ಮಾಡುತ್ತಿದ್ದು, ಇದನ್ನು ಸಹಿಸುವುದಿಲ್ಲ ಎಂದಿದೆ.
"ನಾವು ತುಂಬಾ ನೋವಿನಿಂದ ಈ ಬಗ್ಗೆ ಮಾತಾಡಬೇಕಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುತ್ತಿರಬಹುದು. ಆದರೆ, ಕಾಂಗ್ರೆಸ್ ಪಕ್ಷವು ಭಾರತವನ್ನು ವಿಭಜಿಸುತ್ತದೆ. ರಾಹುಲ್ ಗಾಂಧಿ ಮತ್ತು ಎಲ್ಲಾ ಕಾಂಗ್ರೆಸ್ ನಾಯಕರು ಸುದ್ದಿಯಲ್ಲಿ ಉಳಿಯಲು, ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಾರೆ. ಭಾರತ ತನ್ನ ಸೇನೆಯ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ" ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾಗಿದ್ದರು. ಇದಾದ ನಂತರ ಭಾರತವು 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಫೆಬ್ರವರಿ 2019 ರ ಪುಲ್ವಾಮಾದಲ್ಲಿ ಭದ್ರತಾ ಬೆಂಗಾವಲು ಪಡೆ ಮೇಲೆ ದಾಳಿ ನಡೆದು 40 ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದರು. ಈ ಘಟನೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಕಾರಣ ಎನ್ನಲಾಗಿತ್ತು. ಇದಾದ ನಂತರ ಪಾಕಿಸ್ತಾನದ ಭೂಪ್ರದೇಶದ ಆಳದಲ್ಲಿರುವ ಬಾಲಾಕೋಟ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರತೀಕಾರ ತೀರಿಸಿಕೊಂಡಿತು.
ದಿಗ್ವಿಜಯ್ ಸಿಂಗ್ ಹೇಳಿಕೆ ವೈಯಕ್ತಿಕ ಎಂದ ಕಾಂಗ್ರೆಸ್
ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ಗಳ ಬಗ್ಗೆ ಕಾಂಗ್ರೆಸ್ ಈ ಹಿಂದೆ ಹಲವು ಬಾರಿ ಪ್ರಶ್ನೆ ಮಾಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಟೀಕೆಗಳನ್ನು ಕಡಿಮೆ ಮಾಡಿದೆ.
ಇನ್ನು, ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ಗಳ ಕುರಿತು ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿಕೆಗಳಿಂದ ಕಾಂಗ್ರೆಸ್ ದೂರ ಉಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದೆ.
"ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರದೇ ಆಗಿದ್ದು, ಕಾಂಗ್ರೆಸ್ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಯುಪಿಎ ಸರ್ಕಾರ 2014ಕ್ಕೂ ಮುನ್ನ ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿತ್ತು. ರಾಷ್ಟ್ರೀಯ ಹಿತಾಸಕ್ತಿ ಹೊಂದಿರುವ ಸೇನೆಯ ಎಲ್ಲಾ ಕ್ರಮಗಳನ್ನು ಕಾಂಗ್ರೆಸ್ ಬೆಂಬಲಿಸಿದೆ. ಮುಂದೆಯೂ ಬೆಂಬಲಿಸುತ್ತದೆ" ಎಂದು ಎಐಸಿಸಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.