ಬಂಡಾಯ ಶಾಸಕರು ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸುವಂತಿಲ್ಲ: ಉದ್ಧವ್ ಠಾಕ್ರೆ
ನವದೆಹಲಿ, ಜೂನ್ 25: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಏಕನಾಥ್ ಶಿಂಧೆ ಮತ್ತು ಬಂಡಾಯ ಶಾಸಕರು ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸದಂತೆ ತಡೆಯಲು ನಿರ್ಣಯವನ್ನು ಅಂಗೀಕರಿಸಿದೆ.
ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಂಡಾಯ ಪಾಳಯ ಬಳಸದಂತೆ ನೋಡಿಕೊಳ್ಳಲು ಶಿವಸೇನೆ ಭಾರತ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಮುಂಬೈನಲ್ಲಿ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳ್ ಠಾಕ್ರೆ ಅವರ ಹೆಸರನ್ನು ಯಾರೂ ಬಳಸುವಂತಿಲ್ಲ ಎಂದು ಹೇಳಿದ್ದಾರೆ.
ಶಿವಸೈನಿಕರು ಇನ್ನೂ ಬೀದಿಗೆ ಇಳಿದಿಲ್ಲ, ಜೋಕೆ: ಮೋದಿ ಮತ್ತು ಶಾಗೆ ರಾವುತ್ ಎಚ್ಚರಿಕೆ
ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪಿಗೆ 'ಶಿವಸೇನಾ ಬಾಳಾಸಾಹೇಬ್' ಎಂದು ಹೆಸರಿಸಲು ನಿರ್ಧರಿಸಿದ್ದಾರೆ ಎಂದು ವರದಿಗಳಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅವರ ಅನರ್ಹತೆಗೆ ಒತ್ತಾಯಿಸುತ್ತಿರುವ ಒತ್ತಡದ ನಡುವೆ ಹೊಸ ಹೆಸರು ಇಡಲಾಗಿದೆ.
ಬಂಡಾಯ ಎದ್ದಿರುವ ಶಿವಸೇನೆ ಶಾಸಕರು ಕೂಡ ಬಾಳಾಸಾಹೇಬ್ ಮತ್ತು ಪಕ್ಷದ ಹೆಸರನ್ನು ಬೇರೆ ಯಾವುದೇ ಬಣಗಳು ಬಳಸದಂತೆ ನೋಡಿಕೊಳ್ಳಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಬಂಡಾಯದ ಬಿಸಿ ತಗ್ಗಿಸಲು 12 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿದ ಸಿಎಂ ಠಾಕ್ರೆ
ಚುನಾವಣಾ ಆಯೋಗಕ್ಕೆ ಪತ್ರ ಬರೆದ ಶಿವಸೇನೆ
"ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಶಿವಸೇನೆಯ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತೆ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಶಾಸಕರ ನಡವಳಿಕೆಯಿಂದಾಗಿ, ತಪ್ಪಿತಸ್ಥ ಶಾಸಕರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. 'ಶಿವಸೇನೆ' ಅಥವಾ ಬಾಳಾಸಾಹೇಬ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಯತ್ನಿಸುತ್ತಿದ್ದಾರೆ" ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
"ಏಕನಾಥ್ ಶಿಂಧೆ ಮತ್ತು ಅವರ ಸಂಗಡಿಗರು ಅವರು ಬಯಸಿದ ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸುವುದನ್ನು ನಾವು ತಡೆಯಲು ಸಾಧ್ಯವಿಲ್ಲ, ಅಂತಹ ಯಾವುದೇ ಪಕ್ಷವನ್ನು ಶಿವಸೇನೆ ಅಥವಾ ಬಾಳಾಸಾಹೇಬ್ ಹೆಸರಿನಲ್ಲಿ ಸ್ಥಾಪಿಸುವುದಾಗಲಿ ಅಥವಾ ಈ ಹೆಸರುಗಳನ್ನು ಬಳಸುವುದನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ. ನಾವು ನಿಮಗೆ ಮುಂಚಿತವಾಗಿ ತಿಳಿಸಲು ಬಯಸುತ್ತೇವೆ. ಶಿವಸೇನೆಯ ಯಾವುದೇ ಪಕ್ಷಾಂತರಿ ಶಾಸಕರು ಅಂತಹ ಯಾವುದೇ ಕ್ರಮವನ್ನು ಕೈಗೊಂಡರೆ ನಾವು ಗಮನಕ್ಕೆ ತರುತ್ತೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆ.
ಯಾವುದೇ ಪಕ್ಷದೊಂದಿಗೆ ವಿಲೀನ ಇಲ್ಲ
ತಮ್ಮ ಗುಂಪನ್ನು ಶಿವಸೇನೆ ಬಾಳಾಸಾಹೇಬ್ ಎಂದು ಕರೆಯಲಾಗುವುದು ಎಂದು ಬಂಡಾಯ ಶಿವಸೇನೆ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪಿಗೆ 'ಶಿವಸೇನಾ ಬಾಳಾಸಾಹೇಬ್' ಎಂದು ಹೆಸರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚೆನ್ನಿಗೆ ಚೂರಿ ಹಾಕಿದವರು ಎಂದ ಉದ್ಧವ್
ಮತ್ತೊಂದೆಡೆ ಶಿವಸೇನೆ ಹೋರಾಟದ ಹಾದಿಯಲ್ಲಿದೆ. ಉದ್ಧವ್ ಠಾಕ್ರೆ ಬಂಡಾಯ ಶಾಸಕರನ್ನು ಬೆನ್ನಿಗೆ ಚೂರಿ ಹಾಕುವವರು ಎಂದು ಕರೆದಿದ್ದಾರೆ. ಬಂಡಾಯ ಶಾಸಕರ ಕಚೇರಿಗಳನ್ನು ಶಿವಸೈನಿಕರು ಧ್ವಂಸ ಮಾಡಿದ ಘಟನೆಗಳೂ ವರದಿಯಾಗಿವೆ.
ಪುಣೆಯಲ್ಲಿರುವ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮುಂಬೈ ಪೊಲೀಸರು ಕೂಡ ಹೈ ಅಲರ್ಟ್ ಘೋಷಿಸಿದ್ದು, ನಗರದ ಎಲ್ಲಾ ರಾಜಕೀಯ ಪಕ್ಷದ ಕಚೇರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚಿಸಿದ್ದಾರೆ.
ಜೂನ್ 57ರಂದು ಉತ್ತರ ನೀಡಲು ಸೂಚನೆ
16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಈಗಾಗಲೇ ಅರ್ಜಿ ಸಲ್ಲಿಸಿದೆ. ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಝಿರ್ವಾಲ್ ಶನಿವಾರದಂದು ಸೇನಾ ಬಂಡಾಯ ಶಾಸಕರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.
ಬಂಡಾಯ ಸೇನೆಯ ಶಾಸಕರು ತಮ್ಮ ಹಕ್ಕುಗಳನ್ನು ಬೆಂಬಲಿಸುವ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಜೂನ್ 27 ರ ಸಂಜೆ 5 ಗಂಟೆಯೊಳಗೆ ಲಿಖಿತ ಉತ್ತರವನ್ನು ನೀಡುವಂತೆ ಕೇಳಲಾಗಿದೆ. ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಕಾರಣಕ್ಕಾಗಿ ಶಿವಸೇನೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿತ್ತು.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಶಿಂಧೆ ಬಂಡಾಯವನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡಿದೆ. ಶಿಂಧೆ ಜೊತೆಗೆ ಪಕ್ಷದ ಮತ್ತೋರ್ವ ಅತೃಪ್ತ ನಾಯಕ ಹಾಗೂ ಮಾಜಿ ಸಚಿವ ರಾಮದಾಸ್ ಕದಂ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇಬ್ಬರೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು. ಕದಂ ಪುತ್ರ, ಶಾಸಕ ಯೋಗೇಶ್ ಕದಂ ಗುವಾಹಟಿಯಲ್ಲಿ ಬಂಡಾಯ ಶಾಸಕರ ಗುಂಪನ್ನು ಸೇರಿದ್ದಾರೆ.
ಬಂಡಾಯ ಶಾಸಕರ ರಕ್ಷಣೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಏಕನಾಥ್ ಶಿಂಧೆ ಈ ಹಿಂದೆ ಆರೋಪಿಸಿದ್ದರು. ಅವರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ಪಕ್ಷದ ನಾಯಕ ಸಂಜಯ್ ರಾವತ್ ನಿರಾಕರಿಸಿದ್ದಾರೆ.