ಎಚ್ಚರ: "ಭಾರತದಲ್ಲಿ ಈಗಲೇ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡುವ ತುರ್ತು ಅಗತ್ಯವಿಲ್ಲ"
ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಮಾಣ ತಗ್ಗಿದ್ದು, ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗಿದೆ. ದೇಶದ ಬಹುಪಾಲು ಅರ್ಹ ಫಲಾನುಭವಿಗಳು ಒಂದು ಡೋಸ್ ಕೊವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಮಕ್ಕಳಿಗೆ ಲಸಿಕೆ ನೀಡುವ ತುರ್ತು ಅಗತ್ಯವಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮಕ್ಕಳ ಮೇಲೆ ಕೊರೊನಾವೈರಸ್ ಲಸಿಕೆಯ ಪರಿಣಾಮ ಹೇಗಿರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ಸಾಕ್ಷ್ಯಗಳು ಲಭ್ಯವಿಲ್ಲ. ಈ ಹಂತದಲ್ಲಿ ಮಕ್ಕಳಿಗೆ ತುರ್ತು ಲಸಿಕೆ ನೀಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಿಹಿಸುದ್ದಿ: ಡಿಸೆಂಬರ್ ಹೊತ್ತಿಗೆ ಮಕ್ಕಳಿಗಾಗಿ ಬಯೋಲಾಜಿಕಲ್-ಇ ಕಂಪನಿಯ ಕೊವಿಡ್-19 ಲಸಿಕೆ
ಭಾರತವು ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ 100 ಕೋಟಿ ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡುವುದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹಾಗೂ ವೈದ್ಯರು ಸಹ ಇದೇ ಸಲಹೆಯನ್ನು ನೀಡುತ್ತಿದ್ದಾರೆ. ಹಾಗಿದ್ದಲ್ಲಿ ಮಕ್ಕಳಿಗೆ ಲಸಿಕೆ ನೀಡುವುದಕ್ಕೂ ಮೊದಲು ಎಚ್ಚರ ಎಂದು ಆರೋಗ್ಯ ತಜ್ಞರು ಹೇಳುತ್ತಿರುವುದು ಏಕೆ ಎಂಬ ಪ್ರಶ್ನೆ ಉತ್ತರ ಇಲ್ಲಿದೆ ಓದಿ.
ಅಪೆಕ್ಸ್ ಡ್ರಗ್ಸ್ ರೆಗ್ಯುಲೇಟರ್ ಅನುಮೋದನೆ ಪಡೆದಿಲ್ಲ ಕೊವ್ಯಾಕ್ಸಿನ್
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ತುರ್ತು ಬಳಕೆಗೆ ವಿಷಯ ತಜ್ಞರ ಸಮಿತಿಯು ಅಕ್ಟೋಬರ್ 12ರಂದು ಶಿಫಾರಸ್ಸು ಮಾಡಿದೆ. ಆದರೆ ಭಾರತದ ಅಪೆಕ್ಸ್ ಡ್ರಗ್ಸ್ ರೆಗ್ಯುಲೇಟರ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಬಳಸುವುದಕ್ಕೆ ಯಾವುದೇ ರೀತಿ ಅನುಮೋದನೆಯನ್ನು ನೀಡಿಲ್ಲ.
ಮಕ್ಕಳಿಗೆ ದೀರ್ಘಾವಧಿ ಸುರಕ್ಷತೆ ಬಗ್ಗೆ ಖಾತ್ರಿಯಿಲ್ಲ
"ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯಿಂದ ಮಕ್ಕಳಲ್ಲಿ ಅಲ್ಫಾವಧಿ ಸುರಕ್ಷತೆ ಬಗ್ಗೆ ಮಾತ್ರ ಖಾತ್ರಿಪಡಿಸಲಾಗಿದೆ. ದೀರ್ಘಾವಧಿ ಸುರಕ್ಷತೆಯ ಬಗ್ಗೆ ನಮಗಿನ್ನೂ ತಿಳಿದಿಲ್ಲ. ಪ್ರತಿಕಾಯ ಶಕ್ತಿ ವೃದ್ಧಿಸುವ ವಿಚಾರದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳುವಂತಿಲ್ಲ. ದೀರ್ಘಾವಧಿ ಸುರಕ್ಷತೆ ಕುರಿತು ದೃಢಪಡಿಸಿಕೊಳ್ಳದ ಹೊರತೂ ಮಕ್ಕಳಿಗೆ ಲಸಿಕೆ ನೀಡುವ ಅಗತ್ಯವಿಲ್ಲ," ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್ಎಫ್ಐ) ಅಧ್ಯಕ್ಷ ಡಾ ಕೆ. ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.
ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿರಿ
"ಭಾರತದಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡುವುದಕ್ಕೂ ಮೊದಲು ಅದರ ಸುರಕ್ಷತೆ ಬಗ್ಗೆ ಉತ್ತರಿಸಲಾಗದ ಹಲವಾರು ಪ್ರಶ್ನೆಗಳಿವೆ. ಈ ನಿಟ್ಟಿನಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ತುರ್ತು ಲಸಿಕೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳುವುದಕ್ಕೂ ಮೊದಲು ಯೋಚಿಸಬೇಕಿದೆ. ಮಕ್ಕಳಿಗೆ ನಾವು ಏಕೆ ಕೊರೊನಾವೈರಸ್ ಲಸಿಕೆ ಹಾಕಬೇಕು ಹಾಗೂ ಯಾವ ಲಸಿಕೆಯನ್ನು ನೀಡಬೇಕು ಎಂಬುದರ ಬಗ್ಗೆ ಮೊದಲು ಸ್ಪಷ್ಟತೆಗೆ ಬರಲಿ," ಎಂದು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ (ವೆಲ್ಲೂರು) ವೆಲ್ಕಂ ಟ್ರಸ್ಟ್ ಸಂಶೋಧನಾ ಪ್ರಯೋಗಾಲಯದ ಲಸಿಕೆ ತಜ್ಞ ಮತ್ತು ಪ್ರಾಧ್ಯಾಪಕರಾದ ಡಾ. ಗಗನ್ ದೀಪ್ ಕಾಂಗ್ ಹೇಳಿದ್ದಾರೆ.
"ನಾವು ನಿಷ್ಕ್ರಿಯಗೊಳಿಸಿದ ವೈರಸ್ ಲಸಿಕೆಗಳನ್ನು ಬಳಸಬೇಕೇ ಅಥವಾ ನಾವು mRNA ಲಸಿಕೆಗಳಿಗಾಗಿ ಕಾಯಬೇಕೇ? ಎಂಬ ರೀತಿಯ ಅನೇಕ ಪ್ರಶ್ನೆಗಳಿಗೆ ಉದ್ದೇಶಪೂರ್ವಕ ಮತ್ತು ಸೂಕ್ತವಾಗಿ ಉತ್ತರಿಸಬೇಕಾಗಿದೆ. ಈ ಲಸಿಕೆಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಇನ್ನೂ ಸಾಕಷ್ಟು ಮಾಹಿತಿ ತಿಳಿದಿಲ್ಲ. ಇದೀಗ, ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮ್ಮಲ್ಲಿ ಸಾಕಷ್ಟು ಅಂಕಿ-ಅಂಶಗಳು ಸಹ ಇಲ್ಲ ಎಂದು ಡಾ ಕಾಂಗ್ ಹೇಳಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡುವ ತುರ್ತು ಅಗತ್ಯವಿಲ್ಲ ಎನ್ನಲು ಕಾರಣ?
ಕೊರೊನಾವೈರೈಸ್ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಅಥವಾ ಪುಟ್ಟ ಮಕ್ಕಳಲ್ಲಿ ಕೊವಿಡ್-19 ಲಸಿಕೆಯು ದೀರ್ಘಾವಧಿವರೆಗೂ ಸುರಕ್ಷತೆ ನೀಡುತ್ತದೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷ್ಯ ಅಥವಾ ಮಾಹಿತಿ ಸಿಕ್ಕಿಲ್ಲ. ಮಕ್ಕಳ ಮೇಲೆ ಲಸಿಕೆಯ ತುರ್ತು ಬಳಕೆಗೂ ಮೊದಲು ಈ ಕುರಿತು ಸ್ಪಷ್ಟತೆಯನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ವಯಸ್ಕರಲ್ಲಿ ಕೊರೊನಾವೈರಸ್ ಸೋಂಕಿನ ನಂತರದಲ್ಲಿ ಹಲವು ರೋಗದ ಲಕ್ಷಣಗಳು ಗೋಚರಿಸಿರುವುದನ್ನು ನಾವು ಗಮನಿಸಬಹುದು. ವಯಸ್ಕರಲ್ಲಿ ಪೋಸ್ಟ್-ಕೊವಿಡ್-19 ರೋಗ ಕಾಣಿಸಿಕೊಂಡಿದ್ದು, ವಿವಿಧ ರೀತಿ ಅಂಗಾಂಗ ಸಮಸ್ಯೆಗಳಿಗೆ ಕಾರಣವಾಗಿದೆ. ಮಕ್ಕಳಲ್ಲಿಯೂ ಈ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ಮಕ್ಕಳ ಅಂಗಗಳ ಮೇಲೆ ಕೋವಿಡ್ ನಂತರದ ಅಡ್ಡ ಪರಿಣಾಮಗಳು ಏನೆಂದು ನಮಗೆ ಗೊತ್ತಿಲ್ಲ. ಆದ್ದರಿಂದ, ಭಾರತವು ತರ್ಕಬದ್ಧವಾಗಿ ನೋಡಬೇಕು ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು," ಎಂದು ಐಸಿಎಂಆರ್ನ ಮಾಜಿ ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.