ಅಂತರ್-ರಾಜ್ಯ ಪ್ರಯಾಣಕ್ಕೆ RT-PCR ಪರೀಕ್ಷೆ ಅಗತ್ಯವಿಲ್ಲ: ಕಾರಣ ಗೊತ್ತೆ?
ನವದೆಹಲಿ, ಮೇ 04: ಭಾರತದಲ್ಲಿ ಅಂತರ ರಾಜ್ಯ ಪ್ರಯಾಣಿಕರಿಗೆ RT-PCR ವರದಿ ಕಡ್ಡಾಯ ಎಂಬ ನಿಯಮವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್) ತೆಗೆದು ಹಾಕುವಂತೆ ಸೂಚನೆ ನೀಡಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ನಡುವೆ RT-PCR ಪರೀಕ್ಷೆ ಮೇಲೆ ಒತ್ತಡ ಹೆಚ್ಚುತ್ತಿದೆ. ವೈದ್ಯಕೀಯ ಪ್ರಯೋಗಾಲಯದಲ್ಲಿ ನಿಜವಾದ ಸೋಂಕಿತರ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ಕೊರೊನಾಗೆ ಚುಚ್ಚಿದ ಮದ್ದು; ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಲೆಕ್ಕ!?
ಕೊರೊನಾವೈರಸ್ ಸೋಂಕಿನ ಲಕ್ಷಣ ಇಲ್ಲದವರು ಕೂಡಾ ಅಂತರ ರಾಜ್ಯ ಪ್ರಯಾಣಕ್ಕಾಗಿ RT-PCR ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಒತ್ತಡ ಹೆಚ್ಚುತ್ತಿದ್ದು, ನಿಜವಾದ ಸೋಂಕಿತರ ವರದಿ ಪತ್ತೆ ಮಾಡುವುದಕ್ಕೆ ವಿಳಂಬವಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.
RAT ಪರೀಕ್ಷೆಗೆ ಮೊದಲ ಆದ್ಯತೆ ನೀಡಲು ಮನವಿ
ಕೊರೊನಾವೈರಸ್ ಸೋಂಕನ್ನು ಪತ್ತೆ ಮಾಡುವುದರಲ್ಲಿ ರಾಪಿಡ್ ಆಂಟಿಜೆನಿಕ್ ಟೆಸ್ಟ್(RAT) ಕೂಡಾ ಪರಿಣಾಮಕಾರಿ ಎನಿಸಿದೆ. RT-PCR ಪರೀಕ್ಷೆಗೆ ಹೋಲಿಸಿದರೆ ಅದಕ್ಕಿಂತ ವೇಗವಾಗಿ ಈ ತಪಾಸಣೆಯ ವರದಿ ಕೈಗೆ ಸಿಗಲಿದೆ. ಕೇವಲ 15 ರಿಂದ 30 ನಿಮಿಷಗಳಲ್ಲಿ ಕೊವಿಡ್-19 ಸೋಂಕು ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ರಾಪಿಡ್ ಆಂಟಿಜೆನಿಕ್ ಟೆಸ್ಟ್ RT-PCR ಪರೀಕ್ಷೆಗೆ ಹೋಲಿಸಿದರೆ ಅಷ್ಟೊಂದು ಖಚಿತವಾಗಿ ಇರುವುದಿಲ್ಲ. ಆದರೆ ಸೋಂಕಿನ ಲಕ್ಷಣಗಳಿಲ್ಲದವರ ತಪಾಸಣೆಗೆ ಇದು ಉತ್ತಮ ಎನಿಸಿದೆ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ.
ಯಾವಾಗ RT-PCR ಪರೀಕ್ಷೆ ಅನಿವಾರ್ಯ
ರಾಪಿಡ್ ಆಂಟಿಜೆನಿಕ್ ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟದೆ ತಕ್ಷಣವೇ ಆ ಸೋಂಕಿತನಿಗೆ ಚಿಕಿತ್ಸೆ ನೀಡಲು ಆರಂಭಿಸಲಾಗುತ್ತದೆ. ಒಂದು ವೇಳೆ RAT ಪರೀಕ್ಷೆಯಲ್ಲಿ ಸೋಂಕು ನೆಗೆಟಿವ್ ಆಗಿದ್ದು, ಲಕ್ಷಣಗಳು ಗೋಚರಿಸಿದ ಸಂದರ್ಭಗಳಲ್ಲಿ RT-PCR ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮವಾಗಿರುತ್ತದೆ.
ಕೊರೊನಾವೈರಸ್ 2ನೇ ಅಲೆಯಿಂದ ಐಸಿಎಂಆರ್ ಮೇಲೆ ಒತ್ತಡ
ದೇಶದಲ್ಲಿ ಒಂದು ಕಡೆ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇದರ ಮಧ್ಯೆ ಸೋಂಕಿನ ಲಕ್ಷಣಗಳೇ ಇಲ್ಲದ ವ್ಯಕ್ತಿಗಳು ಅಂತರ ರಾಜ್ಯ ಪ್ರಯಾಣಕ್ಕಾಗಿ RT-PCR ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಐಸಿಎಂಆರ್ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಏಕೆಂದರೆ ಈಗಾಗಲೇ ಐಸಿಎಂಆರ್ ಸಿಬ್ಬಂದಿಯಲ್ಲಿ ಕೆಲವರಿಗೆ ಕೊವಿಡ್-19 ಸೋಂಕು ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ದೇಶದಲ್ಲಿ ಕೊವಿಡ್-19 2ನೇ ಅಲೆಯ ಹೊಡೆತ
ಕೊರೊನಾವೈರಸ್ ಸಾಂಕ್ರಾಮಿಕ ಅಲೆಯ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ಕೊವಿಡ್-19 ಸೋಂಕು ತಪಾಸಣೆ ವೇಗ ತಗ್ಗಿದೆ. ಈ ಹಿನ್ನೆಲೆ ಕಳೆದ 24 ಗಂಟೆಗಳಲ್ಲಿ 3,57,229 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಂದೇ ದಿನ 3,449 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 3,20,289 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 2,02,82,833 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1,66,13,292 ಸೋಂಕಿತರು ಈವರೆಗೂ ಗುಣಮುಖರಾಗಿದ್ದು, 2,22,408 ಸೋಂಕಿತರು ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ 34,47,133 ಕೊವಿಡ್-19 ಸಕ್ರಿಯ ಪ್ರಕರಣಗಳು ವರದಿಯಾಗಿವೆ.