ಕೊರೊನಾವೈರಸ್ ಕಾಲದಲ್ಲಿ ಗಂಗಾ ನದಿಯಲ್ಲಿ ತೇಲಿದ ಹೆಣಗಳ ಸಂಖ್ಯೆ ಎಷ್ಟು?
ನವದೆಹಲಿ, ಫೆಬ್ರವರಿ 8: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಸಾವಿನ ಪ್ರಕರಣ ವರದಿಯಾಗಿದ್ದವು. ಅಂದು ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮತ್ತು ಸಮಯವಿಲ್ಲದೇ ಅದೆಷ್ಟೋ ಮೃತದೇಹಗಳನ್ನು ಗಂಗಾ ನದಿಗೆ ಎಸೆಯಲಾಗಿದ್ದು, ಅದರ ಕುರಿತು ಇಂದಿಗೂ ಲೆಕ್ಕ ಸಿಕ್ಕಿಲ್ಲ.
ದೇಶದಲ್ಲಿ ಕೊವಿಡ್-19 ಎರಡನೇ ಅಲೆ ವೇಳೆ ಗಂಗಾ ನದಿಗೆ ಎಸೆಯಲಾದ ಮೃತದೇಹಗಳು ಎಷ್ಟು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ್ ತುಡು, ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ (ಎನ್ಎಂಸಿಜಿ) ನದಿಯಲ್ಲಿ ತೇಲುತ್ತಿರುವ ಮೃತದೇಹಗಳು ಮತ್ತು ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ರಾಜ್ಯ ಸರ್ಕಾರದಿಂದ ಕೇಳಿದೆ ಎಂದು ಹೇಳಿದ್ದಾರೆ.
ಯುಪಿ ನದಿಯಲ್ಲಿ ಹೆಣಗಳು ತೇಲುತ್ತಿದ್ದರೆ, ಜಾಹೀರಾತಿಗೆ ಕೋಟಿ ಕೋಟಿ ಖರ್ಚು: ಕೇಜ್ರಿವಾಲ್
ಉತ್ತರ ಪ್ರದೇಶ ಸರ್ಕಾರವು ಗಂಗಾ ನದಿ ಶುದ್ಧೀಕರಕ್ಕೆ ಸಂಬಂಧಿಸಿದಂತೆ ಯಾವ ರೀತಿ ಕ್ರಮಗಳನ್ನು ತೆಗೆದುಕೊಂಡಿದೆ. ಕೊವಿಡ್-19 ಕಾಲದಲ್ಲಿ ಮೃತದೇಹಗಳ ವಿಲೇವಾರಿ ಮತ್ತು ಮೃತದೇಹಗಳ ನಿರ್ವಹಣೆಗೆ ಏನೆಲ್ಲ ಕ್ರಮಗಳನ್ನು ಅನುಸರಿಸಿದೆ ಎಂಬುದರ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ್ ತುಡು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರ:
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಪ್ರಾಣ ಬಿಟ್ಟಿರುವವರಿಗೆ ಸಂಬಂಧಿಸಿದಂತೆ ಗಂಗಾ ನದಿಯಲ್ಲಿ ಎಸೆಯಲಾಗಿದೆ ಎಂದು ಅಂದಾಜಿಸಲಾದ ಮೃತದೇಹಗಳ ಸಂಖ್ಯೆಯ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ," ಎಂದು ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ್ ತುಡು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ನಮಾಮಿ ಗಂಗೆ ಕಾರ್ಯಕ್ರಮದಡಿಯಲ್ಲಿ ಮಾಧ್ಯಮ ಮತ್ತು ಪ್ರಚಾರ ಸೇರಿದಂತೆ ಸಂವಹನ ಮತ್ತು ಸಾರ್ವಜನಿಕ ಔಟ್ರೀಚ್ ಮುಖ್ಯಸ್ಥರ ಅಡಿಯಲ್ಲಿ 126 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಇತ್ತೀಚಿನ ಪುಸ್ತಕವೊಂದರಲ್ಲಿ, ಮಾಜಿ NMCG ಮಹಾನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಅವರು ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್ ಸಮಿತಿಗಳ ವರದಿಗಳ ಪ್ರಕಾರ, COVID-19 ರ ಎರಡನೇ ಅಲೆಯ ಸಮಯದಲ್ಲಿ ಗಂಗಾ ನದಿಗೆ ಎಸೆಯಲ್ಪಟ್ಟ ದೇಹಗಳ ಸಂಖ್ಯೆ 300ಕ್ಕಿಂತ ಹೆಚ್ಚಿಲ್ಲ ಎಂದು ಹೇಳಿದ್ದಾರೆ.
Recommended Video