ತಾನೇ ಸೃಷ್ಟಿಸಿದ ಆರೋಗ್ಯ ಸೇತು ಆಪ್ ಬಗ್ಗೆ ಮಾಹಿತಿಯೇ ಇಲ್ಲ ಎಂದ ಸರ್ಕಾರ!
ನವದೆಹಲಿ, ಅಕ್ಟೋಬರ್ 29: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಸೋಂಕಿತರ ವಿವರಗಳನ್ನು ಕಲೆಹಾಕಲು ಭಾರತ ಸರ್ಕಾರವೇ ಖುದ್ದು ಪ್ರಚಾರ ಮಾಡಿರುವ 'ಆರೋಗ್ಯ ಸೇತು' ಮೊಬೈಲ್ ಅಪ್ಲಿಕೇಷನ್ ಸೃಷ್ಟಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರ ತಿಳಿಸಿವೆ. ಈ ಪ್ರತಿಕ್ರಿಯೆ ಅತ್ಯಂತ ಕ್ಷುಲ್ಲಕವಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
'ಮಾಹಿತಿ ಒದಗಿಸಲು ಮೇಲ್ನೋಟಕ್ಕೆ ಅಡ್ಡಿಪಡಿಸಿದ ಮತ್ತು ನುಣುಚಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ನಿಮ್ಮ ಮೇಲೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಏಕೆ ದಂಡ ವಿಧಿಸಬಾರದು?' ಎಂದು ವಿವರಣೆ ನೀಡುವಂತೆ ಎನ್ಐಸಿಗೆ ಪಾರದರ್ಶಕ ಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಆರೋಗ್ಯ ಸೇತು ಆಪ್ ಇಲ್ಲದಿದ್ದರೆ ಸೌಲಭ್ಯ ನಿರಾಕರಿಸುವಂತಿಲ್ಲ: ಹೈಕೋರ್ಟ್ ಸ್ಪಷ್ಟ ನಿರ್ದೇಶನ
ಈ ಆಪ್ ಮೈಗೋವ್ ಮತ್ತು ಮೀಯಿಟ್ ವೈಗಳ ಮಾಲೀಕತ್ವ, ಉನ್ನತೀಕರಣ ಮತ್ತು ನಿರ್ವಹಣೆಯಲ್ಲಿದೆ ಎಂದು ಆಪ್ನ ವೆಬ್ಸೈಟ್ನಲ್ಲಿ ನಮೂದಿಸಲಾಗಿದೆ ಎನ್ನುವುದನ್ನು ಉಲ್ಲೇಖಿಸಿದ ಮಾಹಿತಿ ಆಯುಕ್ತೆ ವನಜಾ ಎನ್ ಸರ್ನಾ, ಅವರು ಸವಿವರ ಮಾಹಿತಿಯನ್ನು ಏಕೆ ನೀಡಿಲ್ಲ ಎಂಬುದನ್ನು ವಿವರಿಸುವಂತೆ ಸಚಿವಾಲಯದ ಸಿಪಿಐಒ ಅವರಿಗೆ ಸೂಚಿಸಿದರು. ಮುಂದೆ ಓದಿ.
ಸರ್ಕಾರದ್ದೇ ಸೃಷ್ಟಿ, ಆದರೆ ಅವರಿಗೆ ಮಾಹಿತಿ ಇಲ್ಲ
'ಆರೋಗ್ಯ ಸೇತು ಪ್ಲಾಟ್ಫಾರ್ಮ್ ಅನ್ನು ಭಾರತ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವಿನ್ಯಾಸಗೊಳಿಸಿರುವುದು, ಅಭಿವೃದ್ಧಿಪಡಿಸಿರುವುದು ಮತ್ತು ನಡೆಸುತ್ತಿರುವುದನ್ನು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಆಪ್ನ ಸೃಷ್ಟಿಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲದಿರುವುದು ಹೇಗೆ ಸಾಧ್ಯ? ಇದರ ಬಗ್ಗೆ ಎನ್ಐಸಿ ಸಿಪಿಐಒ ಕೂಡ ವಿವರಣೆ ನೀಡಬೇಕು' ಎಂದು ಅವರು ನಿರ್ದೇಶಿಸಿದರು.
ಆರ್ಟಿಐ ಕಾಯ್ದೆಯಡಿ ದೂರು
ಆರೋಗ್ಯ ಸೇತು ಆಪ್ ಸೃಷ್ಟಿಯ ಬಗ್ಗೆ ಸರ್ಕಾರದಿಂದ ವಿವರ ನೀಡುವಂತೆ ಕೋರಿ ಸೌರವ್ ದಾಸ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮಾಹಿತಿ ಆಯೋಗ ಈ ಸೂಚನೆ ನೀಡಿದೆ. ಸೌರವ್ ಅವರು ಕೇಳಿದ್ದ ವಿವರಗಳಿಗೆ ಸಚಿವಾಲಯ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರು ಆರ್ಟಿಐ ಕಾಯ್ದೆಯಡಿ ದೂರು ದಾಖಲಿಸಿದ್ದರು. ಯಾವ ಕಾನೂನಿನ ಅಡಿ ಅದು ಕಾರ್ಯನಿರ್ವಹಿಸುತ್ತಿದೆ, ಈ ಆಪ್ ಸಂಗ್ರಹಿಸಿದ ದತ್ತಾಂಶಗಳ ನಿರ್ವಹಣೆಗೆ ಸರ್ಕಾರ ಪ್ರತ್ಯೇಕ ಕಾನೂನು ತರಲಿದೆಯೇ? ಎಂದು ಅವರು ಕೇಳಿದ್ದರು.
ಕರ್ನಾಟಕದಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ!
ಆಪ್ ಅಭಿವೃದ್ಧಿ ಮಾಡಿದವರಿಗೇ ಗೊತ್ತಿಲ್ಲ
ಇದೇ ರೀತಿಯ ಅರ್ಜಿಯನ್ನು ಅವರು ಎನ್ಐಸಿಗೂ ಕೇಳಿದ್ದರು. ಆದರೆ ಅದು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರ ನೀಡಿತ್ತು. ಮಾಹಿತಿ ಆಯೋಗದ ವಿಚಾರಣೆ ವೇಳೆ ಹಾಜರಿದ್ದ ಸೌರವ್ ದಾಸ್, ಎನ್ಐಸಿಯ ಉತ್ತರ ಅಚ್ಚರಿಯುಂಟುಮಾಡಿದೆ. ಏಕೆಂದರೆ ಈ ಆಪ್ಅನ್ನು ಅಭಿವೃದ್ಧಿಪಡಿಸಿರುವುದು ಸ್ವತಃ ಎನ್ಐಸಿ. ಮೊಬೈಲ್ ಆಪ್ ಸೃಷ್ಟಿ ಮತ್ತು ಇತರೆ ವಿಚಾರಗಳ ಬಗ್ಗೆ ಸಚಿವಾಲಯ ಯಾವುದೇ ಮಾಹಿತಿ ಒದಗಿಸಿಲ್ಲ ಎಂದು ಆರೋಪಿಸಿದ್ದರು.
ಕಡತಗಳಿಲ್ಲದೆ ಆಪ್ ಸೃಷ್ಟಿಯಾಗುತ್ತದೆಯೇ?
ಆರೋಗ್ಯ ಸೇತು ಆಪ್ನ ತಯಾರಿಕೆ ಮತ್ತು ನಿರ್ವಹಣೆ ಬಗ್ಗೆ ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಪ್ರಶ್ನಿಸುವ ವರದಿಗಳನ್ನು ಪ್ರಕಟಿಸಿದ್ದವು. ಆಪ್ ಬಗ್ಗೆ ಸಂಪೂರ್ಣ ಪಾರದರ್ಶಕತೆ ತರುವುದು ಬಹಳ ಮುಖ್ಯ ಎಂದು ಸೌರವ್ ಹೇಳಿದ್ದರು. 'ಈ ಆಪ್ ತಯಾರಿಸುವ ಬಗ್ಗೆ ಯಾವ ಸಿಪಿಐಒಗಳಿಗೂ ಮಾಹಿತಿ ಇಲ್ಲ. ಹಾಗಾದರೆ ಆ ಕಡತಗಳು ಎಲ್ಲಿ? ನೀವು ಕೊಡುವ ಉತ್ತರ ಕ್ಷುಲ್ಲಕ್ಕವಾಗಿದೆ. ಯಾವುದೇ ಕಡತ ರವಾನೆಯಾಗದೆ ಆಪ್ ರಚನೆಯಾಗಲು ಸಾಧ್ಯವಿಲ್ಲ. ಇದು ಪ್ರಸ್ತುತದ ಸಮಸ್ಯೆ' ಎಂದು ಸರ್ನಾ ಕಿಡಿಕಾರಿದ್ದಾರೆ.