ತಲೆ ಮೇಲೆ ಹೆಲ್ಮೆಟ್ ಇಲ್ಲ, ಗಾಡಿಗೆ ಪೆಟ್ರೋಲ್ ಸಿಗಲ್ಲ
ಕಾಸರಗೋಡು, ಜುಲೈ, 01: ಕರ್ನಾಟಕದಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದಾಗ ಬೇಕು-ಬೇಡ ಎನ್ನುವ ಚರ್ಚೆ ವ್ಯಾಪಕವಾಗಿ ನಡೆದಿತ್ತು. ಅಂತಿಮವಾಗಿ ಸರ್ಕಾರ ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ.
ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್ ಗೆ ತರಳಿದರೆ ಪೆಟ್ರೋಲ್ ಸಿಗಲ್ಲ. ಇಂಥದ್ದೊಂದು ಕಾನೂನು ಬಂದರೆ ಹೇಗಿರುತ್ತದೆ. ಹೌದು...ಕೇರಳ ಸರ್ಕಾರ ಆಗಸ್ಟ್ 1 ರಿಂದ ಇಂಥದ್ದೊಂದು ಕಾನೂನು ಜಾರಿ ಮಾಡಲು ಮುಂದಾಗಿದೆ.[ಬೆಂಗಳೂರು ಪೊಲೀಸರ ತಲೆಗೆ ಹೆಲ್ಮೆಟ್ ಹಾಕೋರು ಯಾರು?]
ಕೇರಳದಲ್ಲಿ ಇನ್ನೂ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ತುಂಬಿಸಬೇಕಾದರೆ ಹೆಲ್ಮೆಟ್ ಕಡ್ಡಾಯವಾಗಿದೆ. ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನೀಡಬಾರದು ಎಂದು ಸಾರಿಗೆ ಆಯುಕ್ತ ಟೋಮಿನ್ ಜೆ. ತಚ್ಚಂಗೇರಿ ನಿರ್ದೇಶನ ನೀಡಿದ್ದಾರೆ.[ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]
ಮೊದಲ ಹಂತದಲ್ಲಿ ತಿರುವನಂತಪುರ , ಕೊಚ್ಚಿ ಹಾಗೂ ಕಲ್ಲಿಕೋಟೆ ನಗರಗಳಲ್ಲಿ ಈ ನೂತನ ಕಾನೂನು ಜಾರಿಗೆ ಬರಲಿದೆ. ಈ ಕುರಿತಾದ ನಿರ್ದೇಶನವನ್ನು ತೈಲ ಕಂಪನಿಗಳಿಗೂ , ಪೆಟ್ರೋಲ್ ಬಂಕ್ಗಳಿಗೂ ನೀಡಲಾಗಿದೆ. ಯೋಜನೆ ಯಶಸ್ವಿಯಾದರೆ ಕೇರಳದಾದ್ಯಂತ ಈ ಕಾನೂನು ಅನುಷ್ಟಾನಗೊಳಿಸುವುದು ಸರಕಾರದ ತೀರ್ಮಾನ.[ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]
ಆಗಸ್ಟ್ 1 ರಿಂದ ಆರ್ ಟಿಓ ಅನುಷ್ಠಾನ ದಳದ ಸದಸ್ಯರು ಬಂಕ್ಗಳಲ್ಲಿರುತ್ತಾರೆ. ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಸ್ಕ್ವಾಡ್ ಸದಸ್ಯರು ಹೆಲ್ಮೆಟ್ ಇಲ್ಲದಕ್ಕೆ ದಂಡ ವಿಧಿಸುವರು. ತತ್ಕಾಲಕ್ಕೆ 100ರೂ. ನಿಂದ 1000 ರೂ. ತನಕ ದಂಡ ವಿಧಿಸಲಾಗುವುದು. ಮುಂದಿನ ಮೋಟಾರ್ ವಾಹನ ಕಾನೂನು ತಿದ್ದುಪಡಿಯಲ್ಲಿ ಹೆಲ್ಮೆಟ್ ಧರಿಸದವರಿಗೆ 2500 ರೂ. ದಂಡ ವಿಧಿಸಲಾಗುವುದು. ಅಲ್ಲದೆ ಪರವಾನಿಗೆ ರದ್ದು ಮಾಡುವಂತಹ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.[ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ]
ಆದರೆ ಕೇರಳ ಸಾರಿಗೆ ಆಯುಕ್ತರ ನೂತನ ಕ್ರಮದ ವಿರುದ್ಧ ಕಾನೂನು ಹೋರಾಟಕ್ಕೆ ಕ್ರಮ ಕೈಗೊಳ್ಳುವುದಾಗಿ ದ್ವಿಚಕ್ರ ವಾಹನ ಅಸೋಸಿಯೇಷನ್ ಪ್ರತಿನಿಧಿಗಳು ತಿಳಿಸಿದ್ದಾರೆ.