ಗಣರಾಜ್ಯೋತ್ಸವ: ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವಿಲ್ಲ
ನವದೆಹಲಿ, ಜನವರಿ 6: ಈ ಬಾರಿಯ ಗಣರಾಜ್ಯೋತ್ಸವಕ್ಕೂ ಕೊರೊನಾ ವೈರಸ್ ಸೋಂಕಿನ ಪರಿಣಾಮ ತಟ್ಟಿದೆ. ಕೆಂಪುಕೋಟೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಿಸಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬ್ರಿಟನ್ನಲ್ಲಿ ರೂಪಾಂತರಿ ವೈರಸ್ನಿಂದ ಸೋಂಕಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.
ಕೋವಿಡ್ ನಿರ್ಬಂಧಗಳು ಮತ್ತು ನಿಯಂತ್ರಣ ಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಪ್ರಸಕ್ತ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಯಾವುದೇ ವಿದೇಶಿ ಗಣ್ಯರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸದೆ ಇರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕೊರೊನಾ ಹೊಸ ರೂಪಾಂತರ ಎಫೆಕ್ಟ್:ಭಾರತದ ಭೇಟಿಯನ್ನು ರದ್ದುಗೊಳಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಬಹುತೇಕ ದೇಶಗಳ ಗಣ್ಯರು ಕೋವಿಡ್ ಸಂದರ್ಭದಲ್ಲಿನ ವಿದೇಶ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದ ಬೋರಿಸ್ ಜಾನ್ಸನ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದು, ಯೋಜನೆಯಂತೆ ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ್ದಾರೆ.
'ಕಳೆದ ರಾತ್ರಿ ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮತ್ತು ಕೊರೊನಾ ವೈರಸ್ ರೂಪಾಂತರ ವೇಗವಾಗಿ ಹರಡುತ್ತಿರುವ ಕಾರಣ ವೈರಸ್ ನಿಯಂತ್ರಣದ ಕುರಿತಾದ ಆಂತರಿಕ ಕ್ರಮಗಳ ಬಗ್ಗೆ ಗಮನ ಹರಿಸಲು ಪ್ರಧಾನಿಯವರು ಬ್ರಿಟನ್ನಲ್ಲಿಯೇ ಉಳಿದುಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ' ಎಂಬುದಾಗಿ ಬ್ರಿಟನ್ ತಿಳಿಸಿದೆ.