UPSC ಪರೀಕ್ಷೆ; ಕೊನೆ ಪ್ರಯತ್ನದಿಂದ ವಂಚಿತರಾದವರಿಗೆ ಮತ್ತೊಂದು ಅವಕಾಶವಿದೆಯೇ?
ನವದೆಹಲಿ, ಜನವರಿ 22: ಕೊರೊನಾ ಸೋಂಕಿನ ಕಾರಣದಿಂದಾಗಿ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನ್ಯಾಯಾಧೀಶ ಎ.ಎಂ. ಖಾನ್ ವಾಲಿಕರ್, ನ್ಯಾಯಮೂರ್ತಿ ಬಿಆರ್ ಗವಾಯ್ ಹಾಗೂ ಕೃಷ್ಣ ಮುರಾಯ್ ಅವರನ್ನೊಳಗೊಂಡ ಪೀಠವು, ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪರಿಶೀಲಿಸಿದೆ.
UPSC ಇಂಜಿನಿಯರಿಂಗ್ ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಹೇಗೆ?
ಕೊರೊನಾ ಸೋಂಕಿನ ಕಾರಣದಿಂದಾಗಿ, ತಮ್ಮ ಕೊನೆ ಯತ್ನದ 2020ನೇ ಸಾಲಿನ ಆಯೋಗದ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಲಾಗಿದೆ. ಪರೀಕ್ಷೆಯಲ್ಲಿ ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಸಮಯ ಕೊಡಿ ಎಂದು ಕೇಂದ್ರ ಪೀಠಕ್ಕೆ ಮನವಿ ಮಾಡಿದೆ.
ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೋರಿ ರಚನಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜನವರಿ 25ಕ್ಕೆ ಮುಂದೂಡಿದೆ. ಇಷ್ಟರಲ್ಲಿ ಕೇಂದ್ರವು ಅಫಿಡವಿಡ್ ಸಲ್ಲಿಸಬೇಕೆಂದು ಸೂಚಿಸಿದೆ.
ಕೊರೊನಾದಿಂದಾಗಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಈ ಹಿಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದ್ದರು.