ಯುಪಿಎಸ್ಸಿ ಪರೀಕ್ಷೆ: ಹೆಚ್ಚುವರಿ ಅವಕಾಶವಿಲ್ಲ ಎಂದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ 24: ಕಳೆದ ವರ್ಷದ ಅಕ್ಟೋಬರ್ನಲ್ಲಿ ತಮ್ಮ ಕೊನೆಯ ಪ್ರಯತ್ನ ನಡೆಸಿರುವ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಹೆಚ್ಚುವರಿಯಾಗಿ ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಹಾಗೂ ವಯೋಮಿತಿ ಮೀರಿದ ಕಾರಣದಿಂದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಎರಡನೆಯ ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು.
2020ರ ಪರೀಕ್ಷೆಯಲ್ಲಿ ತಮ್ಮ ಕೊನೆಯ ಪ್ರಯತ್ನ ನಡೆಸಿದ ಯುಪಿಎಸ್ಸಿ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ನೀಡುವಂತೆ ನಿಯಮದಲ್ಲಿ ಸಡಿಲಿಕೆ ಮಾಡಲು ಸಿದ್ಧ ಇರುವುದಾಗಿ ಫೆಬ್ರವರಿ ಆರಂಭದಲ್ಲಿ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿತ್ತು.
UPSC ಪರೀಕ್ಷೆ; ಕೊನೆ ಪ್ರಯತ್ನದಿಂದ ವಂಚಿತರಾದವರಿಗೆ ಮತ್ತೊಂದು ಅವಕಾಶ ನೀಡಲು ಗ್ರೀನ್ ಸಿಗ್ನಲ್
2020ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (ಸಿಎಸ್ಇ) ಕೊನೆಯ ಬಾರಿ ಪರೀಕ್ಷೆ ಬರೆಯುವ ಅವಕಾಶ ಹೊಂದಿದ್ದವರಿಗೆ 2021ರ ಪರೀಕ್ಷೆಗೆ ಮಾತ್ರ ಅನ್ವಯವಾಗುವಂತೆ ಒಂದು ಹೆಚ್ಚುವರಿ ಅವಕಾಶ ನೀಡಲು ಸಿದ್ಧ ಇರುವುದಾಗಿ ನ್ಯಾಯಮೂರ್ತಿ ಎಎಂ ಖಾನ್ವಿಳ್ಕರ್ ನೇತೃತ್ವದ ಪೀಠಕ್ಕೆ ಕೇಂದ್ರ ಸರ್ಕಾರ ತಿಳಿಸಿತ್ತು.
ಆದರೆ 2021ರ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅವರಿಗೆ ನೀಡಲಾದ ಪ್ರಯತ್ನಗಳ ಅವಕಾಶಗಳನ್ನು ಮೀರಿದ್ದರೆ ಅಥವಾ ವಯೋಮಿತಿ ದಾಟಿದ್ದರೆ ಮತ್ತೊಂದು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿತ್ತು. ಕೇಂದ್ರ ಸರ್ಕಾರದ ಈ ಉದ್ದೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನಿರಾಕರಿಸಿದೆ.