ದೇಶಾದ್ಯಂತ ಎನ್ಆರ್ಸಿ ಜಾರಿ ಬಗ್ಗೆ ನಿರ್ಧರಿಸಿಲ್ಲ: ಸರ್ಕಾರ ಮಾಹಿತಿ
ನವದೆಹಲಿ, ಮಾರ್ಚ್ 17: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
ದೇಶದೆಲ್ಲೆಡೆ ಎನ್ಆರ್ಸಿ ಜಾರಿಗೆ ಕೇಂದ್ರ ಸರ್ಕಾರ ಆಲೋಚಿಸಿದೆಯೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಬೂಧವಾರ ಪ್ರತಿಕ್ರಿಯೆ ನೀಡಿದ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, 'ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಸಿದ್ಧತೆ ನಡೆಸಲು ಇದುವರೆಗೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎಂದು ಲಿಖಿತ ಉತ್ತರ ನೀಡಿದರು.
ಪಶ್ಚಿಮ ಬಂಗಾಳದಿಂದ ಎನ್ಆರ್ ಸಿಯನ್ನು ಬಿಜೆಪಿ ಕೈಬಿಟ್ಟಿದ್ದೇಕೆ?
ಹಾಗೆಯೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್ಸಿ ಅಡಿಯಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಿಸಲು ಯಾವುದೇ ಅವಕಾಶ ನೀಡಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
'ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಅಕ್ರಮ ವಲಸಿಗರು, ವಿದೇಶಿಗರನ್ನು ಬಂಧಿಸಿಡಲು ಬಂಧನ ಕೇಂದ್ರಗಳನ್ನು ಸ್ಥಾಪಿಸಿವೆ. ಅವರಲ್ಲಿ ಕೆಲವರು ತಮ್ಮ ಶಿಕ್ಷೆ ಪೂರ್ಣಗೊಳಿಸಿರಬಹುದು ಮತ್ತು ಅವರನ್ನು ಅವರ ಮೂಲ ಊರಿಗೆ ಗಡಿಪಾರು ಮಾಡಲು ಪ್ರಯಾಣ ದಾಖಲೆಗಳಿಂದಾಗಿ ಬಾಕಿ ಉಳಿದಿರಬಹುದು' ಎಂದು ತಿಳಿಸಿದ್ದಾರೆ.
ಶಿಕ್ಷೆ ಅವಧಿ ಮುಗಿಸಿರುವ ವಿದೇಶಿ ಪ್ರಜೆಗಳನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಮತ್ತು ಗಡಿಪಾರಿಗೆ ಸಂಬಂಧಿಸಿದ ದಾಖಲೆಗಳು ವಿಲೇವಾರಿ ಆಗುವವರೆಗೂ ಪ್ರಯಾಣ ನಿರ್ಬಂಧದಲ್ಲಿ ಸೂಕ್ತ ಸ್ಥಳದಲ್ಲಿ ಇರಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.