ಆಮ್ಲಜನಕ ಕೊರತೆ ಕಾರಣವಾಗಿ ದೇಶದಲ್ಲಿ ಯಾರೂ ಸಾವನ್ನಪ್ಪಿಲ್ಲ; ಕೇಂದ್ರ
ನವದೆಹಲಿ, ಜುಲೈ 21: ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭ ಆಮ್ಲಜನಕದ ಕೊರತೆಯಿಂದ ಕೊರೊನಾ ರೋಗಿಗಳು ಮೃತಪಟ್ಟ ಕುರಿತು ಯಾವುದೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ಆದರೆ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗಿತ್ತು. ಕೊರೊನಾ ಮೊದಲ ಅಲೆ ಸಂದರ್ಭ ದಿನಕ್ಕೆ 3,095 ಟನ್ ಆಮ್ಲಜನಕಕ್ಕೆ ಇದ್ದ ಬೇಡಿಕೆ, ಎರಡನೇ ಅಲೆಯಲ್ಲಿ ಇದ್ದಕ್ಕಿದ್ದಂತೆ 9000 ಟನ್ಗಳಿಗೆ ಏರಿಕೆಯಾಯಿತು. ಇದಾಗ್ಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಮ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಕೊರೊನಾ ಎರಡನೇ ಅಲೆ ಸಂದರ್ಭ ನೂರಾರು ಕೊರೊನಾ ರೋಗಿಗಳು ಅಸ್ಪತ್ರೆಗಳಲ್ಲಿ, ರಸ್ತೆಗಳ ಮೇಲೆಯೇ ಮೃತಪಟ್ಟಿದ್ದು ಆಮ್ಲಜನಕ ಕೊರತೆಯಿಂದಲ್ಲವೇ ಎಂದು ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, "ನಾಗರಿಕರ ಆರೋಗ್ಯ ವಿಷಯ ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳು ಕೊರೊನಾ ಪ್ರಕರಣಗಳು ಹಾಗೂ ಕೊರೊನಾದಿಂದ ಸಂಭವಿಸಿದ ಮರಣ ಪ್ರಮಾಣದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಅದರಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಕುರಿತು ರಾಜ್ಯಗಳಿಂದಾಗಲೀ, ಕೇಂದ್ರಾಡಳಿತ ಪ್ರದೇಶಗಳಿಂದಾಗಲೀ ಪ್ರತ್ಯೇಕ ವರದಿ ಬಂದಿಲ್ಲ" ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ರೋಗಿಗಳಿಗೆ ಆಮ್ಲಜನಕವೇ ಸಿಗುತ್ತಿಲ್ಲವೇ?
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಅನುಸಾರವಾಗಿ ವೈದ್ಯಕೀಯ ಆಮ್ಲಜನಕವನ್ನು ಸಮಾನವಾಗಿ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.
ಹಾಗಿದ್ದರೆ ಕೊರೊನಾ ಎರಡನೇ ಅಲೆಯಲ್ಲಿ ದೇಶದಲ್ಲಿ ಇದುವರೆಗೂ ಯಾರೂ ಮೃತಪಟ್ಟಿಲ್ಲವೇ ಎಂದು ಮತ್ತೆ ವೇಣುಗೋಪಾಲ್ ಪ್ರಶ್ನಿಸಿದ್ದು, ಸಚಿವರು ತಪ್ಪು ಮಾಹಿತಿ ನೀಡುವ ಮೂಲಕ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.
ಈಚೆಗಷ್ಟೆ ಭಾರತದಾದ್ಯಂತ 1,500 ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರಗಳ ನಿರ್ಮಾಣದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಆಕ್ಸಿಜನ್ ಲಭ್ಯತೆ ಪರಿಶೀಲಿಸಲು ಸಭೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಆಮ್ಲಜನಕ ಸ್ಥಾವರಗಳ ನಿರ್ಮಾಣ ಕಾರ್ಯ ಶೀಘ್ರ ಮಾಡುವಂತೆ ಹಾಗೂ ಅದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Recommended Video
ಆಮ್ಲಜನಕ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡುವಂತೆ ಪ್ರಧಾನಿ ತಿಳಿಸಿದ್ದರು.