22 ತಿಂಗಳಲ್ಲಿ ರೈಲು ಅಪಘಾತದಿಂದ ಒಂದೇ ಒಂದು ಸಾವು ಸಂಭವಿಸಿಲ್ಲ: ಗೋಯಲ್
ನವದೆಹಲಿ, ಫೆಬ್ರವರಿ 12: ರೈಲ್ವೆ ಇಲಾಖೆಯು ಸುರಕ್ಷತೆಯ ಮಟ್ಟದತ್ತ ಗಮನ ಹರಿಸಿದ್ದರಿಂದ ಕಳೆದ ಸುಮಾರು 22 ತಿಂಗಳಿನಿಂದ ದೇಶದಲ್ಲಿ ರೈಲು ಅಪಘಾತದಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆ 'ಹೊಸ ಸೇತುವೆ ನಿರ್ವಹಣೆ ಶಿಷ್ಟಾಚಾರಗಳು' ಕುರಿತು ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. 'ಕಾಲಾಂತರದಲ್ಲಿ ರೈಲ್ವೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ನಾವು ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ' ಎಂದು ಗೋಯಲ್ ಹೇಳಿದ್ದಾರೆ.
ಬೆಂಗಳೂರು-ಮಂಗಳೂರು ರೈಲಿಗೆ ವಿಸ್ಟಾಡೋಮ್ ಕೋಚ್?
'ರೈಲು ಅಪಘಾತದಲ್ಲಿ ಕೊನೆಯ ಬಾರಿ ಸಾವು ಸಂಭವಿಸಿರುವುದು 2019ರ ಮಾರ್ಚ್ 22ರಂದು ಎಂದು ತಿಳಿಸಲು ಹರ್ಷಿಸುತ್ತೇನೆ. ಸುಮಾರು 22 ತಿಂಗಳಲ್ಲಿ ರೈಲು ಅಪಘಾತದಿಂದ ಯಾವ ಪ್ರಯಾಣಿಕರೂ ಮೃತಪಟ್ಟಿಲ್ಲ' ಎಂದು ಅವರು ಮಾಹಿತಿ ನೀಡಿದ್ದಾರೆ.
ರೈಲ್ವೆ ಸೇತುವೆಗಳ ಬಗ್ಗೆ ಮಾತನಾಡಿದ ಅವರು, 'ಸೇತುವೆಗಳ ದುರಸ್ತಿ ಹಾಗೂ ನಿರ್ವಹಣೆಗೆ ನಾವು ಗಮನ ನೀಡುತ್ತಿದ್ದೇವೆ. ದೇಶದಲ್ಲಿ 100 ವರ್ಷಕ್ಕೂ ಹಳತಾದ 34,665 ಸೇತುವೆಗಳಿವೆ. ನಮ್ಮ ಬಳಿ ತಪಾಸಣೆಯ ಸದೃಢ ವ್ಯವಸ್ಥೆ ಇದೆ. ಮುಂಗಾರಿಗೂ ಮುನ್ನ ಒಮ್ಮೆ ಹಾಗೂ ಮುಂಗಾರಿನ ಬಳಿಕ ಒಮ್ಮೆ ತಪಾಸಣೆ ನಡೆಸಲಾಗುತ್ತದೆ. ಜತೆಗೆ ರೇಟಿಂಗ್ ವ್ಯವಸ್ಥೆ ಕೂಡ ಇದೆ' ಎಂದಿದ್ದಾರೆ.
ರೈಲು ಅಪಘಾತಗಳು ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಹಳಿಗಳಲ್ಲಿ ಸುಮಾರು 30,000 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ.
ಎರ್ನಾಕುಲುಂ-ಮಂಗಳೂರು-ಓಖಾ ವಿಶೇಷ ರೈಲು; ವೇಳಾಪಟ್ಟಿ
ಕೆಲವು ಮಾಧ್ಯಮ ವರದಿ ಪ್ರಕಾರ 2020ರ ಜನವರಿ-ಮಾರ್ಚ್ ಅವಧಿಯಲ್ಲಿ ದೇಶದಲ್ಲಿ 558 ಮಂದಿ ಹಳಿ ಮೇಲೆ ಮೃತಪಟ್ಟಿದ್ದಾರೆ. ಏಪ್ರಿಲ್-ಜುಲೈ ಅವಧಿಯಲ್ಲಿ 115 ಮಂದಿ, ಆಗಸ್ಟ್-ನವೆಂಬರ್ನಲ್ಲಿ 314 ಮಂದಿ ಸಾವಿಗೀಡಾಗಿದ್ದಾರೆ. ಮಾರ್ಚ್ 22ರಿಂದ ಜೂನ್ ಮಧ್ಯದವರೆಗೂ ದೇಶದಲ್ಲಿ ಸ್ಥಳೀಯ ಮಟ್ಟದಲ್ಲಿ ಕೂಡ ರೈಲುಗಳು ಓಡಾಡುತ್ತಿರಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.