ಪಾಕ್ ಜೊತೆ ವಿಶ್ವಕಪ್ ಕ್ರಿಕೆಟ್ ಬಹಿಷ್ಕರಿಸೋಣ: ಆದರೆ, ಸೆಮಿ, ಫೈನಲ್ ನಲ್ಲಿ ಎದುರಾದರೆ?
Recommended Video
ಪುಲ್ವಾಮಾ ಉಗ್ರರ ದಾಳಿಯ ನಂತರ, ಪಾಕಿಸ್ತಾನದ ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎನ್ನುವ ಕೂಗು, ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ಕೂಡಾ ಹಲವು ಹೆಜ್ಜೆಗಳನ್ನು ಈ ನಿಟ್ಟಿನಲ್ಲಿ ಇಟ್ಟಿದೆ. ಈಗ, ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕ್ ಎದುರಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎನ್ನುವ ಆಕ್ರೋಶದ ಕಿಚ್ಚು ಎಲ್ಲಡೆ ವ್ಯಾಪಿಸುತ್ತಿದೆ.
ದೇಶ ಮತ್ತು ದೇಶದ ಸುಭದ್ರತೆಗಿಂತ ಕ್ರಿಕೆಟ್ ದೊಡ್ದದೇ? ಖಂಡಿತ ಅಲ್ಲ. ನಮ್ಮ ಸೈನಿಕರನ್ನು ಕೊಂದ ಪಾಪಿಗಳಿಗೆ ಮುಟ್ಟಿ ನೋಡುವಂತಹ ಉತ್ತರವನ್ನು ನೀಡಲೇಬೇಕಿದೆ, ಇದು ಶತಕೋಟಿ ಭಾರತೀಯರ ಆಶಯ ಕೂಡಾ. ಆಮದು ಶುಂಕ ಹೆಚ್ಚಿಸಿ, ತರಕಾರೀ ರಫ್ತನ್ನು ನಿಲ್ಲಿಸಿ.. ಹೀಗೆ.. ಸಾಫ್ಟ್ ಪ್ರತೀಕಾರವನ್ನು ಭಾರತ ತೋರಿಸುತ್ತಿದೆ. ಇದರ ಬಿಸಿ, ಪಾಕಿಸ್ತಾನದಲ್ಲಿ ತಟ್ಟಲೂ ಆರಂಭಿಸಿದೆ.
ಉಪಖಂಡದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ, ಒಂದು ರೀತಿ 'ಪಾರ್ಟ್ ಆಫ್ ಲೈಫ್' ಅನ್ನಬಹುದು. ಅದರಲ್ಲೂ ವಿಶ್ವಕಪ್ ಪಂದ್ಯಾವಳಿ, ಅದೂ ಪಾಕಿಸ್ತಾನದ ಜೊತೆಗಿನ ಪಂದ್ಯ ಎಂದರೆ ಇಡೀ ವಿಶ್ವವೇ ಎದುರು ನೋಡುತ್ತಿರುತ್ತದೆ. ಅಂತಹ ಪಂದ್ಯವನ್ನು ಬಹಿಷ್ಕರಿಸಿ, ಜಗತ್ತಿಗೆ ಪಾಕಿಸ್ತಾನ ಕುಕೃತ್ಯವನ್ನು ತೋರಿಸುವಂತಾಗುತ್ತದೆ ಎನ್ನುವುದು ವಾದ. ಉದ್ದೇಶ ಏನೋ ಸರಿಯಾಗಿಯೇ ಇದೆ..
ಪಾಕ್ ವಿರುದ್ಧ ಕ್ರಿಕೆಟ್ ಆಡದಿರುವುದು ನಾವು ಶರಣಾಗುವುದಕ್ಕಿಂತಲೂ ಕೀಳು: ತರೂರ್
#NoCricketWithPakistan ಎನ್ನುವ ಹ್ಯಾಷ್ ಟ್ಯಾಗ್ ಬೆಳಗ್ಗೆಯಿಂದ ಟಾಪ್ ನಲ್ಲಿ ಒಡುತ್ತಿದೆ. ಟ್ವಿಟ್ಟಿಗರು, ಭಾರತ ಪಾಕಿಸ್ತಾನದ ಎದುರು ಪಂದ್ಯ ಆಡಬೇಕೇ ಅಥವಾ ಬಾಯ್ಕಾಟ್ ಮಾಡಬೇಕೇ ಎನ್ನುವ ತಮ್ಮ ತಮ್ಮ ನಿಲುವನ್ನು ಪುಂಖಾನುಪುಂಖವಾಗಿ ಹರಿಯಬಿಡುತ್ತಿದ್ದಾರೆ. ಮಾಜಿ, ಹಾಲೀ ಕ್ರಿಕೆಟಿಗರೂ ತಮ್ಮ ನಿಲುವನ್ನು ಹೇಳುತ್ತಿದ್ದಾರೆ. ಪಾಕ್ ಜೊತೆ ಒಂದು ಪಂದ್ಯವನ್ನೇನೋ ಬಹಿಷ್ಕರಿಸಬಹುದು, ಆದರೆ..
ದೇಶದ ಗೌರವಕ್ಕಿಂತ ವಿಶ್ವಕಪ್ ದೊಡ್ಡದೇನೂ ಅಲ್ಲ
ದೇಶದ ಗೌರವಕ್ಕಿಂತ ವಿಶ್ವಕಪ್ ದೊಡ್ಡದೇನೂ ಅಲ್ಲ. ಪಾಕಿಸ್ತಾನವನ್ನು ಬಹಿಷ್ಕರಿಸಬೇಕೆಂದು, ಭಾರತ ವಿಶ್ವಕಪ್ ಪಂದ್ಯಾವಳಿಯಿಂದ ಹೊರ ಉಳಿದರೂ ನಷ್ಟವೇನೂ ಇಲ್ಲ ಎಂದು ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಇದಕ್ಕೆ ಸೌರವ್ ಗಂಗೂಲಿ ಕೂಡಾ ಧ್ವನಿಗೂಡಿಸಿದ್ದಾರೆ. ಕ್ರಿಕೆಟ್ ಮಾತ್ರ ಯಾಕೆ, ಪಾಕ್ ಜೊತೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಗಂಗೂಲಿ ಹೇಳಿದ್ದಾರೆ. ಆಟ ಬಹಿಷ್ಕರಿಸಿ ಯಾಕೆ ಸುಮ್ಮನೆ ಎರಡು ಪಾಯಿಂಟ್ ಅವರಿಗೆ ಕೊಡಬೇಕು, ಮೈದಾನದಲ್ಲೇ ಮಣಿಸಬೇಕೆಂದು ಭಾರತರತ್ನ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಪಿಎಸ್ಇ ಸಮೀಕ್ಷೆ: ಪುಲ್ವಾಮಾ ಸೇಡಿಗೆ ಯುದ್ಧವೇ ಬೇಕು ಎನ್ನುತ್ತಿದ್ದಾರೆ 36%ರಷ್ಟು ಮಂದಿ
ವಿಶ್ವಕಪ್ ಟೂರ್ನಿಯಿಂದಲೇ ಬಹಿಷ್ಕರಿಸಬೇಕು ಎನ್ನುವ ಒತ್ತಾಯಕ್ಕೆ ಮಣಿಯಲಿದೆಯೇ
ಇನ್ನೊಂದೆಡೆ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ, ಪಾಕಿಸ್ತಾನವನ್ನು ವಿಶ್ವಕಪ್ ಕ್ರಿಕೆಟಿನಿಂದಲೇ ಬಹಿಷ್ಕರಿಸಬೇಕು ಎನ್ನುವ ತಮ್ಮ ನಿರ್ಧಾರವನ್ನು ಕೇಂದ್ರಕ್ಕೆ ಒಪ್ಪಿಸಿದೆ ಎನ್ನುವ ಮಾಹಿತಿಯಿದೆ. ಇದಕ್ಕೆ ಐಒಸಿ (ಕ್ರಿಕೆಟ್ ಆಡಳಿತ ಮಂಡಳಿ) ಕೂಡಾ ಧ್ವನಿಗೂಡಿಸಿದೆ. ಇತ್ತೀಚಿನ ದಿನಗಳಲ್ಲಿ, ಬಿಸಿಸಿಐಗೆ ಇರುವ ಹಣದ ಬಲದಿಂದ ತಾನು ಹೇಳಿದ್ದನ್ನೇ ಸಾಧಿಸಿಕೊಂಡು ಬರುತ್ತಿರುವುದು ಹೌದಾದರೂ, ಆಜೀವ ಕ್ರಿಕೆಟ್ ಸದಸ್ಯತ್ವ ಹೊಂದಿದ ರಾಷ್ಟ್ರವೊಂದನ್ನು ವಿಶ್ವಕಪ್ ಟೂರ್ನಿಯಿಂದಲೇ ಬಹಿಷ್ಕರಿಸಬೇಕು ಎನ್ನುವ ಒತ್ತಾಯಕ್ಕೆ ಐಸಿಸಿ ಮಣಿಯಲಿದೆಯೇ ಎನ್ನುವುದಿಲ್ಲಿ ಪ್ರಶ್ನೆ. ಇಂತಹ ಸಾಧ್ಯತೆ ಕಮ್ಮಿಯೆಂದೇ ಹೇಳಲಾಗುತ್ತಿದೆ.
ವಿಶ್ವಕಪ್ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರೂ ಬರಬಹುದು
ಒಂದು ವೇಳೆ ಐಸಿಸಿ, ಭಾರತದ ಒತ್ತಡಕ್ಕೆ ಮಣಿಯದಿದ್ದರೇ, ಬಿಸಿಸಿಐ, ವಿಶ್ವಕಪ್ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರೂ ಬರಬಹುದು. ಒಂದು ವೇಳೆ ಆರೀತಿ ಬಿಸಿಸಿಐ ನಡೆದುಕೊಂಡರೆ, ಐಸಿಸಿ (ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಭಾರತಕ್ಕೆ ಎಚ್ಚರಿಕೆಯನ್ನು ನೀಡಬಹುದು. ಅದರ ಪರಿಣಾಮ ಮುಂಬರುವ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಮೇಲೆ ಬಿದ್ದರೂ ಬೀಳಬಹುದು.
ಭಾರತ ಸಲ್ಲಿಸುವ ಅರ್ಜಿಯನ್ನು ಅಮಾನತ್ತಿನಲ್ಲಿಡಲು ನಿರ್ಧಾರ
ದೆಹಲಿಯಲ್ಲಿ ಇಂದಿನಿಂದ (ಫೆ 23) ಆರಂಭವಾದ ವಿಶ್ವ ಶೂಟಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಬ್ಬರು ಪಾಕ್ ಕ್ರೀಡಾಪಟುಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿದ್ದಕ್ಕೆ, ಒಲಂಪಿಕ್ ಸಮಿತಿ ನೊಟೀಸ್ ಜಾರಿ ಮಾಡಿದೆ. ಮುಂಬರುವ ಟೂರ್ನಿಗಳಿಗೆ ಆತಿಥ್ಯ ವಹಿಸಲು ಭಾರತ ಸಲ್ಲಿಸುವ ಅರ್ಜಿಯನ್ನು ಅಮಾನತ್ತಿನಲ್ಲಿಡಲು ನಿರ್ಧರಿಸಿದೆ. ವಿಶ್ವಕಪ್ ನಿಂದ ಹೊರಗುಳಿಯಬೇಕು ಅಥವಾ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನವನ್ನು ಬಹಿಷ್ಕರಿಸಬೇಕು ಎನ್ನುವ ಒತ್ತಾಯಗಳಿಗೆ ಇದು ಎಚ್ಚರಿಕೆ ಗಂಟೆಯಾದರೂ ಆಗಬಹುದು.
ಭಾರತ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳು ವಿಶ್ವಕಪ್ ನಲ್ಲಿ ಭಾಗವಹಿಸಲಿದೆ
ಭಾರತ, ಪಾಕಿಸ್ತಾನ ಸೇರಿದಂತೆ ಹತ್ತು ರಾಷ್ಟ್ರಗಳು ವಿಶ್ವಕಪ್ ನಲ್ಲಿ ಭಾಗವಹಿಸಲಿದೆ. ಪ್ರತೀ ತಂಡಗಳು ಇತರ ಒಂಬತ್ತು ದೇಶದೊಡನೆ ಸೆಣಸಬೇಕಿದೆ. ಭಾರತ ಮತ್ತು ಪಾಕಿಸ್ತಾನದ ಲೀಗ್ ಹಂತದ ಪಂದ್ಯ ಭಾನುವಾರದಂದು (ಜೂನ್ 16) ಇಂಗ್ಲೆಂಡಿನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯಲಿದೆ. ಉಪಾಂತ್ಯದಲ್ಲಿ ಟಾಪ್ 1 ಮತ್ತು ಟಾಪ್ 4, ಟಾಪ್ 2 ಮತ್ತು ಟಾಪ್ 3ರ ನಡುವೆ ಉಪಾಂತ್ಯ ನಡೆಯಲಿದೆ. ಇಲ್ಲಿ ಗೆದ್ದವರ ನಡುವೆ ಫೈನಲ್ ಎಂದು ಒತ್ತಿಹೇಳಬೇಕಾಗಿಲ್ಲ.
ಉಭಯ ರಾಷ್ಟ್ರಗಳ ನಡುವಿನ ಪಂದ್ಯ ರದ್ದಾದರೆ, ಭಾರತ ಎರಡು ಪಾಯಿಂಟ್ ಕಳೆದುಕೊಳ್ಳಲಿದೆ
ಈಗಿನ ಒತ್ತಾಯದಂತೆ ಒಂದು ವೇಳೆ ಲೀಗ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ಜೊತೆ ಆಡದಿದ್ದರೂ ಉಪಾಂತ್ಯ ಹಂತಕ್ಕೆ ಬರುವಷ್ಟು ಶಕ್ತಿಶಾಲಿಯಾಗಿದೆ. ಸಾಲುಸಾಲು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಬಲಾಢ್ಯ ಕ್ರಿಕೆಟ್ ರಾಷ್ಟ್ರವಾಗಿ ಹೊರಹೊಮ್ಮಿದೆ. ಅದೇ ರೀತಿ, ಆಂತರಿಕ ಜಗಳ, ರಾಜಕೀಯದ ಹೊರತಾಗಿಯೂ ಪಾಕಿಸ್ತಾನ ಕೂಡಾ ಸಾಲುಸಾಲು ಸರಣಿಗಳನ್ನು ಗೆಲ್ಲುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಪಂದ್ಯ ರದ್ದಾದರೆ, ಭಾರತ ಎರಡು ಪಾಯಿಂಟ್ ಕಳೆದುಕೊಳ್ಳಲಿದೆ, ಪಾಕ್ ಪಂದ್ಯ ಆಡದೆನೇ ಎರಡು ಪಾಯಿಂಟ್ ಗಳಿಸಲಿದೆ.
ಪಾಕಿಸ್ತಾನದ ನಡುವೆ ಫೈನಲ್ ಪಂದ್ಯ ನಡೆದರೆ, ಪಾಕಿಸ್ತಾನಕ್ಕೆ ಕಪ್ ಕೊಟ್ಟು ಬರುವುದೇ ಭಾರತ?
ಎರಡು ಪಾಯಿಂಟ್ ಕಳೆದುಕೊಂಡರೂ ಅಂತಿಮ ನಾಲ್ಕರ ಹಂತಕ್ಕೆ ಭಾರತ ಬರಬಹುದು. ಅದೇ ರೀತಿ ಪಾಕಿಸ್ತಾನ ಕೂಡಾ ಸೆಮಿಫೈನಲ್ ಬಂದರೆ? ಉದಾಹರಣೆಗೆ ಟೇಬಲ್ ನಲ್ಲಿ ಭಾರತ ನಂಬರ್ ಒನ್ ಆಗಿ, ಪಾಕ್ ನಂಬರ ಫೋರ್ ಆದರೆ, ಅಥವಾ ಎರಡು ರಾಷ್ಟ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ? ಇದೆಲ್ಲವನ್ನೂ ಮೀರಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಫೈನಲ್ ಪಂದ್ಯ ನಡೆದರೆ, ಪಾಕಿಸ್ತಾನಕ್ಕೆ ಕಪ್ ಕೊಟ್ಟು ಬರಲು ಸಾಧ್ಯವೇ? ಯಾಕೆಂದರೆ.. Cricket is a funny game..