ನ್ಯಾಯಯುತ ಮತ್ತು ಸಮಂಜಸವಾದ ಟೀಕೆ ನ್ಯಾಯಾಂಗ ನಿಂದನೆಯಲ್ಲ
ನವದೆಹಲಿ, ಜುಲೈ 14: ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಹೇಳಿಕೆಗಳನ್ನು ಟೀಕಿಸಿದ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಇಬ್ಬರು ವಕೀಲರ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮಗಳಿಲ್ಲ ಎಂದು ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಹೇಳಿದ್ದಾರೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ, ದೇಶದಲ್ಲಿ ಹಲವು ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದರು.
ಅಪರೂಪದ ಆಚರಣೆ: ಬಿಜೆಪಿ ಶಾಸಕನ ಮೇಲೆ ಮಣ್ಣಿನ ನೀರು ಎರಚಿದ ಮಹಿಳೆಯರು
ಸುಪ್ರೀಂಕೋರ್ಟ್ನ ಹೇಳಿಕೆಗಳನ್ನು ಟೀಕಿಸಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಎನ್. ಧಿಂಗ್ರಾ, ಮಾಜಿ ಹೆಚ್ಚುವರಿ ಸಾಲಿಟರ್ ಜನರಲ್ ಅಮನ್ ಲೇಖಿ ಮತ್ತು ಹಿರಿಯ ವಕೀಲ ಕೆ. ರಾಮಕುಮಾರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ವಕೀಲ ಸಿ. ಆರ್. ಜಯ ಸುಕಿನ್ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳಲು ಅಟಾರ್ನಿ ಜನರಲ್ನ ಒಪ್ಪಿಗೆ ಕಡ್ಡಾಯ ಎಂದು ಕಾನೂನು ಹೇಳುತ್ತದೆ.
ಅಟಾರ್ನಿ ಜನರಲ್ ಹೇಳಿದ್ದೇನು?; ಕ್ರಮ ಕೈಗೊಳ್ಳುವುದಕ್ಕೆ ನಿರಾಕರಿಸಿರುವ ಭಾರತದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, "ನ್ಯಾಯಾಂಗ ಪ್ರಕ್ರಿಯೆಗಳ ನ್ಯಾಯಯುತ ಮತ್ತು ಸಮಂಜಸವಾದ ಟೀಕೆಗಳು ನ್ಯಾಯಾಲಯದ ನಿಂದನೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ನ ಹೆಚ್ಚಿನ ಸಂಖ್ಯೆಯ ತೀರ್ಪುಗಳಲ್ಲಿ ಅಭಿಪ್ರಾಯಪಟ್ಟಿದೆ." ಎಂದು ಹೇಳಿದ್ದಾರೆ. ಈ ಮೂವರ ಟೀಕೆಗಳು ನ್ಯಾಯಾಂಗ ನಿಂದನೆಯಲ್ಲ ಎಂದು ತಿಳಿಸಿದ್ದಾರೆ.
ಜುಲೈ 1ರಂದು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠವು ನೂಪುರ್ ಶರ್ಮಾ ವಿರುದ್ಧ ಕಠಿಣವಾದ ಮಾತುಗಳನ್ನಾಡಿತ್ತು. ನೂಪುರ್ ಶರ್ಮಾ ಬೇಜವಾಬ್ದಾರಿ ಹೇಳಿಕೆಗಳು ದೇಶಕ್ಕೆ ಬೆಂಕಿ ಹಚ್ಚಿದೆ ಮತ್ತು ದೇಶದಲ್ಲಿ ಏನಾಗುತ್ತಿಯೋ ಎಲ್ಲದಕ್ಕೂ ಅವರು ಏಕಾಂಗಿಯಾಗಿ ಜವಾಬ್ದಾರರು ಎಂದಿತ್ತು.
ರಾಜಕೀಯ ಪಕ್ಷದ ವಕ್ತಾರರಾಗಿರುವುದು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಪರವಾನಗಿ ಅಲ್ಲ ಎಂದಿತ್ತು. ಈ ಹೇಳಿಕೆಗಳನ್ನು ನಿವೃತ್ತ ನ್ಯಾಯಮೂರ್ತಿ ಎಸ್. ಎನ್. ಧಿಂಗ್ರಾ ಸೇರಿದಂತೆ ಹಲವಾರು ಮತ್ತು ನಿವೃತ್ತ ಸೇನಾಧಿಕಾರಿಗಳು ಟೀಕಿಸಿದ್ದರು.
ನಿವೃತ್ತ ನ್ಯಾಯಮೂರ್ತಿಗಳು ಮತ್ತು ಇಬ್ಬರು ವಕೀಲರ ಬಗ್ಗೆ ನಿರ್ದಿಷ್ಟವಾಗಿ ಎಜಿಗೆ ಬರೆದ ಪತ್ರದಲ್ಲಿ ವಕೀಲ ಜಯಾ ಸುಕಿನ್, "ಈ ಮೂವರು ಸುಪ್ರೀಂಕೋರ್ಟ್ ಅನ್ನು ಅವಮಾನಿಸಿದ್ದಾರೆ. ಉನ್ನತ ನ್ಯಾಯಾಲಯದ ಸಮಗ್ರತೆಯ ಮೇಲೆ ಅಪಹಾಸ್ಯ ಮಾಡಿದ್ದಾರೆ. ಮಾತ್ರವಲ್ಲದೆ ರಾಷ್ಟ್ರದ ಅತ್ಯುನ್ನತ ನ್ಯಾಯಾಂಗವನ್ನು ನಿಂದಿಸಲು ಪ್ರಯತ್ನಿಸಿದ್ದಾರೆ" ಎಂದು ಆರೋಪಿಸಿದ್ದರು.
ನೂಪುರ್ ಶರ್ಮಾ ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟು ಮಾಡಿ ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು. ಜುಲೈ 1 ರಂದು ನ್ಯಾಯಾಲಯವು ಆಕೆಯ ಮನವಿಯನ್ನು ತಿರಸ್ಕರಿಸಿ, ಕೆಲವು ಕಟುವಾದ ಹೇಳಿಕೆಗಳನ್ನು ನೀಡಿತ್ತು. ಇದನ್ನು ಟೀಕಿಸಿ 15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಸಿ. ವಿ. ರಮಣಗೆ ಬಹಿರಂಗ ಪತ್ರ ಬರೆದಿದ್ದರು.