ಸಂಸತ್ನಲ್ಲಿ ಮೋದಿ ಭಾಷಣ : 7 ಪ್ರಮುಖ ಹೇಳಿಕೆಗಳು
Recommended Video
ನವದೆಹಲಿ, ಜುಲೈ 20 : 'ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಮಗೆ ಸಾಧ್ಯವಿಲ್ಲ. ನೀವು ನಾಮ್ ದಾರ್...ನಾವು ಕಾಮ್ ದಾರ್' ಎಂದು ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಂಸತ್ನಲ್ಲಿ ತಿರುಗೇಟು ನೀಡಿದರು.
ಜುಲೈ 20ರ ಶುಕ್ರವಾರ ಲೋಕಸಭೆಯಲ್ಲಿ 12 ಗಂಟೆಗಳ ಕಾಲ ಅವಿಶ್ವಾಸ ನಿರ್ಣಯದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ ಸುಮಾರು 2 ಗಂಟೆಗಳ ಕಾಲ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅವಿಶ್ವಾಸ ನಿರ್ಣಯ : ನರೇಂದ್ರ ಮೋದಿ ಪ್ರತ್ಯುತ್ತರ, ರಾಹುಲ್ ನಿರುತ್ತರ
ಕೇಂದ್ರ ಸರ್ಕಾರ 4 ವರ್ಷಗಳಲ್ಲಿ ಏನು ಮಾಡಿದೆ? ಎಂದು ನಡೆದ ಚರ್ಚೆಗೆ ಸುದೀರ್ಘ ಉತ್ತರ ನೀಡಿದರು. 'ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಅವರ ಮೇಲೆಯೇ ಅವರಿಗೆ ವಿಶ್ವಾಸವಿಲ್ಲ' ಎಂದು ಕುಟುಕಿದರು.
ವಿಶ್ವಾಸ ಮತ ಗೆದ್ದ ಮೋದಿ ನೇತೃತ್ವದ ಎನ್ಡಿಎ ಸರ್ಕಾರ
'ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ' ಎಂದು ಸವಾಲು ಹಾಕಿದ್ದ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದರು. 'ನಿಮ್ಮ ಕಣ್ಣಿನ ಆಟವನ್ನು ದೇಶವೇ ಇಂದು ಟಿವಿಯಲ್ಲಿ ನೋಡಿದೆ' ಎಂದು ನರೇಂದ್ರ ಮೋದಿ ರಾಹುಲ್ ಸಂಸತ್ನಲ್ಲಿ ಕಣ್ಣು ಹೊಡೆದಿದ್ದನ್ನು ವ್ಯಂಗ್ಯವಾಡಿದರು.
ಮೋದಿ ಹಠಾವೋ ಘೋಷಣೆ
'ಕಾಂಗ್ರೆಸ್ ಪಕ್ಷಕ್ಕೆ ಯಾವುದರಲ್ಲಿಯೂ ವಿಶ್ವಾಸವಿಲ್ಲ. ನಿಮ್ಮ ಮಿತ್ರಪಕ್ಷಗಳನ್ನಾದರೂ ನಂಬಿ' ಎಂದು ಮೋದಿ ಟೀಕಿಸಿದರು. 'ಮೋದಿ ಹಠಾವೋ ಎಂಬ ಘೋಷಣೆ ಕೇಳಿಬರುತ್ತಿದೆ. ಓರ್ವ ಮೋದಿಯನ್ನು ಹಿಂದಿಕ್ಕಲು ಎಲ್ಲಾ ವಿರೋಧಿ ಬಣಗಳು ಒಂದಾಗಿವೆ' ಎಂದು ಮೋದಿ ಛೇಡಿಸಿದರು.
'ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಮ್ಮನ್ನು ಶಿವ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ನಾನು ಕೂಡಾ ಶಿವನ ಭಕ್ತ. ಶಿವನು 2024ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಅವಕಾಶ ನೀಡಲಿ ಎಂದು ಕೇಳಿಕೊಳ್ಳುತ್ತೇನೆ' ಎಂದು ಮೋದಿ ಲೇವಡಿ ಮಾಡಿದರು.
ನಮ್ಮದು ಕೆಲಸ ಮಾಡುವ ಸರ್ಕಾರ
'ಬೆಳಗ್ಗೆಯಿಂದ ನಡೆದ ಚರ್ಚೆಯಲ್ಲಿ ಸರ್ಕಾರ 4 ವರ್ಷ ಏನು ಮಾಡಿದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. 70 ವರ್ಷದಿಂದ ಕತ್ತಲಲ್ಲಿ ಇದ್ದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ ಮಾಡಿದ್ದೇವೆ. ಬಡವರಿಗಾಗಿ ಬ್ಯಾಂಕ್ ಬಾಗಿಲು ತೆರೆದಿದ್ದೇವೆ. ನಮ್ಮದು ಕೆಲಸ ಮಾಡುವ ಸರ್ಕಾರ' ಎಂದು ಮೋದಿ ಹೇಳಿದರು.
'ನೀವು ನಾಮ್ ಧಾರ್, ನಾನು ಚೌಕೀದಾರ, ಬಡವರ ದುಖಃ ನಿವಾರಿಸುವ ಭಾಗೀದಾರ. ಆದರೆ, ಕೆಲವರು ತಮ್ಮನ್ನು ತಾವು ಭಾಗ್ಯ ವಿಧಾತ ಎಂದು ಅಂದುಕೊಂಡಿದ್ದಾರೆ' ಎಂದರು.
ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ
'ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ' ಎಂದು ರಾಹುಲ್ ಹಾಕಿದ್ದ ಸವಾಲಿಗೆ ಪ್ರತಿಕ್ರಿಯಿಸಿದ ಮೋದಿ, 'ನನಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ. ನೀವು ನಾಮ್ ಧಾರ್, ನಾವು ಕಾಮ್ ದಾರ್' ಎಂದು ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
'ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಜಯಪ್ರಕಾಶ್ ನಾರಾಯಣ, ಮೊರಾರ್ಜಿ ದೇಸಾಯಿ, ಪ್ರಣಬ್ ಮುಖರ್ಜಿ, ಶದರ್ ಪವಾರ್ ಅಂತಹ ನಾಯಕರಿಗೆ ಯಾವ ಸ್ಥಿತಿ ಬಂದಿದೆ ಎಂಬುದು ಎಲ್ಲರಿಗೂ ಗೊತ್ತು' ಎಂದು ಮೋದಿ ಹೇಳಿದರು.
ಸೈನಿಕರಿಗೆ ಅವಮಾನ ಬೇಡ
'ಪ್ರಧಾನಿಯಾದ ನನ್ನ ಮೇಲೆ ಆರೋಪ ಮಾಡಿ. ಆದರೆ, ದೇಶದ ಗಡಿ ಕಾಯುವ ಸೈನಿಕರ ಮೇಲೆ ಆರೋಪ ಮಾಡುವುದು ಅವರಿಗೆ ನೀವು ಮಾಡುವ ಅವಮಾನ. ವಿರೋಧ ಪಕ್ಷದ ನಾಯಕರು ಸೇನಾಧಿಕಾರಿಗಳ ವಿರುದ್ಧ ಬಳಸಿದ ಪದಗಳು ಕೆಳಮಟ್ಟದಲ್ಲಿ ಇದ್ದವು. ದೇಶದ ಸೈನಿಕರಿಗಾಗಿ ನೀವು ನನ್ನ ಮೇಲೆ ಆರೋಪ ಮಾಡಿದರೂ ನಾನು ಸಹಿಸಿಕೊಳ್ಳುತ್ತೇನೆ' ಎಂದು ಹೇಳಿದರು.
'ಡೋಕ್ಲಾಂ ವಿಷಯದ ಕುರಿತು ಭಾರೀ ಚರ್ಚೆ ನಡೆದಿದೆ. ಎರಡೂ ದೇಶಗಳ ವಿಚಾರದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ದೇಶದ ಭದ್ರತೆಯ ವಿಚಾರದಲ್ಲಿ ಸಣ್ಣತನವನ್ನು ತೋರಿಸಬೇಡಿ. ರೆಫಲ್ ವಿಮಾನದ ವಿಚಾರದಲ್ಲಿಯೂ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ' ಎಂದರು.
ಆಂಧ್ರದ ಜನರ ಜೊತೆ ನಾವಿದ್ದೇವೆ
'ಆಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮೂರು ರಾಜ್ಯಗಳನ್ನು ರಚನೆ ಮಾಡಿದರು. ಎಲ್ಲಾ ರಾಜ್ಯಗಳು ಇಂದು ಶಾಂತಿ, ಸುವ್ಯವಸ್ಥೆಯಿಂದ ಇವೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಕಾಂಗ್ರೆಸ್ ವಿಭಜನೆ ಮಾಡಿತು' ಎಂದು ಮೋದಿ ಆರೋಪಿಸಿದರು.
'ಆಂಧ್ರಪ್ರದೇಶದ ಜನರ ಜೊತೆ ನಾವಿದ್ದೇವೆ. ರಾಜಧಾನಿ ನಿರ್ಮಾಣ ಸೇರಿದಂತೆ ಯಾವುದೇ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ' ಎಂದು ಮೋದಿ ಸಂಸತ್ ಕಲಾಪದಲ್ಲಿ ಘೋಷಣೆ ಮಾಡಿ ಟಿಡಿಪಿ ಸಂಸದರಿಗೆ ತಿರುಗೇಟು ನೀಡಿದರು.
ನಿಮ್ಮ ಮೇಲೆ ನಿಮಗೆ ವಿಶ್ವಾಸವಿಲ್ಲ
'ಕಾಂಗ್ರೆಸ್ ಪಕ್ಷಕ್ಕೆ ಆರ್ಬಿಐ, ಇವಿಎಂ, ಚುನಾವಣಾ ಆಯೋಗ, ಜಿಎಸ್ಟಿ, ಮೇಕ್ ಇನ್ ಇಂಡಿಯಾ, ವಿಶ್ವಯೋಗ ದಿನ, ಸ್ವಚ್ಛ ಭಾರತ್ ಇವುಗಳ ಮೇಲೆ ವಿಶ್ವಾಸವಿಲ್ಲ. ಸ್ವತಃ ಅವರ ಮೇಲೆಯೇ ಅವರಿಗೆ ವಿಶ್ವಾಸವಿಲ್ಲ' ಎಂದು ಮೋದಿ ಕಾಲೆಳೆದರು.
'ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಆತುರದಲ್ಲಿರುವ ನೀವು ಮಿತ್ರ ಪಕ್ಷವನ್ನು ಬಲಪಡಿಸಿಕೊಳ್ಳಿ, ಅವರ ಮೇಲೆಯಾದರೂ ವಿಶ್ವಾಸವಿಡಿ' ಎಂದು ಕುಟುಕಿದರು.
ಕಾಂಗ್ರೆಸ್ ಮುಳುಗುತ್ತಿರುವ ದೋಣಿ
'ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿ. ಅವರ ಜೊತೆ ಹೋಗುವ ಇತರ ಪಕ್ಷಗಳು ಮುಳುಗುತ್ತವೆ' ಎಂದು ಹೇಳಿದೆ ಮೋದಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ವಿಪಕ್ಷಗಳಿಗೆ ಮಾತಿನ ಏಟು ನೀಡಿದರು.
'ನಮ್ಮ ಬಳಿ ಅಗತ್ಯ ಸಂಖ್ಯಾ ಬಲವಿದೆ. ಆದರೆ, ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು ಏಕೆ? ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆಗದಿದ್ದರೆ ಭೂಕಂಪವಾಗುತ್ತಿತ್ತೇ?' ಎಂದು ಮೋದಿ ಪ್ರಶ್ನಿಸಿದರು.