ಮತ್ತೆ ದ್ರೋಹ ಬಗೆದ ಮೋದಿ: ಚಂದ್ರಬಾಬು ನಾಯ್ಡು ಆರೋಪ
ನವದೆಹಲಿ, ಜುಲೈ 21: ಸಂಸತ್ನಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ, ತಮ್ಮ ರಾಜ್ಯಕ್ಕೆ ಮತ್ತೆ ದ್ರೋಹ ಎಸಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ತಮ್ಮ ರಾಜ್ಯದ ಈಗಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಲು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಕನ್ನಡ ದಿನಪತ್ರಿಕೆಗಳು ಕಂಡಂತೆ ಅಪ್ಪುಗೆ, ಕಣ್ಮಿಟುಕು ಮತ್ತು ಅವಿಶ್ವಾಸ!
'ಆಂಧ್ರಪ್ರದೇಶದ 5 ಕೋಟಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಮ್ಮ ರಾಜ್ಯಕ್ಕೆ ಏನು ಮಾಡಲಾಗಿದೆ ಎನ್ನುವುದನ್ನು ದೇಶಕ್ಕೆ ತಿಳಿಸಲು ಬಯಸಿದ್ದೇನೆ. ಬಿಜೆಪಿ ನಮ್ಮನ್ನು ಮತ್ತೊಮ್ಮೆ ವಂಚಿಸಿದೆ. ಇದು ದುರದೃಷ್ಟಕರ ಎಂದು ನಾಯ್ಡು ಹೇಳಿದ್ದಾರೆ.
ರಾಜ್ಯವನ್ನು ದುರ್ಬಲಗೊಳಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ವಿರೋಧಿಗಳ ಜತೆ ಕೈಜೋಡಿಸುತ್ತಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಸಂಸದ ಜಯದೇವ್ ಗಲ್ಲಾ ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ನಾವು ಇದನ್ನು ಮಾಡುತ್ತಿದ್ದೇವೆ ಎಂದು ಮೋದಿ ಅವರು ಹೇಳಿರುವುದು ಖಂಡನೀಯ. ನಮ್ಮೊಂದಿಗೆ ಈಗಲೂ ಮೈತ್ರಿ ಹೊಂದಿದ್ದರೂ, ನಮ್ಮ ವಿರೋಧಿಗಳ ಜತೆಯಲ್ಲಿ ಕೈಜೋಡಿಸುತ್ತಿದ್ದಾರೆ. ಇದರ ಮೂಲಕ ನಮ್ಮ ರಾಜ್ಯವು ಅನುದಾನದ ಹಸಿವಿನಿಂದ ದುರ್ಬಲಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯಗಳನ್ನು ಎತ್ತಿಹಿಡಿಯುವಲ್ಲಿ ಪಕ್ಷ ಯಶಸ್ವಿಯಾಗಿದೆ ಎಂದು ಟಿಡಿಪಿಯ ಮತ್ತೊಬ್ಬ ಸಂಸದ ಕೆ. ಶ್ರೀನಿವಾಸ್ ಹೇಳಿದ್ದಾರೆ.
ಅದು ಅಪ್ಪುಗೆಯಲ್ಲ, ಮೋದಿಗೆ ನೀಡಿದ ಶಾಕ್: ಶಿವಸೇನಾ ವಿಶ್ಲೇಷಣೆ
'ಇದು ಬಹುಮತದ ವಿಚಾರವಲ್ಲ, ನೈತಿಕತೆಯ ವಿಚಾರ. ನೈತಿಕತೆ ಇಂದು ಗೆದ್ದಿದೆ. ಪ್ರಧಾನಿ ಮತ್ತು ಅವರ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ನಾವು ಬಯಸಿದ್ದೆವು.
ನಿರುದ್ಯೋಗ, ರೈತರ ಸಂಕಟಗಳು, ಆರ್ಥಿಕತೆಯ ಹಿನ್ನಡೆ ಮುಂತಾದವುಗಳನ್ನು ನೋಡಿ. ಪ್ರತಿಯೊಂದು ವಿಚಾರದಲ್ಲಿಯೂ ಅವರು ವಿಫಲರಾಗಿದ್ದಾರೆ. ಹಾಗೂ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಶ್ರೀನಿವಾಸ್ ಹೇಳಿದ್ದಾರೆ.