ವಿಶ್ವಾಸ ಮತ ಗೆದ್ದ ಮೋದಿ ನೇತೃತ್ವದ ಎನ್ಡಿಎ ಸರ್ಕಾರ
ನವದೆಹಲಿ, ಜುಲೈ 20 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯ ವಜಾಗೊಂಡಿದೆ. ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿದ್ದ ವಿಪಕ್ಷಗಳಿಗೆ ಭಾರೀ ಹಿನ್ನಡೆ ಉಂಟಾಗಿದೆ.
ಬುಧವಾರ ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ನಿರ್ಣಯವನ್ನು ಅಂಗೀಕರಿಸಿ, ಶುಕ್ರವಾರ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದ್ದರು.
ಲೋಕಸಭೆಯಲ್ಲಿ ಬೆಳಗ್ಗೆಯಿಂದ ನಡೆದಿದ್ದೇನು?
ಜುಲೈ 20ರ ಶುಕ್ರವಾರ 12 ಗಂಟೆಗಳ ಕಾಲ ಅವಿಶ್ವಾಸ ನಿರ್ಣಯದ ಬಗ್ಗೆ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 2 ಗಂಟೆಗಳ ಕಾಲ ಕಲಾಪವನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ ಅವರ ಭಾಷಣ ಮುಗಿದ ಬಳಿಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು. ಸಂಸತ್ ಭವನದ ಬಾಗಿಲು ಮುಚ್ಚಿ, ಸದಸ್ಯರು ಕುಳಿತಲ್ಲಿಂದ ಎಲೆಕ್ಟ್ರಾನಿಕ್ ವೋಟಿಂಗ್ ಮಾಡಲು ಅವಕಾಶ ನೀಡಲಾಯಿತು.
ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?
ಅವಿಶ್ವಾಸ ನಿರ್ಣಯದ ಪರವಾಗಿ yes ಎಂದು 126 ಮತಗಳು ಚಲಾವಣೆಯಾದವು. ಅವಿಶ್ವಾಸ ನಿರ್ಣಯದ ವಿರುದ್ಧವಾಗಿ No ಎಂದು 325 ಮತಗಳು ಚಲಾವಣೆಗೊಂಡವು. ಸದನದಲ್ಲಿ ಒಟ್ಟು ಹಾಜರಿದ್ದ ಸದಸ್ಯರ ಸಂಖ್ಯೆ 451.
ಅವಿಶ್ವಾಸ ನಿರ್ಣಯದ ಪರವಾಗಿ ಕೇವಲ 126 ಮತಗಳು ಚಲಾವಣೆಯಾದ ಕಾರಣ ಸರ್ಕಾರದ ವಿರುದ್ಧ ಮಂಡನೆ ಮಾಡಿದ್ದ ನಿರ್ಣಯಕ್ಕೆ ಸೋಲಾಯಿತು. ಪ್ರತಿಪಕ್ಷಗಳಿಗೆ ಭಾರೀ ಮುಖಭಂಗವಾಯಿತು.