ಅಂತರ್ಜಾಲ ಕಡಿತ, ಧಾರ್ಮಿಕ ದಾಳಿಗಳ ಮಾಹಿತಿ ಇಲ್ಲ: ಸಂಸತ್ನಲ್ಲಿ ಕೇಂದ್ರದ ಹೇಳಿಕೆ
ನವದೆಹಲಿ, ಮಾರ್ಚ್ 11: ದೇಶದಲ್ಲಿನ ಅಂತರ್ಜಾಲ ಸ್ಥಗಿತದ ಕುರಿತು ಕೇಂದ್ರೀಕೃತ ದಾಖಲೆಗಳಿಲ್ಲ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ನಡೆದ ದಾಳಿಗಳ ಕುರಿತು ಸರ್ಕಾರ ರಾಷ್ಟ್ರೀಯ ದತ್ತಾಂಶ ನಿರ್ವಹಣೆ ಮಾಡಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಜ್ಯಸಭೆಯಲ್ಲಿ ತಿಳಿಸಿದೆ.
ದೇಶದಲ್ಲಿ ಉದ್ವಿಗ್ನ ಸ್ಥಿತಿ ಮತ್ತು ಗಲಭೆಗಳ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿರುವ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಅಂತರ್ಜಾಲ ನಿಷೇಧವು ವದಂತಿಗಳನ್ನು ತಡೆಯಲು ಮುಖ್ಯವಾಗಿ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೂವರೆ ವರ್ಷಗಳ ನಂತರ ಮತ್ತೆ 4ಜಿ ಸಂಪರ್ಕ
'ಸೈಬರ್ ಕ್ಷೇತ್ರದಲ್ಲಿ ಮಾಹಿತಿಯ ಹರಿವು ಬಹಳ ವೇಗ. ಹಾಗೆಯೇ ಇದರ ದುರ್ಬಳಕೆಯ ಅವಕಾಶವೂ ಹೆಚ್ಚು. ಉದ್ವಿಗ್ನತೆ ಮತ್ತು ಗಲಭೆಗಳ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಸಾರ್ವಜನಿಕ ತುರ್ತನ್ನು ನಿರ್ವಹಿಸಲು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಂಬಂಧಿತ ಅಧಿಕಾರಿಗಳು ದೂರಸಂಪರ್ಕ ಸೇವೆ ಅಥವಾ ಅಂತರ್ಜಾಲ ಸಂಪರ್ಕಗಳನ್ನು ಸ್ಥಗಿತಗೊಳಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ' ಎಂದು ಅವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕ್ರೈಸ್ತರ ಮೇಲಾದ ದಾಳಿಗಳ ಕುರಿತು ವಿವರ ನೀಡುವಂತೆ ಕೇಳಲಾಗಿದ್ದ ಪ್ರಶ್ನೆಗೆ, ನಿರ್ದಿಷ್ಟ ಸಮುದಾಯಗಳು ಅಥವಾ ಧಾರ್ಮಿಕ ಸಂಸ್ಥೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಕೇಂದ್ರದಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ ಎಂದು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.