ಮಗುವಿಗೆ ಸ್ತನ್ಯಪಾನಕ್ಕೆ ಅವಕಾಶ ನೀಡದ ತಂದೆಯ ಬಂಧನ
ಬೆಂಗಳೂರು, ನವೆಂಬರ್ 5: ಧಾರ್ಮಿಕ ಕಾರಣಗಳಿಗಾಗಿ ಮಗುವಿಗೆ ಹಾಲೂಡಿಸಲು ಅವಕಾಶ ನೀಡದ ಅಬೂಬಕರ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ದೂರು ಬಂದಿದ್ದರಿಂದ ಬಾಲ ನ್ಯಾಯ ಕಾಯ್ದೆ ಅಡಿ ದೂರನ್ನು ದಾಖಲಿಸಿದ್ದಾರೆ. ಆಸ್ಪತ್ರೆಯವರು ಎಷ್ಟು ಹೇಳಿದರೂ ಮಗು ಹುಟ್ಟಿ ಇಪ್ಪತ್ನಾಲ್ಕು ಗಂಟೆವರೆಗೆ ಧಾರ್ಮಿಕ ಕಾರಣಗಳಿಗಾಗಿ ತಾಯಿ ಹಾಲೂಡಿಸಬಾರದು ಎಂದು ಮಗುವಿನ ತಂದೆ ಹಟ ಮಾಡಿದ್ದ.
ಐದು ಪ್ರಾರ್ಥನೆ ಪೂರ್ತಿ ಆಗುವವರೆಗೆ ತಾಯಿ ಹಾಲನ್ನು ಕುಡಿಸಬಾರದು ಎಂದು ಅತನ ವಾದವಾಗಿತ್ತು. ಆ ವ್ಯಕ್ತಿಯ ಹೆಸರು ಅಬೂಬಕರ್. ಆತನಿಗೆ ಧರ್ಮಗುರುಗಳೊಬ್ಬರು ಹೇಳಿದ್ದರಂತೆ, ಮೆಕ್ಕಾದ ನೀರು ಹಾಗೂ ಜೇನುತುಪ್ಪವನ್ನೇ ಮಗುವಿಗೆ ಕೊಡಬೇಕು ಅಂತ. ಇದು ಹಾಗಲ್ಲಪ್ಪ ಎಂದು ಆಸ್ಪತ್ರೆಯವರು ಆತನನ್ನು ಓಲೈಸುವುದಕ್ಕೆ ಯತ್ನಿಸಿದ್ದರು, ತಿಳಿ ಹೇಳಿದ್ದರು, ಕೊನೆಗೆ ಹೆದರಿಸಿಯೂ ನೋಡಿದ್ದರು. ಆದರೆ ಅದ್ಯಾವುದಕ್ಕೂ ಮಣಿಯದ ಅಬೂಬಕರ್, ಬಲವಂತವಾಗಿ ಆಸ್ಪತ್ರೆಯಿಂದ ಹೆಂಡತಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದ.[ಸ್ತನ್ಯಪಾನ ನನ್ನ ಧರ್ಮಕ್ಕೆ ವಿರುದ್ಧ ಅಂದ ಕೇರಳಿಗ]
ಹೊಕ್ಕುಳ ಬಳ್ಳಿ ನಾಳದ ಮೂಲಕ ಮಗುವಿಗೆ ಅಗತ್ಯ ಪೋಷಕಾಂಶ ದೊರೆಯುತ್ತದೆ ಎಂದು ಅಬೂಬಕರ್ ವೈದ್ಯರ ಜೊತೆಗೆ ವಾದ ಕೂಡ ಮಾಡಿದ್ದ. ಆತನ ವಾದದಿಂದ ಆಸ್ಪತ್ರೆ ಅಧಿಕಾರಿಗಳು ಅಸಮಾಧಾನಗೊಂಡು, ಕೋಳಿಕೋಡ್ ನ ಕೋ ಆಪರೇಟಿವ್ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು.[ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು]
ಅತ ಆ ಮಗವಿನ ಹಕ್ಕನ್ನು ಕಸಿದುಕೊಂಡಿದ್ದಾನೆ. ಆ ತಾಯಿಯು ಮಗುವಿಗೆ ಹಾಲು ಕುಡಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಅತನನ್ನು ಪದೇಪದೇ ಕೇಳಿಕೊಂಡೆವು. ಆದರೂ ಒಪ್ಪಲಿಲ್ಲ. ಆತನ ಮನವೊಲಿಸುವ ನಮ್ಮ ಯಾವ ಪ್ರಯತ್ನವೂ ಫಲಿಸಲಿಲ್ಲ ಎಂದು ಅಸ್ಪತ್ರೆಯ ನರ್ಸ್ ವೊಬ್ಬರು ಹೇಳಿದ್ದರು.