ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ
ಪಾಟ್ನಾ, ಸೆಪ್ಟೆಂಬರ್ 16: ಬಿಹಾರದ ಉಪಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಂಡರೂ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸದೇ ಇದ್ದ ತೇಜಸ್ವಿ ಯಾದವ್ (ಲಾಲೂ ಪ್ರಸಾದ್ ಯಾದವ್ ಪುತ್ರ) ಅವರನ್ನು ನಿವಾಸದಿಂದ ಹೊರಕಳಿಸುವಲ್ಲಿ ನಿತೀಶ್ ಕುಮಾರ್ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ.
ರೈಲ್ವೆ ಇಲಾಖೆ ಅಕ್ರಮ: ಸಿಬಿಐನಿಂದ ಲಾಲೂ, ತೇಜಸ್ವಿಗೆ ಸಮನ್ಸ್
ಬಿಹಾರದ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿದ್ದ ನಾಟಕೀಯ ಬೆಳವಣಿಗೆಯೊಂದರಲ್ಲಿ, ಈ ಮೊದಲು ಆರ್ ಜೆಡಿ ಪಕ್ಷದ ಜತೆ ಸರ್ಕಾರ ರಚಿಸಿದ್ದ ಜೆಡಿಯುನ ನಿತೀಶ್ ಕುಮಾರ್, ಆರ್ ಜೆಡಿ ಸಖ್ಯ ತೊರೆದು ಬಿಜೆಪಿ ಜತೆಗೆ ಕೈ ಜೋಡಿಸಿ, ಹೊಸ ಸರ್ಕಾರ ರಚಿಸಿದ್ದರು. ಇದರಿಂದಾಗಿ, ಆರ್ ಜೆಡಿ-ಜೆಡಿಯು ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ತಮ್ಮ ಸ್ಥಾನ ಕಳೆದುಕೊಂಡಿದ್ದರು.
ಆದರೆ, ಇದಾಗಿ ವಾರಗಳೇ ಕಳೆದರೂ ತೇಜಸ್ವಿ ಯಾದವ್ ತಮಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ತೊರೆದಿರಲಿಲ್ಲ. ಇದಕ್ಕೆ ಕಾರಣ, ಈ ಮೊದಲು ಹಳೆಯದಾಗಿದ್ದ ಈ ಬಂಗಲೆಯನ್ನು ತಾವು ಉಪಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಆಧುನೀಕರಣಗೊಳಿಸಿದ್ದರು ಯಾದವ್. ಇದೇ ಕಾರಣಕ್ಕಾಗಿಯೇ ಅವರು ಬಂಗಲೆ ಬಿಡಲು ಮನಸ್ಸೇ ಮಾಡಿರಲಿಲ್ಲ ಎನ್ನಲಾಗಿದೆ.
ಆದರೆ, ಈ ಬಂಗಲೆಯನ್ನು ಇದೀಗ ವಿರೋಧ ಪಕ್ಷದ ನಾಯಕರಿಗೆ ನೀಡಿರುವುದರಿಂದ ಇದನ್ನು ಬಿಡುವಂತೆ ನಿತೀಶ್ ಸರ್ಕಾರ ಪದೇ ಪದೇ ತೇಜಸ್ವಿ ಅವರಿಗೆ ತಾಕೀತು ಮಾಡಿತ್ತು. ಆದರೆ, ಇದಕ್ಕೆ ತೇಜಸ್ವಿ ಏನಾದರೊಂದು ನೆಪ ಹೇಳುತ್ತಲೇ ಇದ್ದರು. ಆದರೂ, ಪಟ್ಟುಬಿಡದ ನಿತೀಶ್ ಸರ್ಕಾರ, ತೇಜಸ್ವಿ ಅವರನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.