ಜೆಡಿಯುವಿನಲ್ಲಿ ನಂ.2 ಸ್ಥಾನಕ್ಕೇರಿದ ರಾಜಕೀಯ ತಂತ್ರಜ್ಞ ಪ್ರಶಾಂತ್
ಪಾಟ್ನ, ಅಕ್ಟೋಬರ್ 16: ಜನತಾ ದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ ಅವರು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ನಂ.2 ಸ್ಥಾನಕ್ಕೇರಿಸಿದ್ದಾರೆ. ಪ್ರಶಾಂತ್ ಅವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದ್ದು, ತಕ್ಷಣವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನಿತೀಶ್ ಹೇಳಿದ್ದಾರೆ.
ಈತನೇ ಹಲವು ಪಕ್ಷಗಳ ಗೆಲುವಿನ ಮೆದುಳು, ಚಾಣಾಕ್ಷ ಪ್ರಶಾಂತ್ ಕಿಶೋರ್
ಬಿಹಾರದಲ್ಲಿ 2015ರಲ್ಲಿ ಎನ್ಡಿಎ ವಿರುದ್ಧ ಜೆಡಿಯು ಹಾಗೂ ಆರ್ ಜೆಡಿ ಮಹಾಮೈತ್ರಿಗೆ ಯಶಸ್ಸು ತಂದುಕೊಟ್ಟಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಕೈಬಿಟ್ಟರೂ, ಆಡಳಿತರೂಢ ಜೆಡಿಯು ಕೈಬಿಟ್ಟಿರಲಿಲ್ಲ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಪ್ತರಾಗಿರುವ ಪ್ರಶಾಂತ್ ಅವರು ತಡವಾಗಿಯಾದರೂ ಉನ್ನತ ಸ್ಥಾನ ಸಿಕ್ಕಿದೆ. ಕಳೆದ ತಿಂಗಳು ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಶಾಂತ್ ಅವರು ಅಧಿಕೃತವಾಗಿ ಪಕ್ಷ ಸೇರಿದ್ದರು.
ಬಿಜೆಪಿಗೆ ಬಿಹಾರದಲ್ಲಿ ಭಾರೀ ಮುಖಭಂಗ ತಂದಿದ್ದ ಪ್ರಶಾಂತ್
ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದ ಬಿಜೆಪಿಯಿಂದ ದೂರವಾದ ಪ್ರಶಾಂತ್ ಕಿಶೋರ್, ಬಿಹಾರದ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೈತ್ರಿಕೂಟದ ಜೊತೆ ಕೆಲಸ ಮಾಡಿದ್ದರು. 'ಸಾರಾಯಿ ಮುಕ್ತ ಬಿಹಾರ' ಮಂತ್ರದ ತಂತ್ರಗಾರಿಕೆ ರೂಪಿಸಿ, ಪ್ರಶಾಂತ್ ಬಿಜೆಪಿಗೆ ಬಿಹಾರದಲ್ಲಿ ಭಾರೀ ಮುಖಭಂಗ ತಂದೊಡ್ಡಿದ್ದರು.
ಆದರೆ, 2019ರ ಲೋಕಸಭಾ ಚುನಾವಣೆಯ ಸಂಬಂಧ ಪ್ರಶಾಂತ್ ಕಿಶೋರ್ ಹಲವು ಬಾರಿ ಮೋದಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಜೊತೆಗೆ ಮೋದಿ ಅಲೆ ಏಳುವಂತೆ ಮಾಡಲು ಯಶಸ್ವಿಯಾಗಿದ್ದದ್ದು ಪ್ರಶಾಂತ್ ಅವರ ಬ್ಯಾಕ್ ಗ್ರೌಂಡ್ ಕೆಲಸ ಕಾರಣ ಎನ್ನುವುದನ್ನು ಅರಿತಿರುವ ಪ್ರಧಾನಿ, ಮುಂದಿನ ಚುನಾವಣೆಗೂ ಅವರನ್ನೇ ನೇಮಿಸುವ ಸಾಧ್ಯತೆಯಿದೆ.
ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ
ಉತ್ತರಪ್ರದೇಶದಲ್ಲಿ ಪ್ರಶಾಂತ್ ಗೆ ಸೋಲು
ಮೋದಿ ಗೆಲ್ಲಿಸಲು 'ಚಾಯ್ ಪೇ ಚರ್ಚಾ', ನಿತೀಶ್ ಗೆಲುವಿಗೆ 'ಸಾರಾಯಿ ಮುಕ್ತ' ಮಂತ್ರ ಜಪಿಸಿದ್ದ ಪ್ರಶಾಂತ್ ಕಿಶೋರ್, ಉತ್ತರಪ್ರದೇಶ ಜಾತಿ ಸಂಕೀರ್ಣತೆಯ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣರಿಗೆ ಮಣೆ ಹಾಕಲು ಹೋಗಿ ಮಗಚಿ ಬಿದ್ದರು.ಒಬಿಸಿ ಮತಗಳು, ಅಖಿಲೇಶ್ ಸರ್ಕಾರ ಮರೆತ ಬುಡಕಟ್ಟು ಜನಾಂಗ, ಜಾತಿ, ಮತ ಪಂಥಗಳ ಓಲೈಕೆ ಮೂಲಕ ಬಿಜೆಪಿ ಶೇ 57ರಷ್ಟು ಕುರ್ಮಿ, ಶೇ 63ರಷ್ಟು ಲೋಧ್, ಶೇ 60 ರಷ್ಟು ಇತತೆ ಒಬಿಸಿ ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಅಖಿಲೇಶ್ ರಂತೆ ಪ್ರಶಾಂತ್ ಕೂಡಾ ಈ ವರ್ಗವನ್ನು ಕಡೆಗಣಿಸಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು. ಕೊನೆಯ ನಗು ಅಮಿತ್ ಶಾ ಪಾಲಾಯಿತು
ಅಖಿಲೇಶ್ ಇಮೇಜ್ ಗೂ ಹಾನಿಯಾಗಿತ್ತು.
2012ರಿಂದ ಇಲ್ಲಿ ತನಕ ಉತ್ತರಪ್ರದೇಶದಲ್ಲಿ ಅಖಿಲೇಶ್ ಬೆಳೆಸಿಕೊಂಡು ಬಂದಿದ್ದ ಇಮೇಜ್ ಸಂಪೂರ್ಣವಾಗಿ ಮಣ್ಣು ಪಾಲಾಯಿತು. ಅಖಿಲೇಶ್ ಸರಕಾರದ ವಿವಿಧ ಯೋಜನೆಗಳಾದ ಸಮಾಜವಾದಿ ಪಿಂಚಣಿ ಯೋಜನೆ, ಕಾಮಧೇನು ಡೈರಿ ಯೋಜನೆ, ನೀರಾವರಿ ಯೋಜನೆ, 2017ರ ಚುನಾವಣೆ ನಂತರ ಸ್ಮಾರ್ಟ್ ಫೋನ್ ವಿತರಣೆ ಮುಂತಾದ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಲ್ಡಪ್ ಕೊಟ್ಟಿದ್ದ ಪ್ರೊಫೆಸರ್ ಸ್ಟೀವ್ ಜಾರ್ಡಿಂಗ್ ಅವರ ಪರಿಶ್ರಮವನ್ನು ರಾಹುಲ್ ಹಾಗೂ ಪ್ರಶಾಂತ್ ಜೋಡಿ ಹಾಳುಗೆಡವಿತು.
ಪ್ರಶಾಂತ್ ಕಿಶೋರ್ ಬಗ್ಗೆ
ಪ್ರಶಾಂತ್ ಕಿಶೋರ್ ಬಗ್ಗೆ. 1977ರಲ್ಲಿ ಉತ್ತರಪ್ರದೇಶ ಪೂರ್ವ ಭಾಗದ ಬಲಿಯಾ ಜಿಲ್ಲೆಯಲ್ಲಿ ಹುಟ್ಟಿದವರು ಪ್ರಶಾಂತ್ ಕಿಶೋರ್. ತಂದೆ ಬಿಹಾರದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರಾಗಿದ್ದರು. ತಾಯಿ ಗೃಹಿಣಿ. ಇನ್ನು ಮದುವೆ ಆಗಿರುವುದು ಅಸ್ಸಾಂನ ಗುವಾಹತಿ ಮೂಲದ ವೈದ್ಯೆ ಜಾಹ್ನವಿ ದಾಸ್ ರನ್ನು. ಈ ದಂಪತಿಗೆ ಒಬ್ಬ ಮಗ ಇದ್ದಾನೆ.
ಪ್ರಶಾಂತ್ ಕಿಶೋರ್ ಒಂದು ಪಕ್ಷಕ್ಕೆ ಎಂದು ಸೀಮಿತವಾಗಿದ್ದವರಲ್ಲ. ಏಕೆಂದರೆ ಬಿಜೆಪಿ, ಕಾಂಗ್ರೆಸ್, ಜೆಡಿಯು, ವೈಎಸ್ ಆರ್ ಕಾಂಗ್ರೆಸ್ ಹೀಗೆ ನಾನಾ ಪಕ್ಷಗಳ ಪರವಾಗಿ ಚುನಾವಣೆಗಾಗಿ ರಣ ತಂತ್ರ ಹೆಣೆದ ವ್ಯಕ್ತಿ ಈತ.ಸಿಟಿಜನ್ ಫಾರ್ ಅಕೌಂಟಬಲ್ ಗವರ್ನೆನ್ಸ್ (ಸಿಎಜಿ) ಎಂಬ ಎನ್ ಜಿಒ ಆರಂಭಿಸಿದರು ಪ್ರಶಾಂತ್ ಕಿಶೋರ್. ಅತ್ಯುತ್ತಮ ಕಾಲೇಜುಗಳ ಇನ್ನೂರು ಯುವ ವೃತ್ತಿಪರರನ್ನು ನೇಮಿಸಿಕೊಂಡು, ಬಿಜೆಪಿಯ ಪರವಾಗಿ ಸಾಮಾಜಿಕ ಮಾಧ್ಯಮದ ದೊಡ್ಡ ಹವಾ ಎಬ್ಬಿಸಿದರು. ಅದರಲ್ಲೂ ಚಾಯ್ ಪೇ ಚರ್ಚಾ, ಮಂಥನ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರದಿಂದ ದೊಡ್ಡ ಮಟ್ಟದ ಸಹಾಯವಾಯಿತು.