ಬಿಜೆಪಿ ಬಿಡೆನು ಎಂದ ನಿತಿನ್ ಪಟೇಲ್, ಹಾರ್ದಿಕ್ ಆಸೆಗೆ ತಣ್ಣೀರು
ಅಹಮದಾಬಾದ್, ಡಿಸೆಂಬರ್ 30: ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಬಿಜೆಪಿ ಪಕ್ಷದ ವರಿಷ್ಠರ ಮೇಲೆ ಬೇಸರಗೊಂಡಿದ್ದು, ಪಕ್ಷಕ್ಕೆ ರಾಜಿನಾಮೆ ನೀಡುತ್ತಾರೆ ಎಂಬ ಊಹಾಪೋಹ ಹರಿದಾಡುತ್ತಿತ್ತು, ಆದರೆ ಇದು ಸುಳ್ಳಾಗಿದೆ.
ಸ್ವತಃ ನಿತಿನ್ ಪಟೇಲ್ ಈ ವಿಷಯ ಸ್ಪಷ್ಟಪಡಿಸಿದ್ದು, 40 ವರ್ಷಗಳ ಸತತ ಪರಿಶ್ರಮದಿಂದ ಈ ಹಂತಕ್ಕೆ ಬೆಳೆದಿದ್ದೇನೆ, ಪಕ್ಷಕ್ಕಾಗಿ ಅವಿರತ ದುಡಿದಿದ್ದೇನೆ ನಾನೇಕೆ ರಾಜಿನಾಮೆ ಕೊಡಲಿ ಎಂದು ತಮ್ಮ ರಾಜಿನಾಮೆ ಸುದ್ದಿ ಹರಡಿಸಿದವರನ್ನೇ ಪ್ರಶ್ನಿಸಿದ್ದಾರೆ ನಿತಿನ್ ಪಟೇಲ್.
ಗುಜರಾತ್ ಸರ್ಕಾರದಲ್ಲಿ ಬಿರುಕು ಮೂಡಿಸುತ್ತಿರುವ ಹಾರ್ದಿಕ್
ತಾವು ಅಸಮಾಧಾನಗೊಂಡಿರುವುದನ್ನು ಒಪ್ಪಿಕೊಂಡಿರುವ ಅವರು 'ಕೆಲವು ಆಂತರಿಕ ಸಮಸ್ಯೆಗಳು ಇದ್ದು, ಅವನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ' ಎಂದಿದ್ದಾರೆ.
ತಮ್ಮ ಕೋರಿಕೆಯ ಖಾತೆ ನೀಡಲಿಲ್ಲವೆಂದು ನಿತಿನ್ ಪಟೇಲ್ ಅಸಮಾಧಾನಗೊಂಡಿದ್ದರು, ತಮ್ಮ ಕೋರಿಕೆಯ ಖಾತೆ ಹಾಗೂ ತಮ್ಮ ಬೆಂಬಲಿಗ ಶಾಸಕರಿಗೂ ಖಾತೆಗಳನ್ನು ನಿಡುವಂತೆ ನಿತಿನ್ ಪಟೇಲ್ 48 ಗಂಟೆಗಳ ಗಡುವು ನೀಡಿದ್ದಾರೆ ಅದಾದ ನಂತರ ಅವರು ಬಿಜೆಪಿಗೆ ರಾಜಿನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
ಇದೇ ಅವಕಾಶದ ಸದುಪಯೋಗಕ್ಕೆ ಪ್ರಯತ್ನಿಸಿದ ಪಾಟೀದಾರ್ ಅನಾಮತ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್, ನಿತಿನ್ ಅವರನ್ನು ಬಿಜೆಪಿ ಬಿಡುವಂತೆ ಕೋರಿದ್ದರು, ನಿತಿನ್ ಅವರು ಬಿಜೆಪಿ ತೊರೆದು ನಮ್ಮೊಂದಿಗೆ ಸೇರಿದಲ್ಲಿ, ಕಾಂಗ್ರೆಸ್ ಜೊತೆ ಮಾತನಾಡಿ ಉತ್ತಮ ಸ್ಥಾನ-ಮಾನ ಕೊಡಿಸಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು.
ತಮ್ಮ ಕೋರಿಕೆಯ ಖಾತೆ ಸಿಗದೆ ಅಸಮಾಧಾನಗೊಂಡಿರುವುದು ಸತ್ಯವೆಂದು ಒಪ್ಪಿಕೊಂಡಿರುವ ನಿತಿನ್ ಪಟೇಲ್ ರಾಜಿನಾಮೆ ಸುದ್ದಿಯನ್ನು ತಳ್ಳಿಹಾಕಿದ್ದಾರೆ.