ನೀತಿ ಆಯೋಗ ಸಭೆ: ಮೂವರು ಮುಖ್ಯಮಂತ್ರಿಗಳು ಗೈರು
ನವದೆಹಲಿ, ಜೂನ್ 15: ಅತ್ಯಂತ ಪ್ರಮುಖ ನೀತಿ ಆಯೋಗದ ಸಭೆಯು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಿತು.
ಕರ್ನಾಟಕ ಸಿಎಂ ಕುಮಾರಸ್ವಾಮಿ ಸೇರಿದಂತೆ, ದೇಶದ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು, ಕೇಂದ್ರಾಡಳಿತ ಪ್ರದೇಶದ ಗೌರ್ನರ್ಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು.
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಹ ಸಭೆಗೆ ಹಾಜರಾಗಲಿಲ್ಲ.
ಮಮತಾ ಬ್ಯಾನರ್ಜಿ ಅವರು ಕೆಲವು ದಿನಗಳ ಹಿಂದೆಯೇ 'ಅನುಪಯುಕ್ತ' ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು, ಅಂತೆಯೇ ಅವರು ಸಭೆಗೆ ಗೈರಾಗಿದ್ದಾರೆ.
ಇನ್ನು ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್ ರಾವ್ ಅವರು, ರಾಜ್ಯದಲ್ಲಿ ಹನಿನೀರಾವರಿ ಪದ್ಧತಿಯ ಬೃಹತ್ ಯೋಜನೆಯ ಉದ್ಘಾಟನೆಗೆ ತಯಾರಿ ನಡೆಸುತ್ತಿರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೆಂದು ಸಂದೇಶ ಕಳುಹಿಸಿದ್ದಾರೆ.
2024ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಮೋದಿ ವಿಶ್ವಾಸ
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಆರೋಗ್ಯ ಸಮಸ್ಯೆಯ ಕಾರಣ ನೀಡಿ ಸಭೆಗೆ ಹಾಜರಾಗಿಲ್ಲ.
ಸಭೆಯಲ್ಲಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಅಭಿವೃದ್ಧಿಯ ಮಂತ್ರ ನೀಡಿದ್ದು, ಕೆಲವು ಗುರಿಗಳನ್ನು ಸಹ ನೀಡಿದ್ದಾರೆ. 2024 ರ ವೇಳೆಗೆ ಭಾರತದ ಆರ್ಥಿಕತೆಯು ಐದು ಟ್ರಿಲಿಯನ್ ದಾಟಬೇಕು, ಅದಕ್ಕಾಗಿ ಜಿಲ್ಲಾ ಮಟ್ಟದಿಂದಲೇ ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಮೋದಿ ಕರೆ ನೀಡಿದರು.
ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ, ಬೇಕಾಗಿರುವ ಸವಲತ್ತುಗಳು ಇನ್ನೂ ಹಲವು ವಿಚಾರಗಳನ್ನು ನರೇಂದ್ರ ಮೋದಿ ಅವರ ಮುಂದೆ ಇಟ್ಟರು.