ಕೊರೊನಾ ದೂರವಿಡಲು ಚ್ಯವನ್ಪ್ರಾಶ್, ಅರಿಶಿಣ ಬೆರೆಸಿದ ಹಾಲು ಸೇವನೆ ಸಲಹೆಗೆ ವೈದ್ಯರ ಟೀಕೆ
ನವದೆಹಲಿ, ಏಪ್ರಿಲ್ 14: ಕೊರೊನಾ ಸೋಂಕಿನ ಮಂದಗತಿಯ ಲಕ್ಷಣಗಳು ಕಂಡುಬಂದರೆ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಇಲ್ಲವೇ ಚವನ್ ಪ್ರಾಶ್ ಅಥವಾ ಗಿಡಮೂಲಿಕೆಗಳ ಔಷಧಿಯನ್ನು ಸೇವನೆ ಮಾಡಿ ಎಂದು ಜನರಿಗೆ ಭಾರತ ಕೊರೊನಾ ನಿಯಂತ್ರಣ ಸಮಿತಿಯ ಹಿರಿಯ ಅಧಿಕಾರಿಯೊಬ್ಬರು ಶಿಫಾರಸ್ಸು ಮಾಡಿರುವುದು ಟೀಕೆಗೆ ಒಳಗಾಗಿದೆ.
ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಆಯುರ್ವೇದ ಔಷಧಿ ಶಿಫಾರಸ್ಸು ಮಾಡಿರುವುದನ್ನು ವೈದ್ಯರು ಖಂಡಿಸಿದ್ದು, ಈ ರೀತಿಯ ಹೇಳಿಕೆಗಳು ಜನರನ್ನು ಸೋಂಕಿನ ತಪಾಸಣೆಯಿಂದ ದೂರವುಳಿಯುವಂತೆ ಪ್ರೇರಣೆ ನೀಡುತ್ತವೆ ಎಂದಿದ್ದಾರೆ. ಇದನ್ನು ಕೇಳಿದ ನಂತರ ಹಲವರು ಸೋಂಕು ತಗುಲಿದ್ದರೂ ಮನೆಯಲ್ಲಿಯೇ ಕೂರುತ್ತಾರೆ. ಅವರು ಆಸ್ಪತ್ರೆಗೆ ಬರುವ ಅಷ್ಟು ಹೊತ್ತಿಗೆ ಎಲ್ಲವೂ ಮಿತಿ ಮೀರಿರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
ಕೊರೊನಿಲ್ಗೆ ಯಾವುದೇ ಅನುಮತಿ ಇಲ್ಲ; ಮತ್ತೊಮ್ಮೆ ಮುನ್ನೆಲೆಗೆ ಬಂದ ಚರ್ಚೆ
ಆಯುರ್ವೇದದ ಸಲಹೆ ನೀಡಿದ ವಿ.ಕೆ.ಪೌಲ್
ಮಂಗಳವಾರ ನೀತಿ ಆಯೋಗ (ಆರೋಗ್ಯ)ದ ಸದಸ್ಯ ಡಾ.ವಿ.ಕೆ ಪೌಲ್ ಅವರು ದೇಶದಲ್ಲಿ ಕೊರೊನಾ ಪ್ರಕರಣಗಳ ಕುರಿತು ವಿವರ ನೀಡುವ ಸಂದರ್ಭ, ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದ್ದು, ಕೊರೊನಾ ಪ್ರಕರಣಗಳು ಮಿತಿ ಮೀರುತ್ತಿವೆ. ಈ ಸಂದರ್ಭ ಜನರು ಉತ್ತಮ ನಡಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದರು. ಜೊತೆಗೆ ನಿಮಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ, ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಅವರು ನೀಡಿದ ಸಲಹೆಗಳನ್ನು ಪಾಲಿಸಿ ಸೋಂಕಿನ ವಿರುದ್ಧ ಹೋರಾಡಿ ಎಂದು ಕರೆ ನೀಡಿದ್ದರು.
"ಸರ್ಕಾರದ ಮಾರ್ಗಸೂಚಿಯಲ್ಲಿ ಆಯುರ್ವೇದ"
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿಯ ಅವಶ್ಯಕತೆಯಿದೆ. ಸರ್ಕಾರ ಆಯುರ್ವೇದ ಮತ್ತು ಆಯುಷ್ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿ) ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ ಎಂದು ಹೇಳಿಕೆ ನೀಡಿದ್ದರು.
ಆಯುಷ್ ವೈದ್ಯರು 'ರೋಗಕ್ಕೆ ಈ ಔಷಧ ಪರಿಹಾರ' ಎನ್ನುವ ಜಾಹೀರಾತು ನೀಡುವಂತಿಲ್ಲ: ಸುಪ್ರೀಂಕೋರ್ಟ್
"ದಿನಕ್ಕೆ ಎರಡು ಬಾರಿ ಚ್ಯವನ್ ಪ್ರಾಶ್ ಸೇವಿಸಿ"
ದಿನಕ್ಕೆ ಎರಡು ಬಾರಿ ಚ್ಯವನ್ ಪ್ರಾಶ್ ಸೇವಿಸಲು ಶಿಫಾರಸ್ಸು ಮಾಡಲಾಗಿದೆ. ದಿನಕ್ಕೆ ಒಂದು ಬಾರಿ ಅರಿಶಿಣ ಬೆರೆಸಿರುವ ಹಾಲು ಕುಡಿಯಿರಿ. ಹಲವು ಸರ್ವೇ ಸಮೀಕ್ಷೆಗಳಿಂದ ಇದು ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿ ಎಂದು ತಿಳಿದುಬಂದಿದೆ. ತುಳಸಿ, ಚಕ್ಕೆ, ಕರಿಮೆಣಸನ್ನು ಬೆರೆಸಿದ ಬಿಸಿ ನೀರನ್ನು ಸೇವಿಸಿ. ಜೊತೆಗೆ ಯೋಗ ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪೌಲ್ ಹೇಳಿದ್ದರು. ಜನರು ಇದನ್ನು ಪಾಲಿಸಬೇಕು. ಸರ್ಕಾರ ಹಾಗೂ ಆರೋಗ್ಯ ಸಚಿವಾಲಯದಿಂದ ಈ ಕ್ರಮಗಳನ್ನು ಅನುಸರಿಸಲು ಕೋರಲಾಗಿದೆ ಎಂದು ತಿಳಿಸಿದ್ದರು.
ಸಲಹೆಗೆ ವೈದ್ಯರ ವಿರೋಧ
ಆದರೆ ವೈದ್ಯರು ಈ ಸಲಹೆಗಳನ್ನು ಖಂಡಿಸಿದ್ದಾರೆ. "ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಸೋಂಕು ಬಂದರೆ ಆಸ್ಪತ್ರೆಗೆ ಹೋಗಬೇಡಿ ಎಂದು ಹೇಳಿದರೆ ಏನರ್ಥ? ಆಯುರ್ವೇದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಾದರೆ ಲಸಿಕೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಏನಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇನ್ ಮಾಜಿ ಅಧ್ಯಕ್ಷ ಡಾ. ರಾಜನ್ ಶರ್ಮಾ ವಿರೋಧಿಸಿದ್ದಾರೆ.