ಪಾಕಿಸ್ತಾನ ತಕ್ಕ ಶಿಕ್ಷೆ ಅನುಭವಿಸಲಿದೆ: ನಿರ್ಮಲಾ ಸೀತಾರಾಮ್
ಜಮ್ಮು ಕಾಶ್ಮೀರ, ಫೆಬ್ರವರಿ 12: ಸುಂಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ಸೈನಿಕರು ಮತ್ತು ನಾಗರೀಕರನ್ನು ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದರು.
ಜಮ್ಮುವಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಸಚಿವೆ, ವೈದ್ಯರು ಮತ್ತು ಮಿಲಿಟರಿ ಅಧಿಕಾರಿಗಳಿಂದ ಗಾಯಾಳುಗಳ ಆರೋಗ್ಯ ಮಾಹಿತಿ ಪಡೆದರು ಹಾಗೂ ಅವರ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.
ನಿನ್ನೆ ಜಮ್ಮುವಿನ ಹೊರ ವಲಯದ ಸಂಜುವಾನ್ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ನಾಗರೀಕ ಸೇರಿ 6 ಮಂದಿ ಸೇನಾ ಅಧಿಕಾರಿಗಳು ಹುತಾತ್ಮರಾಗಿ, 12 ಮಂದಿ ಗಾಯಗೊಂಡಿದ್ದರು. ಉಗ್ರರ ವಿರುದ್ಧ ಸೇನೆ ನಡೆಸಿದ ಪ್ರತಿದಾಳಿಯಲ್ಲಿ 3 ಉಗ್ರರು ಸಾವನ್ನಪ್ಪಿದರು.
ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿ
ಸೇನಾ ಶಿಬಿರದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮಹಬೂಬಾ ಮಫ್ತಿ ಅವರನ್ನು ಭೇಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆಯ ದಾಳಿ ಹಾಗೂ ಜಮ್ಮು ಕಾಶ್ಮೀರ ಭದ್ರತೆ ಬಗ್ಗೆ ಚರ್ಚಿಸಿದರು.
ಪಾಕಿಸ್ತಾನ ರಕ್ಷಿತ ಅಜರ್ ಮಹಮೂದ್ ಕೈವಾಡ
ಆ ನಂತರ ಸುದ್ದಿಗೋಷ್ಠಿ ನಡೆಸಿ ದಾಳಿ ಕುರಿತು ಮಾಹಿತಿ ನೀಡಿದ ನಿರ್ಮಲಾ ಅವರು ಈ ದಾಳಿಯ ಹಿಂದೆ ಜೈಷಿ ಮಹಮದ್ ಉಗ್ರ ಸಂಘಟನೆಯ ಕೈವಾಡ ಇದ್ದು, ಈ ಸಂಘಟನೆಯ ಹಿಂದೆ ಭಯೋತ್ಪಾದಕ ಅಜರ್ ಮಹಮೂದ್ ಇದ್ದಾನೆ ಈತನಿಗೆ ಪಾಕಿಸ್ತಾನದ ನಿವಾಸಿ ಆಗಿದ್ದು ಆತನಿಗೆ ಪಾಕಿಸ್ತಾನ ರಕ್ಷಣೆ ನೀಡಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಮತ್ತೋರ್ವ ಸೈನಿಕ ಬಲಿ
ಭಯೋತ್ಪಾದನೆಯನ್ನು ವಿಸ್ತರಿಸಲು ಪಾಕ್ ಸಹಾಯ
ದಾಳಿ ಮಾಡಿರುವ ಉಗ್ರರಿಗೆ ಪಾಕಿಸ್ತಾನದಲ್ಲಿ ಕೂತು ಸೂಚನೆ ನೀಡಿರುವುದು ಸ್ಪಷ್ಟಗೊಂಡಿದೆ. ಆ ಬಗ್ಗೆ ಸಾಕ್ಷ್ಯಗಳನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆ ಪರೀಕ್ಷಿಸಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಜಮ್ಮು ಕಾಶ್ಮೀರದ ದಕ್ಷಿಣ ಭಾಗಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ಭಯೋತ್ಪಾದಕರು ಒಳನುಸುಳುವಿಕೆಗೆ ಸಹಾಯ ಮಾಡಲು ಬೇಕೆಂದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.
ಎಷ್ಟು ಬಾರಿ ಸಾಕ್ಷ್ಯಗಳನ್ನು ನೀಡಲಾಗುತ್ತದೆ
ಪಾಕಿಸ್ತಾನಕ್ಕೆ ತನ್ನ ತಪ್ಪಿನ ಸಾಕ್ಷ್ಯಗಳನ್ನು ನೀಡುವುದು ನಿರಂತರ ಪ್ರಕ್ರಿಯೆ ಆಗಿಬಿಟ್ಟಿದೆ. ಆದರೆ ಅದು ಈ ಬಾರಿ ಮಾಡಿರುವ ದುಸ್ಸಾಹಸಕ್ಕೆ ತಕ್ಕ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ ಎಂದಿರುವ ಅವರು ಭಾರತೀಯ ಸೇನೆಯು ಹಿಂತಿರುಗಿ ದಾಳಿ ಮಾಡಲಿದೆ ಎಂಬ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಇಲ್ಲಿವರೆಗೂ ಸುಮ್ಮನಿರುವ ಪಾಕಿಸ್ತಾನ
ಈ ದಾಳಿಯ ಕುರಿತು ಅದರ ಹಿಂದಿನ ವ್ಯಕ್ತಿಗಳ ಕುರಿತು ಎಲ್ಲ ಸಾಕ್ಷ್ಯಗಳನ್ನು ಒಟ್ಟು ಮಾಡಲಾಗಿದ್ದು ಆ ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗುತ್ತದೆ. ಈ ಹಿಂದೆ ಕೂಡಾ ಎಷ್ಟೋ ಬಾರಿ ಸಾಕ್ಷ್ಯಗಳ ಕಡತಗಳನ್ನು ರವಾನಿಸಿದ್ದರೂ ಕೂಡ ಪಾಕಿಸ್ತಾನ ಏನೂ ಮಾಡದೇ ಇರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.