ನಿರ್ಮಲಾ ಸೀತಾರಾಮನ್ಗೆ ಯಾವ ಅರ್ಥಶಾಸ್ತ್ರವೂ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ನವೆಂಬರ್ 30: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯಾಸ್ತ್ರಗಳನ್ನು ತೂರುವ ಸಂಸದ ಸುಬ್ರಮಣಿಯನ್ ಸ್ವಾಮಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕತೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದ ಸಚಿವರ ವಿರುದ್ಧ ಹರಿಹಾಯ್ದಿರುವ ಸುಬ್ರಮಣಿಯನ್ ಸ್ವಾಮಿ, 'ನಿರ್ಮಲಾ ಅವರಿಗೆ ಯಾವ ಅರ್ಥಶಾಸ್ತ್ರವೂ ತಿಳಿದಿಲ್ಲ' ಎಂದು ಟೀಕಿಸಿದ್ದಾರೆ.
ವಿತ್ತೀಯ ಕೊರತೆ ವಾರ್ಷಿಕ ಗುರಿ 7 ತಿಂಗಳಲ್ಲೇ ಮುಟ್ಟಿದ ಭಾರತ
'ನೀವು ಆರ್ಥಿಕತೆಯನ್ನು ಒಳ್ಳೆಯ ಕಣ್ಣುಗಳಿಂದ ಗಮನಿಸಿದಾಗ ಆರ್ಥಿಕತೆಯು ತುಸು ಕುಸಿದಿರಬಹುದಾದ ಸ್ಥಿತಿಯನ್ನು ನೀವು ನೋಡುತ್ತೀರಿ. ಆದರೆ ಇದು ಆರ್ಥಿಕ ಹಿಂಜರಿತ ಅಲ್ಲ. ಎಂದಗೂ ಆರ್ಥಿಕ ಹಿಂಜರಿತ ಬರಲಾರದು' ಎಂದು ನಿರ್ಮಲಾ ಸೀತಾರಾಮನ್ ನ.27ರಂದು ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ, ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿಯೇ ಇಲ್ಲ. ಆರ್ಥಿಕ ಪ್ರಗತಿಯಲ್ಲಿ ತುಸು ಹಿನ್ನಡೆಯಾಗಿದೆಯಷ್ಟೇ ಎನ್ನುವ ಮೂಲಕ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಸಮರ್ಥಿಸಿಕೊಂಡಿದ್ದರು.
ಜಿಡಿಪಿ ಶೇ 1.5ಕ್ಕೆ ಕುಸಿದಿದೆ
ಎರಡು ದಿನಗಳ ಬಳಿಕ 'ಹಫ್ಪೋಸ್ಟ್ ಇಂಡಿಯಾ' ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಸುಬ್ರಮಣಿಯನ್ ಸ್ವಾಮಿ, 'ಇಂದಿನ ವಾಸ್ತವವಾದ ಬೆಳವಣಿಗೆಯ ದರ ಎಷ್ಟಿದೆಯೆಂದು ನಿಮಗೆ ಗೊತ್ತೇ? ಅವರು ಆರ್ಥಿಕ ಬೆಳವಣಿಗೆಯು ಶೇ 4.8ಕ್ಕೆ ಇಳಿದಿದೆ ಎನ್ನುತ್ತಾರೆ. ಆದರೆ ನಾನು ಹೇಳುತ್ತೇನೆ, ಅದು ಶೇ 1.5ಕ್ಕೆ ಕುಸಿದಿದೆ' ಎಂದು ಹೇಳಿದ್ದರು. ಶುಕ್ರವಾರ ಸಂಜೆ ಜಿಡಿಪಿಯ ಎರಡನೆಯ ತ್ರೈಮಾಸಿಕ ವರದಿ ಪ್ರಕಟವಾಗಿದ್ದು, ದೇಶದ ಜಿಡಿಪಿ ದರ ಶೇ 4.5ಕ್ಕೆ ಕುಸಿತವಾಗಿದೆ ಎಂದು ತಿಳಿಸಲಾಗಿತ್ತು.
ನಿರ್ಮಲಾಗೆ ಉತ್ತರವೇ ಗೊತ್ತಿರೊಲ್ಲ
'ನೀವು ಸುದ್ದಿಗೋಷ್ಠಿಗಳನ್ನು ಗಮನಿಸಿದರೆ, ನಿರ್ಮಲಾ ಅವರು ಉತ್ತರ ನೀಡಲು ಮೈಕ್ಅನ್ನು ನಾಗರಿಕ ಸೇವಾ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ. ದೇಶದ ಇಂದಿನ ಸಮಸ್ಯೆ ಏನು? ಕಳಪೆ ಬೇಡಿಕೆ. ಪೂರೈಕೆ ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ನಿರ್ಮಲಾ ಏನು ಮಾಡುತ್ತಾರೆ? ಅವರು ಕಾರ್ಪೊರೇಟ್ಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುತ್ತಾರೆ. ಕಾರ್ಪೊರೇಟ್ಗಳು ಪೂರೈಕೆಯಿಂದ ತುಂಬಿಕೊಂಡಿದ್ದಾರೆ. ಅವರು ಅದನ್ನು ತಮ್ಮ ಸಾಲಗಳನ್ನು ಮನ್ನಾ ಮಾಡಿಸಿಕೊಳ್ಳಲು ಮಾತ್ರ ಅದನ್ನು ಬಳಸಿಕೊಳ್ಳುತ್ತಾರೆ. ಅದನ್ನೇ ಅವರು ಮಾಡಿರುವುದು' ಎಂದು ಕಾರ್ಪೊರೇಟ್ ತೆರಿಗೆ ಇಳಿಸಿದ ನೀತಿಯನ್ನು ಟೀಕಿಸಿದರು.
ಸತತ ಏಳನೇ ತ್ರೈಮಾಸಿಕ ಅವಧಿಯಲ್ಲೂ ನೆಲಕಚ್ಚಿದ GDP
ಮೋದಿಗೆ ಏನೂ ಗೊತ್ತಿಲ್ಲ
'ಸಮಸ್ಯೆಯ ಇನ್ನೊಂದು ಪ್ರಮುಖ ಅಂಶವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರು ಅವರಿಗೆ ಸತ್ಯವನ್ನು ಹೇಳಲು ಸಿಕ್ಕಾಪಟ್ಟೆ ಭಯಬೀಳುತ್ತಾರೆ. ಪ್ರಧಾನಿಯವರಿಗೂ ಅದರ ಬಗ್ಗೆ ಏನೂ ಗೊತ್ತಿಲ್ಲ. 'ಬೆಳವಣಿಗೆ ದರ ಅದ್ಭುತವಾಗಿದೆ' ಎಂದೇ ಅವರಿಗೆ ಹೇಳುತ್ತಾರೆ' ಎಂದು ಸ್ವಾಮಿ ವ್ಯಂಗ್ಯವಾಡಿದರು.
ಮೋದಿಗೆ ನಾನು ಬೇಕಾಗಿಲ್ಲ
ಹಣಕಾಸು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಾರ್ವರ್ಡ್ನಲ್ಲಿ ತರಬೇತಿ ಹೊಂದಿರುವ ಅರ್ಥಶಾಸ್ತ್ರ ಪರಿಣತ ಸುಬ್ರಮಣಿಯನ್ ಸ್ವಾಮಿ ಅವರಿಗೆ ಎರಡು ಅವಧಿಯಲ್ಲಿಯೂ ಯಾವುದೇ ಖಾತೆ ದೊರೆತಿಲ್ಲ. ಬದಲಾಗಿ ಅವರನ್ನು ಸರ್ಕಾರದ ಚಟುವಟಿಕೆಗಳಿಂದ ದೂರವೇ ಇರಿಸಲಾಗಿದೆ. 'ಅವರಿಗೆ ನಾನು ಬೇಕಾಗಿಲ್ಲ' ಎಂದು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದ ಮೋದಿ ಕುರಿತಾಗಿ ಸ್ವಾಮಿ ಹೇಳಿದ್ದಾರೆ. 'ಅವರಿಗೆ ತಿರುಗಿ ತಮ್ಮ ಬಳಿ ಮಾತನಾಡುವಂತಹ ಯಾವುದೇ ಸಚಿವರು ಬೇಕಾಗಿಲ್ಲ. ಸಾರ್ವಜನಿಕವಾಗಿ ಮಾತ್ರವಲ್ಲ, ಖಾಸಗಿ ಸಂಪುಟ ಸಭೆಗಳಲ್ಲಿ ಕೂಡ' ಎಂದು ಸ್ವಾಮಿ ಹೇಳಿದ್ದಾರೆ.
ವಿತ್ತಸಚಿವೆಗೆ ಅರ್ಥಶಾಸ್ತ್ರ ಗೊತ್ತಿಲ್ಲ, ಅದೇ ಸಮಸ್ಯೆ: ಸುಬ್ರಮಣಿಯನ್ ಸ್ವಾಮಿ