ಯುಕೆಯಿಂದ ನೀರವ್ ಮೋದಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ ಭಾರತ
ಲಂಡನ್, ಆಗಸ್ಟ್ 03: ಸಾವಿರಾರು ಕೋಟಿ ಮೌಲ್ಯದ ಪಿಎನ್ ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರನ್ನು ಗಡೀಪಾರು ಮಾಡಿ, ಭಾರತಕ್ಕೆ ಹಸ್ತಾಂತರಿಸುವಂತೆ ಯುನೈಟೆಡ್ ಕಿಂಗ್ ಡಮ್ ಗೆ ಭಾರತದಿಂದ ಅಧಿಕೃತ ಮನವಿ ಸಲ್ಲಿಸಲಾಗಿದೆ.
ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ 29ಕ್ಕೂ ಅಧಿಕ ಮಂದಿ ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶದಿಂದ ಪರಾರಿಯಾಗಿದ್ದಾರೆ. ನೀರವ್ ಮೋದಿ ಅವರ ಹಸ್ತಾಂತರ ಕುರಿತಂತೆ ರಾಜತಾಂತ್ರಿಕ ಕಚೇರಿಗೆ ಅಧಿಕೃತವಾಗಿ ಮನವಿ ಪತ್ರ ನೀಡಲಾಗಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್, ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ನಿಂದ ಎರಡು ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ ಎಂದರು.
ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆ
2002ರಿಂದ ಇಲ್ಲಿ ತನಕ ಈ ರೀತಿ 29 ಬಾರಿ ಮನವಿ ಸಲ್ಲಿಸಲಾಗಿದ್ದು, ಯುಕೆ ಕೇವಲ 9 ಮನವಿಗಳನ್ನು ಮಾತ್ರ ತಿರಸ್ಕರಿಸಿದೆ. ಮೂರು ಪ್ರಕರಣಗಳಲ್ಲಿ ಆರೋಪಿಗಳಿಗೆ ಯುಕೆ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿಲ್ಲ.
ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್
ಮಲ್ಯ ಪ್ರಕರಣ ಸೇರಿ ಮಿಕ್ಕ 15 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಆದರೆ, ಕಳೆದ 16 ವರ್ಷಗಳಲ್ಲಿ ಸಮೀರ್ ಭಾಯಿ ವಿನುಭಾಯಿ ಪಟೇಲ್ ಅವರನ್ನು ಮಾತ್ರ ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಜನವರಿ 01, 2018ರಂದು ಭಾರತ ತೊರೆದ ನೀರವ್ ಮೋದಿ ಸದ್ಯ ಲಂಡನ್ನಿನಲ್ಲಿರುವುದು ಖಾತ್ರಿಯಾಗಿದೆ. ಮತ್ತೊಬ್ಬ ಆರೋಪಿ ಮೆಹುಲ್ ಚೋಕ್ಸಿ ಅವರು ಜನವರಿ 04ರಂದು ಭಾರತ ತೊರೆದು ಆಂಟಿಗುವಾ ಸೇರಿದ್ದಾರೆ. ಆಂಟಿಗುವಾ ಹಾಗೂ ಬರ್ಬುಡಾದ ಪೌರವತ್ವವನ್ನು 2017ರಲ್ಲೇ ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿ ಅವರ ಪಾಸ್ ಪೋರ್ಟ್ ಬಳಕೆಗೆ ವಿದೇಶಾಂಗ ಸಚಿವಾಲಯ ನಿರ್ಬಂಧ ಹೇರಿ ಫೆಬ್ರವರಿ 16,2018ರಲ್ಲಿ ಆದೇಶಿಸಿದೆ.