ನಾನೇ ಸಾಲ ಕಟ್ಟುತ್ತಿದ್ದೆ: ಪಿಎನ್ಬಿಗೆ ತಿರುಗೇಟು ನೀಡಿದ ನೀರವ್ ಮೋದಿ
ನವದೆಹಲಿ, ಫೆಬ್ರವರಿ 20: ಜುವೆಲ್ಲರಿ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ತಿರುಗೇಟು ನೀಡಿದ್ದಾರೆ. ನೀವು ಪ್ರಕರಣವನ್ನು ಸಾರ್ವಜನಿಕವಾಗಿ ಎಳೆದು ತಂದು ಸಾಲ ಕಟ್ಟುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಬ್ಯಾಂಕನ್ನೇ ಆರೋಪಿ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ.
ಫೆಬ್ರವರಿ 15/16ರಂದು ಬ್ಯಾಂಕಿನ ಆಡಳಿತ ಮಂಡಳಿಗೆ ಪತ್ರ ಬರೆದಿರುವ ನೀರವ್ ಮೋದಿ ತಮ್ಮ ಕಂಪನಿಗಳು ಬ್ಯಾಂಕಿನಿಂದ ಪಡೆದ ಮೊತ್ತ 5,000 ಕೋಟಿ ರೂಪಾಯಿಯ ಒಳಗಡೆ ಬರುತ್ತದೆ ಎಂದೂ ಹೇಳಿದ್ದಾರೆ.
ಹೆಚ್ಚಿನ ನೀರವ್ ಮೋದಿ ವಂಚನೆಗಳು ನಡೆದಿದ್ದು 2017-18ರಲ್ಲಿ: ಸಿಬಿಐ!
ಮಾಧ್ಯಮಗಳಲ್ಲಿ ಈ ಪ್ರಕರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದರಿಂದ ಫೈರ್ ಸ್ಟಾರ್ ಇಂಟರ್ನ್ಯಾಷನಲ್ ಮತ್ತು ಫೈರ್ ಸ್ಟಾರ್ ಡೈಮಂಡ್ಸ್ ಗೆ ಸೇರಿದ ಸ್ಥಳಗಳ ಮೇಲ ದಾಳಿ ನಡೆಸಿ ವಸ್ತುಗಳನ್ನೆಲ್ಲಾ ಜಪ್ತಿ ಮಾಡಲಾಗಿದೆ. ಇದರಿಂದ ಸಾಲ ಮರುಪಾವತಿ ಮಾಡುವ ನಮ್ಮ ಅವಕಾಶವನ್ನೇ ಕಿತ್ತುಕೊಳ್ಳಲಾಗಿದೆ ಎಂದು ತಮ್ಮ ಕುಟುಂಬದ ಜತೆ ದೇಶ ತೊರೆದಿರುವ ನೀರವ್ ಮೋದಿ ವಾದಿಸಿದ್ದಾರೆ.
ನೀವು ಸಾಲವನ್ನು ತುಂಬಬೇಕು ಎಂಬ ಧಾವಂತದಲ್ಲಿ ಫೆಬ್ರವರಿ 13ರಂದು ನಾನು ನೀಡಿದ ಆಫರನ್ನೂ ತಿರಸ್ಕರಿಸಿ ಸಾರ್ವಜನಿಕ ಪ್ರಕಟಣೆಗೆ ಮುಂದಾಗಿದ್ದೀರಿ. ಈ ಕ್ರಮದಿಂದ ನನ್ನ ಬ್ರ್ಯಾಂಡ್, ಉದ್ಯಮ ನೆಲಕಚ್ಚಿದೆ. ಹೀಗಾಗಿ ಈಗ ಸಾಲ ವಸೂಲಿ ಮಾಡುವ ನಿಮ್ಮ ಸಾಮರ್ಥ್ಯವೇ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಬ್ಯಾಂಕಿಗೇ ತಿರುಗೇಟು ನೀಡಿದ್ದಾರೆ.
ಇನ್ನು ಬ್ಯಾಂಕಿಗೆ 11,400 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೋದಿ, "ನಿಮ್ಮ ವಾದ ಸಂಪೂರ್ಣ ತಪ್ಪು. ನೀರವ್ ಮೋದಿ ಗ್ರೂಪ್ ನ ಸಾಲ ಕಡಿಮೆ ಇದೆ. ನೀವು ದೂರು ದಾಖಲಿಸಿದ ಮೇಲೆಯೂ ನಾನು ಈ ಪತ್ರ ಬರೆಯುತ್ತಿರುವ ಉದ್ದೇಶ ಒಂದೇ , ದಯವಿಟ್ಟು ಫೈರ್ ಸ್ಟಾರ್ ಗ್ರೂಪ್ನ ಆಸ್ತಿಗಳನ್ನು ಮಾರಿ ಅಥವಾ ಮಾರಲು ನನಗೆ ಅವಕಾಶ ಕೊಡಿ," ಎಂದು ಕೇಳಿದ್ದಾರೆ.
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
ಇದರಿಂದ ನಿಮ್ಮ ಸಾಲ ತೀರಿಸಲು ಸಹಾಯವಾಗಬಹುದು ಎಂದು ಹೇಳಿರುವ ಮೋದಿ, ಸದ್ಯ ನನ್ನ ಖಾತೆಗಳನ್ನೆಲ್ಲಾ ಸ್ಥಗಿತಗೊಳಿಸಿರುವುದರಿಂದ, ನನ್ನ ಆಸ್ತಿಗಳನ್ನು ಜಪ್ತಿ ಮಾಡಿರುವುದರಿಂದ ನನಗೆ ಆ ಅವಕಾಶ ಉಳಿದಿಲ್ಲ ಎಂದಿದ್ದಾರೆ.
ಬೈಯರ್ಸ್ ಕ್ರೆಡಿಟ್ ಫೆಸಿಲಿಟಿ ಹೆಸರಿನಲ್ಲಿ ಬ್ಯಾಂಕ್ ನಮ್ಮಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದೆ ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಸಿಬಿಐ ಮತ್ತು ಇಡಿ 5,649 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ಇದು ನಿಮ್ಮ ಸಾಲ ಕಟ್ಟಲು ಸಾಕಾಗುತ್ತದೆ. ಆದರೆ ಈ ಅವಕಾಶವನ್ನು ನೀವೀಗ ಕಳೆದುಕೊಂಡಿದ್ದೀರಿ ಎಂದಿದ್ದಾರೆ.
ಇನ್ನು ಈ ಸಾಲಕ್ಕೂ ನನ್ನ ಕುಟುಂಬಸ್ಥರಿಗೂ ಯಾವುದೇ ಸಂಬಂಧವಿಲ್ಲ ಎಂದು ಮೋದಿ ವಾದಿಸಿದ್ದಾರೆ. ದಯವಿಟ್ಟು ಪಾರದರ್ಶಕವಾಗಿರಿ ಮತ್ತು ನನ್ನ ಪ್ರಯತ್ನಗಳನ್ನು ಬೆಂಬಲಿಸಿ ಎಂದು ನೀರವ್ ಮೋದಿ ಮನವಿ ಮಾಡಿಕೊಳ್ಳುವ ಮೂಲಕ ತಮ್ಮ ಪತ್ರವನ್ನು ಅಂತ್ಯಗೊಳಿಸಿದ್ದಾರೆ.